ಬಿಜೆಪಿ ಹಿಂದೂ ಧರ್ಮದಲ್ಲಿ ತಾಲಿಬಾನ್ ಆರಂಭಿಸಿದೆಯೇ?: ಶಶಿ ತರೂರ್ ಪ್ರಶ್ನೆ

Update: 2018-07-18 06:47 GMT

ತಿರುವನಂತಪುರಂ, ಜು.18: ತಮ್ಮ `ಹಿಂದೂ ಪಾಕಿಸ್ತಾನ್' ಹೇಳಿಕೆಯಿಂದ ಇತ್ತೀಚೆಗೆ ಭಾರೀ ಸುದ್ದಿಯಾಗಿದ್ದ ಕಾಂಗ್ರೆಸ್ ನಾಯಕ ಶಶಿ ತರೂರ್ ಇದೀಗ ಮತ್ತೆ ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ವಿರುದ್ಧ ಕಿಡಿ ಕಾರಿದ್ದಾರಲ್ಲದೆ  "ಅವರು ಹಿಂದೂ ಧರ್ಮದಲ್ಲಿ ತಾಲಿಬಾನ್ ಆರಂಭಿಸಲು ಯತ್ನಿಸುತ್ತಿದ್ದಾರೆಯೇ ?'' ಎಂದು ಪ್ರಶ್ನಿಸಿದ್ದಾರೆ.

"ಅವರು ನನಗೆ ಪಾಕಿಸ್ತಾನಕ್ಕೆ ಹೋಗಲು ಹೇಳುತ್ತಿದ್ದಾರೆ. ನಾನು ಹಿಂದೂ ಅಲ್ಲವೆಂದು ಹಾಗೂ ನನಗೆ ಈ ದೇಶದಲ್ಲಿ ಇರಲು ಅಧಿಕಾರವಿಲ್ಲವೆಂದು ತೀರ್ಮಾನಿಸಲು ಅವರಿಗೆ ಯಾರು ಅಧಿಕಾರ ನೀಡಿದ್ದಾರೆ ?, ಅವರೇನು ಹಿಂದೂ ಧರ್ಮದಲ್ಲಿ ತಾಲಿಬಾನ್ ಸೃಷ್ಟಿಸಿದ್ದಾರೆಯೇ ?'' ಎಂದು  ಮಂಗಳವಾರ  ಸಾರ್ವಜನಿಕ ಸಭೆಯೊಂದನ್ನುದ್ದೇಶಿಸಿ ಮಾತನಾಡಿದ ತರೂರ್ ಹೇಳಿದ್ದಾರೆ.

ತಿರುವನಂತಪುರಂನಲ್ಲಿರುವ ಶಶಿ ತರೂರ್ ಅವರ ಕಚೇರಿಯನ್ನು ಬಿಜೆಪಿ ಯುವ ಮೋರ್ಚಾ ಸದಸ್ಯರೆನ್ನಲಾದ ಕೆಲವರು  ದಾಂಧಲೆ ನಡೆಸಿದ ಬೆನ್ನಿಗೆ ಅವರ ಮೇಲಿನ ಹೇಳಿಕೆ ಬಂದಿದೆ. ತನ್ನ ವಿರುದ್ಧ ದಾಳಿಕೋರರು ನಿಂದನಾತ್ಮಕ ಘೋಷಣೆಗಳನ್ನು ಕೂಗಿ ತಾನು ಪಾಕಿಸ್ತಾನಕ್ಕೆ ಹೋಗಬೇಕೆಂದು ಹೇಳಿದ್ದರೆಂದು ತರೂರ್ ಆರೋಪಿಸಿದ್ದಾರೆ. ಕಳೆದ ವಾರ ತಿರುವನಂತಪುರಂನಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದ ತರೂರ್ ಬಿಜೆಪಿ 2019ರ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಗೆದ್ದು ಬಂದರೆ ಅದು `ಹಿಂದು ಪಾಕಿಸ್ತಾನ್' ರಚನೆಗೆ  ಕಾರಣವಾಗಬಹುದು ಎಂದು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News