ಶಿಕ್ಷಕರ ದಿನ: ವಿವಾದಾತ್ಮಕ ಆದೇಶ ಹಿಂಪಡೆದ ರಾಜಸ್ಥಾನ ಸರ್ಕಾರ

Update: 2018-09-01 03:52 GMT

ಜೈಪುರ, ಸೆ.1: ಸೆಪ್ಟೆಂಬರ್ 5ರ ಶಿಕ್ಷಕರ ದಿನಾಚರಣೆ ಹಿನ್ನೆಲೆಯಲ್ಲಿ ರಾಜಸ್ಥಾನ ಸರ್ಕಾರ ಹೊರಡಿಸಿದ್ದ ಎರಡು ಆದೇಶಗಳಿಗೆ ರಾಜ್ಯಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಎರಡು ವಿವಾದಾತ್ಮಕ ಆದೇಶಗಳನ್ನು ಸರ್ಕಾರ ವಾಪಸ್ ಪಡೆದಿದೆ.

ಮೊದಲ ಆದೇಶದಲ್ಲಿ ಶಿಕ್ಷಕರ ದಿನಾಚರಣೆ ಸಮಾರಂಭಕ್ಕೆ ಹಾಜರಾಗದ ಶಿಕ್ಷಕರ ವೇತನ ಕಡಿತಗೊಳಿಸುವ ಎಚ್ಚರಿಕೆ ನೀಡಲಾಗಿತ್ತು. ಎರಡನೇ ಆದೇಶದಲ್ಲಿ ಆ ದಿನ ಧರಿಸುವ ಸೀರೆ ಅಥವಾ ಇತರ ಬಟ್ಟೆಯಲ್ಲಿ ಕಪ್ಪು ಬಣ್ಣ ಇರಬಾರದು ಎಂದು ಆದೇಶಿಸಲಾಗಿತ್ತು. ಈ ಬಗ್ಗೆ ಶಿಕ್ಷಕ ಸಮುದಾಯ ಹಾಗೂ ವಿರೋಧ ಪಕ್ಷವಾದ ಕಾಂಗ್ರೆಸ್‌ನಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.

ರಾಜ್ಯದ ಶಿಕ್ಷಣ ಇಲಾಖೆ ರಾಜ್ಯಮಟ್ಟದ ಶಿಕ್ಷಕರ ದಿನಾಚರಣೆ ಸಮಾರಂಭವನ್ನು ರಾಜ್ಯ ವಿಧಾನಸಭೆಯ ಬಳಿ ಆಯೋಜಿಸಲು ನಿರ್ಧರಿಸಿ, ಎಲ್ಲ 33 ಜಿಲ್ಲೆಗಳ ತಲಾ ಒಬ್ಬ ಶಿಕ್ಷಕರನ್ನು ಸನ್ಮಾನಿಸಲು ಕಾರ್ಯಕ್ರಮ ಹಮ್ಮಿಕೊಂಡಿದೆ. ವಸುಂಧರರಾಜೇ ಸರ್ಕಾರ ಪ್ರಮಾಣವಚನ ಸ್ವೀಕರಿಸಿದ ಬಳಿಕ ಅಂದರೆ 2013ರ ಡಿಸೆಂಬರ್ 13ರ ಬಳಿಕ ನೇಮಕಗೊಂಡ ಶಿಕ್ಷಕರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು.

ಶಿಕ್ಷಕರ ದಿನಾಚರಣೆಯಲ್ಲಿ ಭಾಗವಹಿಸುವ ಶಿಕ್ಷಕರು ಕಪ್ಪು ಬಟ್ಟೆ, ಶೂ, ಸಾಕ್ಸ್, ಬೆಲ್ಟ್ ಅಥವಾ ಕಪ್ಪು ಬಣ್ಣದ ಕರವಸ್ತ್ರವನ್ನೂ ಹೊಂದಿರಬಾರದು ಎಂದು ಸೂಚಿಸಲಾಗಿತ್ತು. ಇದು ಪ್ರತಿಭಟನೆಗೆ ಕಾರಣವಾಗಬಹುದು ಎಂಬ ಭೀತಿಯಿಂದ ಸರ್ಕಾರ ಈ ಸೂಚನೆ ಹೊರಡಿಸಿತ್ತು. 11.51 ಕೋಟಿ ರೂಪಾಯಿ ವೆಚ್ಚದ ಈ ಸಮಾರಂಭಕ್ಕೆ ಕೇವಲ ವಸುಂಧರರಾಜೇ ಅವರ ಅಧಿಕಾರಾವಧಿಯಲ್ಲಿ ನೇಮಕಗೊಂಡ ಶಿಕ್ಷಕರನ್ನು ಮಾತ್ರ ಆಹ್ವಾನಿಸುವ ಮೂಲಕ ರಾಜ್ಯ ಸರ್ಕಾರ ತಾರತಮ್ಯ ಎಸಗಿದೆ ಹಾಗೂ ಇದನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದೆ ಎಂದು ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ದೂರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News