×
Ad

‘ಹೆಲ್ತ್ ಕಾರ್ಡ್’ ಇಲ್ಲದಿದ್ದರೂ ಸರಕಾರಿ-ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ: ಸಚಿವ ಶಿವಾನಂದ ಪಾಟೀಲ್

Update: 2018-08-02 19:21 IST

ಬೆಂಗಳೂರು, ಆ. 2: ‘ಆರೋಗ್ಯ ಕರ್ನಾಟಕ’ ಯೋಜನಯಡಿ 2019ರ ವೇಳೆಗೆ ಎಲ್ಲರಿಗೂ ಯುನಿವರ್ಸಲ್ ಹೆಲ್ತ್ ಕಾರ್ಡ್ ನೀಡಲಾಗುವುದು ಎಂದ ಆರೋಗ್ಯ ಸಚಿವ ಶಿವಾನಂದ ಪಾಟೀಲ್, ಆರೋಗ್ಯ ಕಾರ್ಡ್ ಇಲ್ಲದಿದ್ದರೂ ಸರಕಾರಿ- ಖಾಸಗಿ ಆಸ್ಪತ್ರೆಯಲ್ಲಿ ಪಡಿತರ ಚೀಟಿ ತೋರಿಸಿ ಚಿಕಿತ್ಸೆ ಪಡೆಯಬಹುದು ಎಂದು ಹೇಳಿದ್ದಾರೆ.

ಗುರುವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೆಲ್ತ್ ಕಾರ್ಡ್ ಇಲ್ಲದಿದ್ದರೆ ಚಿಕಿತ್ಸೆ ದೊರೆಯುವುದಿಲ್ಲ ಎಂಬ ಸಂಶಯ ನಾಗರಿಕರಿಗೆ ಬೇಡ. ಪಡಿತರ ಚೀಟಿ ಇದ್ದರೆ ಸಾಕು ಎಲ್ಲರಿಗೂ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿಯೂ ಚಿಕಿತ್ಸೆ ದೊರೆಯಲಿದೆ ಎಂದರು.

ಚಿಕಿತ್ಸೆಗೆ ಹೆಲ್ತ್ ಕಾರ್ಡ್ ಕಡ್ಡಾಯ. ಕಾರ್ಡ್ ಪಡೆಯಲೇಬೇಕು ಎಂಬುದು ಒತ್ತಾಯವೇನಲ್ಲ. ಈ ಯೋಜನೆಯಡಿ ಬಿಪಿಎಲ್ ಮತ್ತು ಎಪಿಎಲ್ ಪಡಿತರ ಚೀಟಿ ಎಂಬ ಎರಡು ವರ್ಗೀಕರಣ ಮಾಡಲಾಗಿದೆ. ಅದರ ಆಧಾರದ ಮೇಲೆ ಚಿಕಿತ್ಸೆಯನ್ನು ನೀಡಲಾಗುತ್ತಿದೆ ಎಂದು ಹೇಳಿದರು.

ಆಸ್ಪತ್ರೆಗೆ ದಾಖಲಾದ ರೋಗಿಗಳಿಗೆ ಚಿಕಿತ್ಸೆ ನೀಡಿ ಹೆಲ್ತ್ ಕಾರ್ಡ್ ವಿತರಿಸಲಾಗುತ್ತಿದೆ. ಆಸ್ಪತ್ರೆಗೆ ದಾಖಲಾಗುವ ಮೊದಲೇ ಹೆಲ್ತ್ ಕಾರ್ಡ್ ಪಡೆಯಬೇಕೆಂಬ ಷರತ್ತಿಲ್ಲ. ಹೀಗಾಗಿ ಕಾರ್ಡ್ ಪಡೆಯಲು ಸರದಿ ಸಾಲಿನಲ್ಲಿ ನಿಲ್ಲುವ ಅಗತ್ಯವಿಲ್ಲ ಎಂದು ಶಿವಾನಂದ ಪಾಟೀಲ್ ಸ್ಪಷ್ಟಪಡಿಸಿದರು.

ಕಾರ್ಡ್ ಇಲ್ಲದಿದ್ದರೂ ಚಿಕಿತ್ಸೆ: ಹೆಲ್ತ್ ಕಾರ್ಡ್ ಇಲ್ಲದಿದ್ದರೂ 15 ಸಾವಿರ ಮಂದಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಪಡಿತರ ಚೀಟಿ ಆಧರಿಸಿ ಆರೋಗ್ಯ ಕರ್ನಾಟಕ ಯೋಜನೆಯಡಿ ಚಿಕಿತ್ಸೆ ನೀಡಲಾಗಿದೆ ಎಂದ ಅವರು, ಆಗಸ್ಟ್ ಅಂತ್ಯದ ವೇಳೆಗೆ 11 ಪ್ರಮುಖ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಕಾರ್ಡ್ ವಿತರಿಸುವ ಕಾರ್ಯ ಪೂರ್ಣಗೊಳ್ಳಲಿದೆ. ಮೊದಲ ಹಂತದಲ್ಲಿ 3 ಲಕ್ಷ ಕಾರ್ಡ್‌ಗಳನ್ನು ವಿತರಿಸಲಾಗಿದೆ. ತಾಲೂಕು ಆಸ್ಪತ್ರೆಗಳಲ್ಲಿ ರೋಗಿಗಳ ನೋಂದಣಿ-ಕಾರ್ಡ್ ವಿತರಣೆಯನ್ನು ಅಕ್ಟೋಬರ್‌ನಲ್ಲಿ ಆರಂಭಿಸಲಾಗುವುದು. ಕೇಂದ್ರ ಆಯುಷ್ಮಾನ್ ಭಾರತ್ ಹಾಗೂ ಆರೋಗ್ಯ ಕರ್ನಾಟಕ ಯೋಜನೆಯನ್ನು ಸೇರ್ಪಡೆ ಮಾಡಿ ಇಡೀ ದೇಶದಲ್ಲೇ ಮಾದರಿ ಆರೋಗ್ಯ ಯೋಜನೆ ರೂಪಿಸುವ ಉದ್ದೇಶವಿದೆ ಎಂದರು.

ಆಯುಷ್ಮಾನ್ ಭಾರತ್ ಯೋಜನೆಯಡಿ 62 ಲಕ್ಷ ಕುಟುಂಬಗಳಿಗೆ, ಆರೋಗ್ಯ ಕರ್ನಾಟಕ ಯೋಜನೆಯಡಿ 1.20 ಕೋಟಿ ಸೇರಿ 2 ಕೋಟಿ ಜನರಿಗೆ ಆರೋಗ್ಯ ಸೌಲಭ್ಯ ಒದಗಿಸಲು ಉದ್ದೇಶಿಸಲಾಗಿದೆ ಎಂದ ಅವರು, ಯಶಸ್ವಿನಿ ಯೋಜನೆ ಟ್ರಸ್ಟ್‌ನಲ್ಲಿ ಸ್ವಂತ ಆಸ್ಪತ್ರೆ ಹೊಂದಿದ ಕೆಲವರು ಯೋಜನೆ ವಿರುದ್ಧ ನಿಲುವು ಹೊಂದಿದ್ದರು. ಇದು ಯೋಜನೆಯ ಅಪಪ್ರಚಾರಕ್ಕೆ ಕಾರಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ವೈದ್ಯರ ಕೊರತೆ ಇಲ್ಲ: ಸರಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಸಮಸ್ಯೆ ಬಗೆಹರಿಸಲಾಗಿದೆ. ಎಲ್ಲ ಆಸ್ಪತ್ರೆಗಳಲ್ಲೂ ವೈದ್ಯರು ಲಭ್ಯವಿದ್ದು, ತಜ್ಞ ವೈದ್ಯರನ್ನೂ ನೇಮಿಸಲಾಗಿದೆ. ಸೇವೆಯಲ್ಲಿರುವ ವೈದ್ಯರಿಗೆ ತಜ್ಞ ವೈದ್ಯರಾಗಲು ವ್ಯಾಸಂಗಕ್ಕೂ ತೆರಳಿದವರು ಸೇವೆಗೆ ಆಗಮಿಸಿದ್ದಾರೆ ಎಂದು ಹೇಳಿದರು

ಬಿಡ್: ಸರಕಾರಿ ಆಸ್ಪತ್ರೆಗಳಲ್ಲಿನ ತಜ್ಞ ವೈದ್ಯರ ಕೊರತೆ ನೀಗಿಸಲು ‘ಬಿಡ್’ (ಹರಾಜು) ಆರಂಭಿಸಿದ್ದು, ಈ ಯೋಜನೆಯಡಿ ಸರಕಾರಿ ಸೇವೆಗೆ ಬಂದಿದ್ದ 300 ವೈದ್ಯರ ಪೈಕಿ 200 ಮಂದಿ ವೈದ್ಯರು ಸೇವೆ ಸಲ್ಲಿಸುತ್ತಿದ್ದಾರೆ. ಇನ್ನೊಂದು ವಾರದಲ್ಲಿ ಮತ್ತೊಮ್ಮೆ ‘ಬಿಡ್’ನಡಿ ಖಾಸಗಿ ವೈದ್ಯರಿಗೆ ಸರಕಾರಿ ಸೇವೆಗೆ ಆಹ್ವಾನಿಸಲಾಗುವುದು ಎಂದರು.

ಉಡುಪಿ ವೈದ್ಯ 3ಲಕ್ಷ ರೂ.ಗೆ ‘ಬಿಡ್’
‘ಸರಕಾರಿ ಆಸ್ಪತ್ರೆಗಳಲ್ಲಿನ ತಜ್ಞ ವೈದ್ಯರ ಕೊರತೆ ನೀಗಿಸಲು ಆರಂಭಿಸಿರುವ ‘ಬಿಡ್’ನಡಿ ಉಡುಪಿ ಜಿಲ್ಲೆಯ ವೈದ್ಯರೊಬ್ಬರು 3ಲಕ್ಷ ರೂ.ಗಳ ಬೇಡಿಕೆಯನ್ನಿಟ್ಟಿದ್ದಾರೆ. ಆದರೆ, ಈ ವೈದ್ಯರ ಸೇವೆಗೆ 1.30ಲಕ್ಷ ರೂ.ಗಳಷ್ಟು ನೀಡಲು ಮಿತಿ ಇದೆ. ಆದರೂ, ಅವರ ಸೇವೆಯನ್ನು ಆಧರಿಸಿ ಹಣ ನೀಡಲಾಗುವುದು’
-ಶಿವಾನಂದ್ ಎಸ್.ಪಾಟೀಲ್, ಆರೋಗ್ಯ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News