ಗುಜರಾತಿನಲ್ಲಿ ಹಾರ್ದಿಕ್ ಪಟೇಲ್ ಉಪವಾಸ ಸತ್ಯಾಗ್ರಹ: ಪ್ರಧಾನಿ ಮೋದಿಗೆ ಪತ್ರ ಬರೆದ ದೇವೇಗೌಡ

Update: 2018-09-03 14:19 GMT

ಬೆಂಗಳೂರು, ಸೆ.3: ಗುಜರಾತಿನಲ್ಲಿ ನಡೆಯುತ್ತಿರುವ ಪಾಟೀದಾರ್ ಸಮುದಾಯದ ಪ್ರತಿಭಟನೆಗಳು ಹಾಗೂ ಯುವ ಮುಖಂಡ ಹಾರ್ದಿಕ್ ಪಟೇಲ್ ಉಪವಾಸ ಸತ್ಯಾಗ್ರಹ ಕುರಿತು ಪ್ರಧಾನಿ ನರೇಂದ್ರ ಮೋದಿಗೆ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಪತ್ರ ಬರೆದಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಗುಜರಾತಿನಲ್ಲಿ ನಡೆಯುತ್ತಿರುವ ಪಾಟೀದಾರ್ ಸಮುದಾಯದ ಪ್ರತಿಭಟನೆಗಳನ್ನು ಮಾಧ್ಯಮಗಳ ಮೂಲಕ ಬಹಳ ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ಇದೇ ಸಮುದಾಯದ ಯುವ ಮುಖಂಡ ಹಾರ್ದಿಕ್ ಪಟೇಲ್ ಸುಮಾರು 3 ವರ್ಷಗಳಿಂದ ಹೋರಾಟವನ್ನು ಮಾಡಿಕೊಂಡು ಬರುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಇದೀಗ ಅವರು ಉಪವಾಸ ಸತ್ಯಾಗ್ರಹವನ್ನು ಆರಂಭಿಸಿದ್ದಾರೆ. ಅವರಿಗೆ ಕೇವಲ 25 ವರ್ಷಗಳು. ಈ ಚಿಕ್ಕ ವಯಸ್ಸಿನಲ್ಲೆ ಅವರು ಒಂದು ಸಮಾಜದ ಹಿತಕೋಸ್ಕರ ಹಗಲು ರಾತ್ರಿ ಹೋರಾಟವನ್ನು ಮಾಡುತ್ತಿದ್ದಾರೆ. ಅದರಿಂದ ಅವರ ಆರೋಗ್ಯದ ಬಗ್ಗೆ ಗಮನಹರಿಸಿ ಮತ್ತು ಆತನ ಸಮಾಜಮುಖಿ ಕಾರ್ಯವನ್ನು ಮನಗಂಡು ಕೇಂದ್ರ ಸರಕಾರ ಹಾಗೂ ಅಲ್ಲಿನ ರಾಜ್ಯ ಸರಕಾರ ಅದರ ಕಡೆ ಗಮನ ಹರಿಸಬೇಕು ಎಂದು ದೇವೇಗೌಡ ಮನವಿ ಮಾಡಿದ್ದಾರೆ.

1996ರಲ್ಲಿ ನಾನು ಪ್ರಧಾನಮಂತ್ರಿಯಾಗಿದ್ದ ಸಂದರ್ಭದಲ್ಲಿ ರಾಜಸ್ತಾನ ರಾಜ್ಯದ ಜಾಟ್ ಸಮುದಾಯದವರು ಆರ್ಥಿಕವಾಗಿ ಬಹಳ ಹಿಂದುಳಿದ ಸಮುದಾಯವಾಗಿದ್ದು, ಅವರನ್ನು ಹಿಂದುಳಿದ ವರ್ಗಗಳಿಗೆ ಸೇರಿಸಬೇಕೆಂದು ಮನವಿಯನ್ನು ಸಲ್ಲಿಸಿದ್ದರು. ಅದರಂತೆ, ನಾನು ಒಂದು ಹಿಂದುಳಿದ ವರ್ಗಗಳ ಆಯೋಗವನ್ನು ರಚಿಸಿ ಸೂಕ್ತ ವರದಿ ಸಲ್ಲಿಸುವಂತೆ ಸೂಚನೆ ನೀಡಿದ್ದೆ ಎಂದು ಅವರು ಹೇಳಿದ್ದಾರೆ. ಅದರಂತೆ, ಆಯೋಗವು ಅಧ್ಯಯನ ನಡೆಸಿ ಜಾಟ್ ಸಮುದಾಯದವರು ಎಲ್ಲ ಕ್ಷೇತ್ರಗಳಲ್ಲೂ ಬಹಳ ಹಿಂದುಳಿದಿರುವುದರಿಂದ ಆ ಸಮುದಾಯವನ್ನು ಒಬಿಸಿಗೆ ಸೇರಿಸಬಹುದೆಂದು ವರದಿ ಸಲ್ಲಿಸಿತು. ಆದರ ಆಧಾರದ ಮೇಲೆ ನಾನು ಜಾಟ್ ಸಮುದಾಯವನ್ನು ಒಬಿಸಿಗೆ ಸೇರಿಸಿದೆ ಎಂದು ದೇವೇಗೌಡ ತಿಳಿಸಿದ್ದಾರೆ.

ನಮ್ಮ ಸರಕಾರದ ಆದೇಶವನ್ನು ನ್ಯಾಯಾಲಯ ತಡೆಹಿಡಿಯಿತು. ನಂತರ ನ್ಯಾಯಾಲಯದಲ್ಲಿ ನಾವು ಸೂಕ್ತವಾದ ವರದಿ ನೀಡಿ ಜಾಟ್ ಸಮುದಾಯವನ್ನು ಒಬಿಸಿಗೆ ಸೇರಿಸುವಲ್ಲಿ ಯಶಸ್ವಿಯಾದೆವು. ಇದೇ ಮಾದರಿಯಲ್ಲಿ ನೀವು ಪಾಟೀದಾರ್ ಸಮುದಾಯದವರ ಬೇಡಿಕೆಯನ್ನು ಪರಿಗಣಿಸಿ ಒಂದು ಒಬಿಸಿ ಆಯೋಗ ನೇಮಿಸಿ ಅದು ನೀಡುವ ವರದಿಯನ್ನು ಜಾರಿ ಮಾಡಬೇಕೆಂದು ದೇವೇಗೌಡ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News