ಹೊಸಕೋಟೆಯಲ್ಲಿ ಎಸ್ಡಿಪಿಐಯಿಂದ ಸ್ವಾತಂತ್ರ್ಯ ದಿನಾಚರಣೆ
ಬೆಂಗಳೂರು, ಆ.15: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ಡಿಪಿಐ) ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯ ಸುಲ್ತಾನ್ ಸರ್ಕಲ್, ಖಾಝಿ ಮೊಹಲ್ಲಾ, ಮಟನ್ ಮಾರ್ಕೆಟ್ಗಳಲ್ಲಿ ಧ್ವಜಾರೋಹಣ ಮಾಡಿ ಟಿಪ್ಪು ಸರ್ಕಲ್ನಲ್ಲಿ ಸ್ವಾತಂತ್ರ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು.
ಎಸ್ಡಿಪಿಐ ರಾಜ್ಯ ಸಮಿತಿ ಸದಸ್ಯ ಅನ್ವರ್ ಸಾದತ್ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿ, ನಮ್ಮ ದೇಶವು ಸ್ವಾತಂತ್ರ್ಯ ಪಡೆದು 72 ವರ್ಷಗಳಾದರೂ ಇನ್ನೂ ಫ್ಯಾಶಿಸಂ, ಕೋಮುವಾದ ಮತ್ತು ಭ್ರಷ್ಟಾಚಾರದಿಂದ ಸ್ವಾತಂತ್ರ್ಯ ಪಡೆಯಬೇಕಾಗಿದೆ ಎಂದರು.
ದೇಶಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡಿದ ಶಹಿದ್ ಟಿಪ್ಪುಸುಲ್ತಾನ್, ಬಹದ್ದುರ್ ಶಾ ಝಫರ್, ಭಗತ್ ಸಿಂಗ್, ಗಾಂಧೀಜಿ ಮತ್ತು ಇನ್ನೂ ಅನೇಕ ಸೇನಾನಿಗಳ ಕೊಡುಗೆ ಅಪಾರವಾಗಿದೆ. ಆದರೆ ದೇಶದಲ್ಲಿ ಇಂದು ಗುಂಪು ಹತ್ಯೆ ಹಾಗು ಗೋವಿನ ಹೆಸರಿನಲ್ಲಿ ಮಾನವ ರಕ್ತದ ಹೋಳಿಯಾಗುತ್ತಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಅಂದು ಬ್ರಿಟಿಷರ ಕೈ ಜೋಡಿಸಿದ, ಸ್ವಾತಂತ್ರ್ಯದಲ್ಲಿ ಯಾವುದೇ ಕೊಡುಗೆ ನೀಡದ ಸಂಘಟನೆಗಳು ಇಂದು ಸುಳ್ಳು ದೇಶಭಕ್ತಿಯ ಕಪಟ ನಾಟಕವಾಡುತ್ತಿವೆ. ನಮ್ಮ ಪೂರ್ವಜರು ದೇಶಕ್ಕಾಗಿ ಪ್ರಾಣ ಬಲಿದಾನ ಕೊಟ್ಟಿದ್ದು ದೇಶದ ಎಲ್ಲ ಜನಾಂಗದ ಸ್ವಾತಂತ್ರ್ಯಕ್ಕಾಗಿ. ಆದರೆ ಇಂದು ನಮ್ಮ ದೇಶ ಕೆಲವೇ ಬಂಡವಾಳ ಶಾಹಿಗಳ ಕಪಿಮುಷ್ಟಿಯಲ್ಲಿದ್ದು ಆಡಳಿತ ವರ್ಗವು ಇವರ ಕೈ ಗೊಂಬೆಯಾಗಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಹೊಸಕೋಟೆ ಎಸ್ಡಿಪಿಐ ಅಧ್ಯಕ್ಷ ಸೈಯದ್ ಅಯಾಝ್, ಮಕ್ಕಾ ಮಸೀದಿಯ ಮೌಲಾನ ಶೇಖ್ ನದ್ವಿ, ಎಸ್ಡಿಪಿಐ ನಗರ ಸಭೆ ಸಮಿತಿ ಸದಸ್ಯ ಮನ್ಸೂರ್, ಜಾಂಬವ ಯುವ ಸೇನಾ ರಾಜ್ಯಾಧ್ಯಕ್ಷ ರಮೇಶ್ ಚಕ್ರವರ್ತಿ, ಸಮಾಜ ಸೇವಕರಾದ ಮುಖ್ತಿಯಾರ್, ಅಮ್ಜದ್, ಅಲ್ತಾಫ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.