ಬೆಂಗಳೂರು: ಪತ್ನಿಯ ಕೊಲೆಗೈದು ಠಾಣೆಗೆ ಬಂದು ಶರಣಾದ ವ್ಯಕ್ತಿ
Update: 2018-07-20 13:34 GMT
ಬೆಂಗಳೂರು, ಜು.20: ಪತ್ನಿಯ ಮೇಲೆ ಅನುಮಾನ ವ್ಯಕ್ತಪಡಿಸಿ, ಕೊಲೆಗೈದು ವ್ಯಕ್ತಿಯೊಬ್ಬ ಠಾಣೆಗೆ ಬಂದು ಶರಣಾಗಿರುವ ಘಟನೆ ಇಲ್ಲಿನ ರಾಜಗೋಪಾಲನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ರಾಜೇಶ್ವರಿ ನಗರದ ನಿವಾಸಿ ಸೌಮ್ಯಾ(29) ಎಂಬಾಕೆ ಕೊಲೆಯಾಗಿದ್ದು, ಈಕೆಯ ಪತಿ ಜಗದೀಶ್, ಕೊಲೆ ಮಾಡಿದ ನಂತರ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ ಎಂದು ವರದಿಯಾಗಿದೆ.
ಪ್ರತ್ಯೇಕ ಕಾರ್ಖಾನೆಗಳಲ್ಲಿ ಜಗದೀಶ್ ಮತ್ತು ಸೌಮ್ಯಾ ಕೆಲಸ ಮಾಡುತ್ತಿದ್ದರು. ಸೌಮ್ಯಾ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂಬ ಅನುಮಾನದಿಂದ ಇಬ್ಬರ ಮಧ್ಯೆ ಹಲವು ಬಾರಿ ಜಗಳ ನಡೆಯುತಿತ್ತು. ಗುರುವಾರ ರಾತ್ರಿ ಇದೇ ವಿಚಾರದ ನಡುಗೆ ಜಗಳ ವಿಕೋಪಕ್ಕೆ ತಿರುಗಿ ಜಗದೀಶ್ ಕತ್ತು ಹಿಸುಕಿ ಸೌಮ್ಯಾಳನ್ನು ಕೊಲೆ ಮಾಡಿ ಪೊಲೀಸ್ ಠಾಣೆಗೆ ಶರಣಾಗಿರುವುದಾಗಿ ತಿಳಿದುಬಂದಿದೆ.
ಈ ಸಂಬಂಧ ರಾಜಗೋಪಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈತ ಕೃತ್ಯವೆಸಗಿರುವ ಬಗ್ಗೆ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.