×
Ad

ಶಿಕ್ಷಣದಲ್ಲಿ ಕೌಶಲ್ಯ ಸಹಿತ ವೃತ್ತಿ ತರಬೇತಿ ಕಡ್ಡಾಯ: ರಾಜ್ಯಪಾಲ ವಿ.ಆರ್.ವಾಲಾ

Update: 2018-07-02 18:39 IST

ಬೆಂಗಳೂರು, ಜು. 2: ‘ಶಿಕ್ಷಣವೇ ಶಕ್ತಿ’ ಎಂಬ ಅರಿವು ನನ್ನ ಸರ್ಕಾರಕ್ಕಿದೆ. ಶಿಕ್ಷಣದಲ್ಲಿ ಕೌಶಲ್ಯ ಸಹಿತ ವೃತ್ತಿ ತರಬೇತಿಯನ್ನು ಕಡ್ಡಾಯಗೊಳಿಸಲು ಚಿಂತಿಸಲು ನನ್ನ ಸರಕಾರ ಆದ್ಯತೆ ನೀಡಲಿದೆ ಎಂದು ರಾಜ್ಯಪಾಲ ವಿ.ಆರ್.ವಾಲಾ ಅವರು ಘೋಷಿಸಿದ್ದಾರೆ.

ಸೋಮವಾರ ವಿಧಾನ ಮಂಡಲ ಉಭಯ ಸದನಗಳ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಅವರು, ಸರ್ವರಿಗೂ ಶಿಕ್ಷಣ, ಆರೋಗ್ಯ, ವಸತಿ ಸೌಲಭ್ಯ ಕಲ್ಪಿಸುವುದು ನನ್ನ ಸರಕಾರದ ಆದ್ಯತೆ. ಶಿಕ್ಷಣದಲ್ಲಿ ವೃತ್ತಿ ಕೌಶಲ್ಯವನ್ನು ಅಳವಡಿಸಿ ಉದ್ಯೋಗಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದರು.

ಸಮಾಜದ ಎಲ್ಲ ವರ್ಗದ ಅವಕಾಶ ವಂಚಿತರು, ಹಿಂದುಳಿದವರು, ಮಹಿಳೆಯರು, ಯುವ ಜನಾಂಗ ಹಾಗೂ ರೈತರ ಕಲ್ಯಾಣಕ್ಕೆ ಕಂಕಣಬದ್ಧ. ಹಳ್ಳಿ ಮತ್ತು ಪಟ್ಟಣದ ಅಭಿವೃದ್ಧಿಗೆ ಸರಿಸಮಾನವಾದ ಯೋಜನೆಗಳನ್ನು ರೂಪಿಸಲಾಗುವುದು ಎಂದು ಹೇಳಿದರು.

ಜ್ಞಾನ ಮಾರ್ಗಸೂಚಿ: ಹದಿನೈದನೆ ವಿಧಾನಸಭೆಗೆ ನೂರಕ್ಕೂ ಹೆಚ್ಚು ಶಾಸಕರು ಮೊದಲ ಬಾರಿಗೆ ಪ್ರವೇಶಿಸಿದ್ದು, ಅಷ್ಟೇ ಸಂಖ್ಯೆಯ ಅನುಭವಿಗಳಿದ್ದಾರೆ. ಹೊಸ ಮುಖಗಳ ಈ ವೇದಿಕೆ ರಾಜ್ಯದ ಶ್ರೇಯೋಭಿವೃದ್ಧಿಗೆ ಹೊಸ ಚಿಂತನೆ ಹಾಗೂ ಹೊಸ ಯೋಜನೆ ಹೊರ ಹೊಮ್ಮಲಿ. ಅನುಭವಿಗಳ ಜ್ಞಾನ ಹೊಸ ಸದಸ್ಯರಿಗೆ ಮಾರ್ಗಸೂಚಿ ಆಗಲಿ ಎಂದು ಹಾರೈಸಿದರು.

ಅಭಿವೃದ್ಧಿ ಯೋಜನೆಯ ಪ್ರಯೋಜನಗಳು ಪ್ರತಿಯೊಬ್ಬ ನಾಗರಿಕರಿಗೆ ತಲುಪುವಂತೆ ಹಾಗೂ ಸರ್ವರ ವಿಕಾಸ ಸಾಧಿಸುವ ಗುರಿ ಹೊಂದಿದ್ದು, ತೃಪ್ತಿಕರವಾದ ರೀತಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಿಕೊಂಡು ಬರಲಾಗುತ್ತಿದೆ. ಮುಂದಿನ ಎರಡು ವರ್ಷಗಳಲ್ಲಿ ಪೊಲೀಸ್ ತರಬೇತಿ ಸಾಮರ್ಥ್ಯ ಹೆಚ್ಚಿಸಲಾಗುವುದು ಎಂದರು.

ಅವರೇ ಹೊಣೆಗಾರರು: ಎಲ್ಲ ಮುಖ್ಯಪೇದೆ ಮತ್ತು ಪೊಲೀಸ್ ಪೇದೆಗಳಿಗೆ ಅವರ ಠಾಣಾ ವ್ಯಾಪ್ತಿಯಲ್ಲಿ ಒಂದೊಂದು ಭೌಗೊಳಿಕ ಸರಹದ್ದು ನಿಗದಿಪಡಿಸಿ, ಅವರು ತಮ್ಮ ಸರಹದ್ದಿನ ಸಂಪೂರ್ಣ ಹೊಣೆಗಾರರಾಗಿರುತ್ತಾರೆ ಎಂದ ಅವರು, ಮುಂದಿನ ಐದು ವರ್ಷಗಳಲ್ಲಿ ಮಹಿಳಾ ಪ್ರಾತಿನಿಧ್ಯವನ್ನು ಹೆಚ್ಚಿಸಲಾಗುತ್ತದೆ. ಎಲ್ಲ ಪೊಲೀಸ್ ಆಯುಕ್ತರ ಕಚೇರಿಗಳಲ್ಲಿ ನಿರ್ಭಯ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಪೊಲೀಸ್ ಠಾಣೆ ಹಾಗೂ ಕಚೇರಿಗಳಲ್ಲಿ ಮಹಿಳೆಯರಿಗೆ ಶೌಚಾಲಯ ನಿರ್ಮಾಣ ಮಾಡುವುದರ ಜತೆಗೆ ಅಗತ್ಯ ಮೂಲಸೌಲಭ್ಯ ಕಲ್ಪಿಸಲಾಗುವುದು ಎಂದರು. 

ಹಾಲಿನ ಉತ್ಪಾದನೆಯಲ್ಲಿ ದೇಶದಲ್ಲಿ ಎರಡನೆ ಸ್ಥಾನ ಹಾಗೂ ಕೋಳಿ ಮೊಟ್ಟೆ ಉತ್ಪಾದನೆಯಲ್ಲಿ ಏಳನೆ ಸ್ಥಾನವನ್ನು, ಮಾಂಸ ಉತ್ಪಾದನೆಯಲ್ಲಿ 11ನೆ ಸ್ಥಾನವನ್ನು ರಾಜ್ಯ ಹೊಂದಿದ್ದು, ಸದ್ಯದಲ್ಲಿಯೇ ‘ಮೇವು ಭದ್ರತಾ ನೀತಿ’ಯನ್ನು ರೂಪಿಸಲಿದೆ ಎಂದರು.

ಚರ್ಮ ಸಂಸ್ಕರಣೆ ಮತ್ತು ಹದ ಮಾಡುವ ಕೇಂದ್ರವನ್ನು ಸ್ಥಾಪನೆ ಮಾಡಲಾಗುವುದು. ಕೆರೆಗಳನ್ನು ತುಂಬಿಸುವ ಯೋಜನೆಯನ್ನು ರಾಜ್ಯದಲ್ಲಿ ವಿಸ್ತರಿಸಿ, ಕಾಲುವೆಗಳಲ್ಲಿ ನೀರಿನ ಹರಿವನ್ನು ಮಾಪನ ಮಾಡಲು ಎಸ್‌ಸಿಎಡಿಎ ತಂತ್ರಜ್ಞಾನವನ್ನು ಅಳವಡಿಸಲಾಗುವುದು.

ರಾಜ್ಯದಲ್ಲಿ 1,101 ಚ.ಕಿ.ಮೀ. ಅರಣ್ಯ ವ್ಯಾಪ್ತಿ ವಿಸ್ತರಣೆಯಾಗಿದ್ದು, ಹುಲಿ, ಆನೆ, ಚಿರತೆ, ಸಿಂಗಳೀಕಗಳ ಸಂಖ್ಯೆಯ ವಿಷಯದಲ್ಲಿ ರಾಜ್ಯ ಮೊದಲ ಸ್ಥಾನದಲ್ಲಿದೆ ಎಂದು ಅವರು, ರಾಜ್ಯವನ್ನು ರಾಷ್ಟ್ರದಲ್ಲಿಯೇ ಒಂದು ಮಾದರಿ ರಾಜ್ಯವನ್ನಾಗಿ ಮಾಡಲು ಎಲ್ಲರೂ ಒಗ್ಗೂಡಿ ಕಾರ್ಯನಿರ್ವಹಿಸಬೇಕು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News