ಫುಟ್ಪಾತ್ ಮೇಲೆ ಮಲಗಿದ್ದ ನಾಲ್ವರ ಮೇಲೆ ಹರಿದ ಎಸ್ಯುವಿ ವಾಹನ
Update: 2018-08-31 04:10 GMT
ಜೈಪುರ, ಆ. 31: ಇಲ್ಲಿನ ಗಾಂಧಿನಗರ ರೈಲು ನಿಲ್ದಾಣದ ಬಳಿಯ ಸರಸ್ ಡೈರಿ ಎದುರು ಫುಟ್ಪಾತ್ ಮೇಲೆ ಮಲಗಿ ನಿದ್ರಿಸುತ್ತಿದ್ದವರ ಮೇಲೆ ಎಸ್ಯುವಿ ವಾಹನ ಹರಿದು ನಾಲ್ವರು ಕಾರ್ಮಿಕರು ತೀವ್ರವಾಗಿ ಗಾಯಗೊಂಡ ಘಟನೆ ಗುರುವಾರ ತಡರಾತ್ರಿ ನಡೆದಿದೆ. ಕಾರಿನ ಗಾಜಿನಲ್ಲಿ ಕರೌಲಿ ಬಿಜೆಪಿ ಮುಖಂಡ ಬದ್ರಿ ಮೀನಾ ಅವರ ಹೆಸರಿನ ಸ್ಟಿಕ್ಕರ್ ಇದೆ.
ಎಸ್ಯುವಿ ಚಾಲಕ ಪಾನಮತ್ತನಾಗಿರಬೇಕು ಎಂದು ಶಂಕಿಸಲಾಗಿದ್ದು, ಆರೋಪಿಯನ್ನು ತಕ್ಷಣ ಬಂಧಿಸಿ ವೈದ್ಯಕೀಯ ಪರೀಕ್ಷೆಗಾಗಿ ಸವಾಯಿ ಮಾನ್ಸಿಂಗ್ ಆಸ್ಪತ್ರೆಗೆ ಒಯ್ಯಲಾಗಿದೆ.
ಆರೋಪಿಯನ್ನು ಕರೂಲಿ ಜಿಲ್ಲೆಯ ಭರತ್ಭೂಷಣ್ ಮೀನಾ (35) ಎಂದು ಗುರುತಿಸಲಾಗಿದೆ. ಆರೋಪಿ ಪಾನಮತ್ತನಾಗಿದ್ದುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಹೆಚ್ಚುವರಿ ಎಸ್ಪಿ ಕವೇಂದ್ರ ಸಿಂಗ್ ಸಾಗರ್ ಹೇಳಿದ್ದಾರೆ.
ನಾಲ್ವರು ಕಾರ್ಮಿಕರು ತೀವ್ರವಾಗಿ ಗಾಯಗೊಂಡಿದ್ದು, ಸವಾಯಿ ಮಾನ್ಸಿಂಗ್ ಆಸ್ಪತ್ರೆಯ ಅಪಘಾತ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.