ಬೆಂಗಳೂರು: ರಸ್ತೆ ಅಪಘಾತಕ್ಕೆ ವಿಕಲಚೇತನ ನಟ ಬಲಿ

Update: 2018-08-15 16:16 GMT

ಬೆಂಗಳೂರು, ಆ. 15: ಎರಡೂ ಕೈಗಳನ್ನು ಕಳೆದುಕೊಂಡಿದ್ದ ವಿಕಲಚೇತನ, ನಟ ಮತ್ತು ನಿರ್ದೇಶಕ ಹೇಮಂತ್‌ ಕುಮಾರ್ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಘಟನೆ ಇಲ್ಲಿನ ನೆಲಮಂಗಲದ ವೀರನಂಜೀಪುರದಲ್ಲಿ ಬುಧವಾರ ಸಂಭವಿಸಿದೆ.

ನಗರದ ಹೊರವಲಯ ನೆಲಮಂಗಲ ತಾಲೂಕಿನ ವೀರನಂಜೀಪುರ ಬಳಿ ಅಪಘಾತ ಸಂಭವಿಸಿದೆ. ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-4ರಲ್ಲಿ ರಸ್ತೆ ವಿಭಜಕಕ್ಕೆ ಬೈಕ್ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ ಎಂದು ಗೊತ್ತಾಗಿದೆ.

ಮೃತ ಹೇಮಂತ್ ಕುಮಾರ್ ಕಿರುತೆರೆಯ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿದ್ದರು. ತನ್ನದೇ ಆದ ಕಿರು ಚಿತ್ರಗಳಿಗೆ ನಿರ್ದೇಶನ ಮಾಡುತ್ತಿದ್ದರು. ಅರ್ಜುನ್ ಜನ್ಯ ಹಾಗೂ ದುನಿಯಾ ವಿಜಿ ಸೇರಿದಂತೆ ಹಲವು ನಾಯಕ ನಟರ ಮೆಚ್ಚುಗೆಗೆ ಪಾತ್ರರಾಗಿದ್ದರು.

ಇವರಿಗೆ ಎರಡು ಕೈಗಳು ಇಲ್ಲದ್ದಿದ್ದರೂ ಕಾಲುಗಳ ಸಹಾಯದಿಂದ ಬೈಕ್ ಚಲಾಯಿಸುವುದಲ್ಲದೆ, ಅನೇಕ ಸಾಧನೆಗಳನ್ನು ಮಾಡಿದ್ದಾರೆ. ‘ಹೈಕ’ ಎಂಬ ಕಿರುಚಿತ್ರಕ್ಕೆ ಧ್ವನಿ ನೀಡಿದ್ದ ಕೀರ್ತಿ ಈ ಉದಯೋನ್ಮುಖ ಕಲಾವಿದನಿಗೆ ಸಲ್ಲುತ್ತದೆ. ಈ ಘಟನೆಗೆ ಸಂಬಂಧಿಸಿದಂತೆ ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News