ವಿವಿಧ ಅಪರಾಧ ಪ್ರಕರಣ: 14 ಜನರ ಬಂಧನ; 2.25 ಕೆಜಿ ಚಿನ್ನ ಜಪ್ತಿ

Update: 2018-08-18 15:50 GMT

ಬೆಂಗಳೂರು, ಆ.18: ವಿವಿಧ ಅಪರಾಧ ಪ್ರಕರಣಗಳಿಗೆ ಸಂಬಂಧಪಟ್ಟಂತೆ 14 ಜನರನ್ನು ಬಂಧಿಸಿ, ಬರೋಬ್ಬರಿ 2.25 ಕೆಜಿ ತೂಕದ ಚಿನ್ನಾಭರಣ ಜಪ್ತಿ ಮಾಡುವಲ್ಲಿ ನಗರದ ಈಶಾನ್ಯ ವಿಭಾಗದ ಪೊಲೀಸರು ಯಶಸ್ವಿಯಾಗಿದ್ದಾರೆ.

ಶನಿವಾರ ಈ ಕುರಿತು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಹೆಚ್ಚುವರಿ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ವಯೋವೃದ್ಧರ ಮನೆಗಳಿಗೆ ನುಗ್ಗಿ ಚಿನ್ನದ ಆಭರಣ ಮತ್ತು ನಗದು ದರೋಡೆ ಆರೋಪದಡಿ ಐವರನ್ನು ಬಂಧಿಸಿರುವ ವಿದ್ಯಾರಣ್ಯಪುರ ಪೊಲೀಸರು, 25 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಿದ್ದಾರೆ ಎಂದರು.

ಗೌರಿಬಿದನೂರು ತಾಲೂಕಿನ ಮಂಚೇನಹಳ್ಳಿಯ ಪಿ.ನಾಗೇನಹಳ್ಳಿ ಗ್ರಾಮದ ನಿವಾಸಿಗಳಾದ ಎನ್.ವೈ.ನಾಗರಾಜ್(30), ರವಿಕುಮಾರ್(24), ತೊಂಡೆಬಾ ಹೋಬಳಿಯ ಬಸವನಹಳ್ಳಿ ಗ್ರಾಮದ ನಿವಾಸಿಗಳಾದ ಗಂಗಾಧರ್(45), ಬಸವರಾಜ್(19), ಪಿ.ನಾಗೇನಹಳ್ಳಿಯ ಗಂಗರಾಜ್(25) ಬಂಧಿತ ಆರೋಪಿಗಳೆಂದು ಮಾಹಿತಿ ನೀಡಿದರು.

ಆರೋಪಿಗಳು ವಿದ್ಯಾರಣ್ಯಪುರದ ದೇಶಬಂಧು ನಗರದಲ್ಲಿ ವಾಸವಾಗಿದ್ದ ಸುಮಾರು 85 ವರ್ಷ ವಯಸ್ಸಿನ ಚಂದ್ರಶೇಖರ್ ಎಂಬುವರ ಮನೆಗೆ ನುಗ್ಗಿ ಕಳವು ಮಾಡಿದ್ದರು ಹಾಗೂ ಯಲಹಂಕ ಪೊಲೀಸ್ ಠಾಣಾ ವ್ಯಾಪ್ತಿಯ ನ್ಯಾಯಾಂಗ ಬಡಾವಣೆಯಲ್ಲಿಯೂ ದರೋಡೆ ಮಾಡಿದ್ದರು ಎನ್ನುವ ಮಾಹಿತಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.

ಓರ್ವನ ಬಂಧನ: ಮನೆಗಳಿಗೆ ನುಗ್ಗಿ ಕಳವು ಮಾಡುತ್ತಿದ್ದ ಆರೋಪದಡಿ ವಿದ್ಯಾರಣ್ಯಪುರ ಠಾಣೆ ಪೊಲೀಸರು, ಓರ್ವನನ್ನು ಬಂಧಿಸಿ, 1 ಕೆ.ಜಿ. ತೂಕದ 30 ಲಕ್ಷ ರೂ.ಬೆಲೆಬಾಳುವ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

ಕಲ್ಯಾಣನಗರದ ಪ್ರಕೃತಿ ಲೇಔಟ್‌ನ ಅಣ್ಣೇಶ್ವರಿ ಶಾಲೆ ಬಳಿಯ ನಿವಾಸಿ ಕಾರ್ತಿಕ್ ಕುಮಾರ್ (28) ಬಂಧಿತ ಆರೋಪಿಯಾಗಿದ್ದಾನೆ. ಈತನ ಬಂಧನದಿಂದ ವಿದ್ಯಾರಣ್ಯಪುರ 2, ಯಲಹಂಕ, ಅಮೃತಹಳ್ಳಿ, ಆರ್‌ಟಿ ನಗರ ತಲಾ ಒಂದು ಹಾಗೂ ಕೊಡಿಗೆಹಳ್ಳಿಯ ಮೂರು ಸೇರಿ ಒಟ್ಟು 8 ಮನೆಗಳವು ಪ್ರಕರಣಗಳು ಬೆಳಕಿಗೆ ಬಂದಿವೆ. ಆರೋಪಿ ಸಿಂಗಾಪುರ ಹಾಗೂ ನಗರದ ವಿವಿಧ ಠಾಣಾ ವ್ಯಾಪ್ತಿಗಳಲ್ಲಿ ಮನೆಗಳವು ಮಾಡುತ್ತಿದ್ದ ಎಂದು ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

ಮಾಲು ವಶ: ಮನೆಗಳವು ಆರೋಪದಲ್ಲಿ ಜಗದೀಶ್ ಕುಮಾರ್ ಎಂಬಾತನನ್ನು ಬಂಧಿಸಿರುವ ವಿದ್ಯಾರಣ್ಯಪುರ ಠಾಣೆ ಪೊಲೀಸರು, 200 ಗ್ರಾಂ ತೂಕದ 6 ಲಕ್ಷ ರೂ.ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

ಮಾದನಾಯಕನಹಳ್ಳಿಯ ಸರಕಾರಿ ಸೈಟ್ ಜನತಾ ಕಾಲನಿ ನಿವಾಸಿಯಾಗಿರುವ ಜಗದೀಶ್ ಕುಮಾರ್ ಮೂಲತಃ ರಾಮನಗರ ಜಿಲ್ಲೆಯ ಮಾಗಡಿಯ ಸಿದ್ದಾಪುರ ಗ್ರಾಮದವನು ಎನ್ನಲಾಗಿದೆ. ಈತ ವಿದ್ಯಾರಣ್ಯಪುರ, ದೇವರಜೀವನಹಳ್ಳಿ ಠಾಣಾ ವ್ಯಾಪ್ತಿಗಳಲ್ಲಿ ಮನೆಗಳವು ಮಾಡುತ್ತಿದ್ದ. ಖಚಿತ ಮಾಹಿತಿ ಆಧಾರದಲ್ಲಿ ದಾಳಿ ನಡೆಸಿದ ಪೊಲೀಸರು ಈತನನ್ನು ಬಂಧಿಸಿ 6 ಲಕ್ಷ ರೂ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

ಚಿಕ್ಕಜಾಲ: ನಗರದ ಚಿಕ್ಕಜಾಲ ಪೊಲೀಸರು ಈರಣ್ಣ ಎಂಬಾತನನ್ನು ಬಂಧಿಸಿ 12 ಲಕ್ಷ ರೂ.ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ಆಂಧ್ರಪ್ರದೇಶದ ಆನಂತಪುರ ಜಿಲ್ಲೆಯ ಅಮರಾಪುರ ತಾಲೂಕಿನ ಕಾಂಚಿಗುಂಟ ಗ್ರಾಮದ ಈರಣ್ವ (29) ಸರಗಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ. ಈತನನ್ನು ಬಂಧಿಸಿ ಮೂರು ಪ್ರಕರಣಗಳಿಗೆ ಸಂಬಂಧಿಸಿ ಒಟ್ಟು 12.5 ಲಕ್ಷ ರೂ.ಮೌಲ್ಯದ 500 ಗ್ರಾಂ ತೂಕದ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

ಸಂಪಿಗೆಹಳ್ಳಿ: ಸುಲಿಗೆ ಆರೋಪದಡಿ ಓರ್ವನನ್ನು ಬಂಧಿಸಿರುವ ಸಂಪಿಗೆಹಳ್ಳಿ ಠಾಣಾ ಪೊಲೀಸರು, 1.25 ಲಕ್ಷ ರೂ.ಮೌಲ್ಯದ 42 ಗ್ರಾಂ ತೂಕದ ಚಿನ್ನದ ಒಡವೆಗಳನ್ನು ವಶಪಡಿಸಿಕೊಂಡಿದ್ದಾರೆ.

ಗೋವಿಂದಪುರ ಕ್ರಾಸ್ ನಿವಾಸಿ ಸೈಯದ್ ಇಮ್ರಾನ್ ಬಂಧಿತ ಆರೋಪಿ ಎನ್ನಲಾಗಿದ್ದು, ಸಂಪಿಗೆಹಳ್ಳಿ ಮತ್ತು ಬಾಗಲೂರು ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ನಡೆದ ಪ್ರಕರಣಗಳಿಗೆ ಸಂಬಂಧಿಸಿ 1.25 ಲಕ್ಷ ರೂ.ಮೌಲ್ಯದ 42 ಗ್ರಾಂ ತೂಕದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News