ಮಾಣಿಪ್ಪಾಡಿ ವರದಿ: ಸಿಬಿಐ ತನಿಖೆ ವಿಚಾರದಲ್ಲಿ ಗೊಂದಲ-ಗದ್ದಲ

Update: 2018-07-12 14:35 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಜು.12: ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಾಗಿದ್ದ ಅನ್ವರ್ ಮಾಣಿಪ್ಪಾಡಿ ಸಲ್ಲಿಸಿದ್ದ ವರದಿಯ ಸಂಬಂಧ ಸಿಬಿಐ ತನಿಖೆಗೆ ಒಪ್ಪಿಕೊಂಡ ಅಲ್ಪಸಂಖ್ಯಾತರ ಕಲ್ಯಾಣ ಮತ್ತು ವಕ್ಫ್ ಸಚಿವ ಝಮೀರ್ ಅಹಮ್ಮದ್ ಖಾನ್ ತಕ್ಷಣವೇ ಮಾತು ಬದಲಾಯಿಸಿದ ಘಟನೆ ವಿಧಾನಪರಿಷತ್‌ನಲ್ಲಿ ನಡೆಯಿತು.

ಗುರುವಾರ ವಿಧಾನ ಪರಿಷತ್‌ನಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಸದಸ್ಯ ಅರುಣ್ ಶಹಾಪುರ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಂದರ್ಭದಲ್ಲಿ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಾಗಿದ್ದ ಅನ್ವರ್ ಮಾಣಿಪ್ಪಾಡಿ ಅವರು ವಕ್ಫ್ ಆಸ್ತಿ ದುರುಪಯೋಗ ನಡೆದಿದೆ ಎನ್ನುವ ಕುರಿತು ವರದಿ ಸಲ್ಲಿಸಿದ್ದಾರೆ. ಅವರು ಅಧ್ಯಕ್ಷರಾಗಿದ್ದಾಗ ವರದಿ ಕೊಟ್ಟಿರಲಿಲ್ಲ. ಒಂದೂವರೆ ವರ್ಷದ ನಂತರ ವರದಿ ಕೊಟ್ಟಿದ್ದಾರೆ. ಆಗ ನಿಮ್ಮದೇ ಸರಕಾರವಿತ್ತು. ನೀವು ಯಾಕೆ ಕ್ರಮಕೈಗೊಳ್ಳಲಿಲ್ಲ. ಸದಾನಂದಗೌಡರು ಮುಖ್ಯಮಂತ್ರಿಗಳಾಗಿದ್ದರು. ವರದಿಯಲ್ಲಿ ಸತ್ಯಾಂಶವಿದ್ದಿದ್ದರೆ ಕ್ರಮ ಕೈಗೊಳ್ಳುತ್ತಿದ್ದರು ಎಂದು ಹೇಳಿದರು.

ಅನ್ವರ್ ಮಾಣಿಪ್ಪಾಡಿ ಅವರು 2012ರ ಮಾ.26ರಂದು ಸಲ್ಲಿಸಿದ್ದ ವರದಿಯ ಮೇಲೆ ಕಾನೂನು ಇಲಾಖೆ ಅಭಿಪ್ರಾಯದೊಂದಿಗೆ ಅಡ್ವೊಕೇಟ್ ಜನರಲ್ ಅವರ ಅಭಿಪ್ರಾಯ ಪಡೆದು 2016ರ ಮಾ.3ರಂದು ಸಚಿವ ಸಂಪುಟದ ಮುಂದೆ ಮಂಡಿಸಲಾಯಿತು. ಸಚಿವ ಸಂಪುಟ ಆಯೋಗದ ಶಿಫಾರಸುಗಳನ್ನು ತಿರಸ್ಕರಿಸಿದೆ ಎಂದರು.

ಮಾಣಿಪ್ಪಾಡಿ ವರದಿಯಲ್ಲಿ ಸತ್ಯಾಂಶ ಇದ್ದಿದ್ದರೆ ನೀವು ಸಿಬಿಐಗೆ ವಹಿಸಬಹುದಿತ್ತು, ಏಕೆ ವಹಿಸಲಿಲ್ಲ? ಏಕೆ ತನಿಖೆ ನಡೆಸಲಿಲ್ಲ? ಎಂದು ವಿರೋಧ ಪಕ್ಷದವರನ್ನೇ ಪ್ರಶ್ನಿಸಿದರು. ಆಗ ವಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ, ಅರುಣ್ ಶಹಾಪುರ್, ನಾರಾಯಣಸ್ವಾಮಿ, ಆ ಕೆಲಸವನ್ನು ನೀವು ಮಾಡಿ ಎಂದು ಹೇಳಿದರು. ಆಯಿತು, ನಾವು ಮಾಡುತ್ತೇವೆ. ಸಿಬಿಐಗೆ ಕೊಡುತ್ತೇನೆ ಎಂದು ಝಮೀರ್ ಹೇಳಿದಾಗ, ಪ್ರತಿಪಕ್ಷದ ಸದಸ್ಯರು ಮೇಜು ಕುಟ್ಟಿ ಸ್ವಾಗತಿಸಿದರು. ಸಭಾಪತಿ ಹೊರಟ್ಟಿ ಅವರು ಆಯಿತು ಬಿಡಿ ಅವರು ಒಪ್ಪಿದ್ದಾರಲ್ಲ ಎಂದು ಮುಂದಿನ ಪ್ರಶ್ನೆ ಕೈಗೆತ್ತಿಕೊಂಡರು. ನಂತರ ಜಬ್ಬಾರ್‌ ಖಾನ್ ಹೊನ್ನಾಳಿ ಅವರು, ಪ್ರಕರಣ ನ್ಯಾಯಾಲಯದಲ್ಲಿದೆ. ಹಾಗೆ ಮಾಡಲು ಬರುವುದಿಲ್ಲ ಎಂದರು.

ಬಳಿಕ ಯು.ಟಿ.ಖಾದರ್ ಅವರು ಝಮೀರ್ ಅಹಮ್ಮದ್ ಬಳಿ ಬಂದು ಮಾತನಾಡಿದರು. ನಂತರ ಮಾತನಾಡಿಸಿದ ಝಮೀರ್ ಅಹಮ್ಮದ್ ಅವರು, ನಾನು ಹಾಗೆ ಹೇಳಲಿಲ್ಲ, ನೋಡುತ್ತೇನೆ ಎಂದು ಹೇಳಿದೆ, ಬೇಕಾದರೆ ಕಡತವನ್ನು ತೆಗೆಸಿ ನೋಡಿ ಎಂದು ಹೇಳಿದರು. ಇದಕ್ಕೆ ಪ್ರತಿಪಕ್ಷದವರು ಆಕ್ಷೇಪ ವ್ಯಕ್ತಪಡಿಸಿದಾಗ ಝಮೀರ್ ಅಹಮ್ಮದ್‌ ಖಾನ್ ಮತ್ತೆ ಸಮಜಾಯಿಷಿ ನೀಡಿದರು. ನಾನು ಸಿಬಿಐಗೆ ಕೊಡುತ್ತೇನೆ ಎಂದು ಹೇಳಲಿಲ್ಲ. ನೋಡುತ್ತೇನೆ ಅಂತಾ ಮಾತ್ರ ಹೇಳಿದ್ದು, ಮಾಡುತ್ತೇನೆ ಅಂತ ಹೇಳಲಿಲ್ಲ ಎಂದು ಹೇಳಿದರು. ಆಗ ಪ್ರತಿಪಕ್ಷದವರು ಸಭಾಪತಿಯವರ ಕಡೆ ತಿರುಗಿ ನೋಡಿ ಇವರೇನು ಹೀಗೆ ಹೇಳ್ತಿದ್ದಾರೆ ಅಂತ ಆಕ್ಷೇಪ ವ್ಯಕ್ತಪಡಿಸಿದಾಗ ಝಮೀರ್ ಏನು ಹೇಳಿದರೆಂದು ಕಡತ ಪರಿಶೀಲಿಸಿ ಹೇಳುತ್ತೇನೆ. ಇದನ್ನು ಇಲ್ಲಿಗೆ ಮುಗಿಸಿ ಎಂದು ಚರ್ಚೆಗೆ ಅಂತ್ಯ ಹಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News