ಹಿರಿಯ ಕಲಾವಿದೆಗೆ ವಂಚನೆ: ಆರೋಪ
Update: 2018-07-31 14:23 GMT
ಬೆಂಗಳೂರು, ಜು.31: ಧಾರಾವಾಹಿಗಳಲ್ಲಿ ನಟಿಸಲು ಅವಕಾಶ ಕೊಡಿಸುವುದಾಗಿ ಹಿರಿಯ ಕಲಾವಿದರೊಬ್ಬರಿಗೆ ವಂಚಿಸಿರುವ ಆರೋಪ ಕೇಳಿಬಂದಿದ್ದು, ಈ ಸಂಬಂಧ ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಹಿರಿಯ ಕಲಾವಿದೆ ಮಂಜುಳಮ್ಮ ಅವರಿಗೆ ಧಾರಾವಾಹಿಗಳಲ್ಲಿ ನಟಿಸಲು ಅವಕಾಶ ಕೊಡಿಸುವುದಾಗಿ ನಂಬಿಸಿ ನವೀನ್ ರೈ ಎಂಬಾತ 1 ಲಕ್ಷ ರೂ. ನಗದು, 200 ಗ್ರಾಂ ಚಿನ್ನಾಭರಣ ಪಡೆದುಕೊಂಡಿದ್ದಾನೆ. ನಂತರ ಅವಕಾಶ ಕೊಡಿಸುವ ವಿಚಾರ ಮಾತನಾಡಿದಾಗ ನವೀನ್ ರೈ, ಕಲಾವಿದೆ ಮಂಜುಳಮ್ಮ ಅವರ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಶಿವಮೊಗ್ಗ ಮೂಲದ ನವೀನ್ ರೈ ಒಂಭತ್ತು ವರ್ಷಗಳ ಹಿಂದೆ ಮಂಜುಳಮ್ಮ ಅವರಿಗೆ ಪರಿಚಯವಾಗಿದ್ದ. ಕೆಲ ಧಾರಾವಾಹಿಗಳನ್ನು ನಿರ್ದೇಶಿಸುತ್ತಿದ್ದ. ಅದನ್ನು ನಂಬಿದ ಮಂಜುಳಮ್ಮ, ಆತ ನಟನೆಗೆ ಅವಕಾಶ ಕೊಡಿಸುತ್ತೇನೆ ಎಂದು ಹೇಳಿ ವಂಚನೆ ಮಾಡಿರುವುದಾಗಿ ಎಂದು ಆರೋಪಿಸಿದ್ದಾರೆ.