ಸಿಎಂ ಇಬ್ರಾಹಿಂ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು
Update: 2018-08-31 13:48 GMT
ಬೆಂಗಳೂರು, ಆ.31: ಮತದಾನ ಗುರುತಿನ ಚೀಟಿ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಕೇಂದ್ರದ ಮಾಜಿ ಸಚಿವ ಸಿ.ಎಂ. ಇಬ್ರಾಹಿಂ ವಿರುದ್ಧ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದೆ.
ಶುಕ್ರವಾರ ಬಿಬಿಎಂಪಿಯ ವಿರೋಧ ಪಕ್ಷದ ನಾಯಕ ಪದ್ಮನಾಭರೆಡ್ಡಿ ದೂರು ನೀಡಿದ್ದು, ಶಿವಮೊಗ್ಗ ಜಿಲ್ಲೆಯ ಭದ್ರಾವತಿ ವಿಧಾನಸಭಾ ಕ್ಷೇತ್ರ ಮತ್ತು ಬೆಂಗಳೂರು ಜಿಲ್ಲೆಯ ಶಿವಾಜಿನಗರ ಕ್ಷೇತ್ರದಲ್ಲಿ ಇಬ್ರಾಹಿಂ ಮತದಾನದ ಗುರುತಿನ ಚೀಟಿ ಹೊಂದಿದ್ದಾರೆ ಎಂದು ಆರೋಪಿಸಿದ್ದಾರೆ.
ಎರಡು ಕಡೆ ಗುರುತಿನ ಚೀಟಿ ಹೊಂದಿದ್ದು, ಇದು ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದೆ. ಅಲ್ಲದೆ, ಜನರು ಒಂದೇ ಮತಗಟ್ಟೆಯಲ್ಲಿ ಗುರುತಿನ ಚೀಟಿ ಹೊಂದಲು ಅವಕಾಶವಿದೆ. ಕಾನೂನಿನ ಪ್ರಕಾರ ಎರಡು ವಿಳಾಸಗಳಲ್ಲಿ ಗುರುತಿನ ಚೀಟಿ ಹೊಂದುವುದು ಅಪರಾಧ. ತಕ್ಷಣವೇ ಅವರ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದ್ದಾರೆ.