ಕೊಡಗು ಮಳೆ ಸಂತ್ರಸ್ತರಿಗೆ ಬಿಜೆಪಿಯಿಂದ ಪರಿಹಾರ ಸಾಮಗ್ರಿಗಳ ರವಾನೆ

Update: 2018-08-18 15:45 GMT

ಬೆಂಗಳೂರು, ಆ. 18: ಕೊಡಗು ಜಿಲ್ಲೆಯ ಮಳೆ ಸಂತ್ರಸ್ತರಿಗೆ ಔಷಧಿಗಳು, ಬಿಸ್ಕೆಟ್, ಬ್ಲಾಂಕೆಟ್, ಅಕ್ಕಿ, ಸ್ಯಾನಿಟರಿ ಪ್ಯಾಡ್, ಬಟ್ಟೆ ಸೇರಿದಂತೆ ಪರಿಹಾರ ಸಾಮಗ್ರಿಗಳನ್ನು ಕೊಂಡೊಯ್ಯಲಾಗುತ್ತಿದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.

ಶನಿವಾರ ಮಲ್ಲೇಶ್ವರಂನ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಪರಿಹಾರ ಸಾಮಗ್ರಿಗಳ ಕೊಂಡೊಯ್ಯವ ವೇಳೆ ಮಾತನಾಡಿದ ಅವರು, ಈಗಾಗಲೇ ಕೊಡಗು ಜಿಲ್ಲಾಧಿಕಾರಿಯೊಂದಿಗೆ ಮಾತನಾಡಿದ್ದು ಮನೆಗಳನ್ನು ಕಳೆದುಕೊಂಡ ಜನರಿಗೆ ಬಟ್ಟೆ, ಬ್ಲಾಂಕೆಟ್‌ಗಳ ಅಗತ್ಯವಿದೆ ಎಂದು ತಿಳಿಸಿದ್ದು, ಅವುಗಳನ್ನು ಒದಗಿಸಲಾಗುವುದು ಎಂದರು.

ಮಳೆ-ಪ್ರವಾಹದಿಂದ ಹಾನಿಯಾದ ಉಳಿದ ಜಿಲ್ಲೆಗಳಲ್ಲೂ ಪರಿಹಾರ ಸಾಮಗ್ರಿ ಕಳಿಸಲು ಬಿಜೆಪಿ ಸಿದ್ಧವಿದೆ. ಸಾರ್ವಜನಿಕರೂ ಉದಾರ ನೆರವು ನೀಡಲು ಮುಂದಾಗಬೇಕು ಎಂದ ಅವರು, ಪಕ್ಷದ ಕಾರ್ಯಾಲಯದ ಮುಂದೆ ಸಾಮಗ್ರಿಗಳನ್ನು ಹೊತ್ತಿರುವ ಲಾರಿಗೆ ಶೋಭಾ ಕರಂದ್ಲಾಜೆ ಅವರು ಹಸಿರು ನಿಶಾನೆ ತೋರಿಸಿದರು.

‘ಕರಾವಳಿ-ಮಲೆನಾಡು ಪ್ರದೇಶದಲ್ಲಿ ಭಾರಿ ಮಳೆ, ಗುಡ್ಡ ಕುಸಿತ ಮತ್ತು ಪ್ರವಾಹ ಪರಿಸ್ಥಿತಿ ಹಿನ್ನೆಲೆಯಲ್ಲಿ ಸಂತ್ರಸ್ತರಿಗೆ ಅಗತ್ಯ ನೆರವು ನೀಡಲು ಕೇಂದ್ರ ಸರಕಾರ ಸಿದ್ಧವಿದೆ. ರಾಜ್ಯ ಸರಕಾರ ತುರ್ತಾಗಿ ಅಗತ್ಯ ಪರಿಹಾರ ಕಾರ್ಯಗಳನ್ನು ಸಮರೋಪಾದಿಯಲ್ಲಿ ಕೈಗೊಂಡು ಪ್ರವಾಹ ಪೀಡಿತ ಪ್ರದೇಶದ ನಾಗರೀಕರ ರಕ್ಷಣೆಗೆ ಧಾವಿಸಬೇಕು’

-ಬಿ.ಎಸ್.ಯಡಿಯೂರಪ್ಪ ಬಿಜೆಪಿ ರಾಜ್ಯಾಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News