ರಾಜ್ಯದಲ್ಲಿ 3000 ಕೋಟಿ ರೂ. ಹೂಡಿಕೆ ಮಾಡಲಿರುವ ತೈವಾನ್ ಕಂಪೆನಿ
ಬೆಂಗಳೂರು, ಜು.24: ಕೋಲಾರ ಜಿಲ್ಲೆಯ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ತೈವಾನಿನ ಮೆ:ವಿಸ್ಟ್ರನ್ ಟೆಕ್ನಾಲಜೀಸ್ ಕಂಪೆನಿಯು 3000 ಕೋಟಿ ರೂ.ಗಳ ಬಂಡವಾಳವನ್ನು ಹೂಡಿಕೆಯನ್ನು ಮಾಡಲಿದೆ. ಈ ಸಂಬಂಧ ಮಂಗಳವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯನ್ನು ಭೇಟಿ ಮಾಡಿ ಕಂಪೆನಿಯ ತಂಡವು ಚರ್ಚೆ ನಡೆಸಿತು.
ರಾಜ್ಯದಲ್ಲಿ ದೊಡ್ಡ ಮಟ್ಟದ ಹೂಡಿಕೆಯನ್ನು ಮಾಡಲು ನಿರ್ಧರಿಸಿರುವುದನ್ನು ಸ್ವಾಗತಿಸಿದ ಮುಖ್ಯಮಂತ್ರಿ, ಯೋಜನೆಯ ವಿಸ್ತರಣೆಗೆ ಅಗತ್ಯವಿರುವ ಸ್ಥಳದ ಕುರಿತು ಪ್ರಸ್ತಾವನೆಯನ್ನು ಸಲ್ಲಿಸುವಂತೆ ತಿಳಿಸಿದರು. ಅಲ್ಲದೆ, ಸಂಸ್ಥೆಗೆ ವಿಶೇಷ ಉತ್ತೇಜನ ನೀಡುವ ಬಗ್ಗೆ ಪರಿಶೀಲಿಸಲಾಗುವುದು ಎಂದರು.
ಮೊಬೈಲ್ ಫೋನ್ಗಳ ದುರಸ್ತಿ ಮತ್ತು ನವೀಕರಣ ತಂತ್ರಜ್ಞಾನಕ್ಕೂ ಹೆಚ್ಚಿನ ಬೇಡಿಕೆ ಇದೆ. ಚಿಕ್ಕಬಳ್ಳಾಪುರದಲ್ಲಿ ಈ ನಿಟ್ಟಿನಲ್ಲಿ ತರಬೇತಿ ವ್ಯವಸ್ಥೆ ಕಲ್ಪಿಸಲು ಸಂಸ್ಥೆ ಆರಂಭಿಸಲು ಗಮನಹರಿಸಬಹುದು ಎಂದು ಮುಖ್ಯಮಂತ್ರಿ ಸೂಚಿಸಿದರು.
ನರಸಾಪುರದಲ್ಲಿ 43 ಎಕರೆ ಸ್ಥಳದಲ್ಲಿ ಪ್ರಾರಂಭವಾಗಲಿರುವ ಐಫೋನ್ ತಯಾರಕ ಕಂಪೆನಿಯು ರಾಷ್ಟ್ರದಲ್ಲಿಯೇ ಅತಿ ದೊಡ್ಡ ಯೋಜನೆಯಾಗಿದೆ. ಪ್ರಾರಂಭದಲ್ಲಿ 10,500 ಸ್ಥಳೀಯರಿಗೆ ಉದ್ಯೋಗಾವಕಾಶ ದೊರೆಯಲಿದೆ. ಕಂಪೆನಿಯ ವಿಸ್ತರಣೆಯನ್ನೂ ರಾಜ್ಯದಲ್ಲಿಯೆ ಮಾಡಲು ಉದ್ದೇಶಿಸಲಾಗಿದ್ದು, ಇದಕ್ಕಾಗಿ ಸ್ಥಳದ ಅವಶ್ಯಕತೆಯಿದೆ ಎಂದು ಕಂಪೆನಿಯ ಭಾರತದ ವ್ಯವಸ್ಥಾಪಕ ನಿರ್ದೇಶಕ ಗುರುರಾಜ್ ತಿಳಿಸಿದರು.
ಕನ್ನಡದವರಿಗೆ ಉದ್ಯೋಗಾವಕಾಶ ನೀಡಲು ಒಪ್ಪಿದಲ್ಲಿ 7 ದಿನಗಳಲ್ಲಿ ಒಡಂಬಡಿಕೆಗೆ ಸಹಿ ಮಾಡಿಕೊಳ್ಳುವುದಾಗಿ ಕಂದಾಯ ಹಾಗೂ ಕೌಶಲ್ಯಾಭಿವೃದ್ಧಿ ಸಚಿವ ಆರ್.ವಿ.ದೇಶಪಾಂಡೆ ಸಭೆಯಲ್ಲಿ ತಿಳಿಸಿದರು.