ಕಳವು ಆರೋಪಿಯ ಬಂಧನ: 32 ಬೈಕ್‌ಗಳು ವಶಕ್ಕೆ

Update: 2018-09-03 16:33 GMT

ಬೆಂಗಳೂರು, ಸೆ.3: ಬೈಕ್‌ಗಳನ್ನು ಕಳವು ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿರುವ ಆರ್.ಟಿ.ನಗರ ಠಾಣಾ ಪೊಲೀಸರು, 10.91 ಲಕ್ಷ ರೂ. ಮೌಲ್ಯದ 32 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಆರ್.ಟಿ.ನಗರದ ಗಂಗಾನಗರ ನಿವಾಸಿ ಉಮಾಶಂಕರ್(41) ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.

ಆರ್‌ಟಿನಗರದ ಸುಜಾತಾ ಎಂಬುವರು ಆ.22ರಂದು ಮಧ್ಯಾಹ್ನ 2:30ರ ವೇಳೆಗೆ ತರಳಬಾಳು ಕೇಂದ್ರಕ್ಕೆ ತರಬೇತಿಗಾಗಿ ಬಂದಿದ್ದು, ತಮ್ಮ ಬೈಕ್ ನಿಲ್ಲಿಸಿ ಹೋಗಿದ್ದರು. ತರಬೇತಿ ಮುಗಿಸಿ ವಾಪಸ್ ಬಂದು ನೋಡಿದಾಗ ವಾಹನ ಕಳವಾಗಿತ್ತು. ಈ ಬಗ್ಗೆ ಅವರು ಆರ್‌ಟಿನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಸಂಬಂಧ ಕಾರ್ಯಾಚರಣೆ ನಡೆಸಿದಾಗ ಆರೋಪಿ ಸಿಕ್ಕಿಬಿದ್ದಿದ್ದಾನೆ.

ಈತನ ಬಂಧನದಿಂದ ಆರ್‌ಟಿನಗರ ಠಾಣೆ ವ್ಯಾಪ್ತಿಯ 7, ಮಹಾಲಕ್ಷ್ಮೀ ಲೇಔಟ್‌ನ 3, ಸುಬ್ರಹ್ಮಣ್ಯನಗರ 5, ಸಂಜಯ್‌ನಗರ, ಅನ್ನಪೂರ್ಣೆಶ್ವರಿ, ಜಯನಗರದಲ್ಲಿ ತಲಾ ಒಂದೊಂದು ಪ್ರಕರಣ ಸೇರಿ ಒಟ್ಟು 18 ವಾಹನಕಳವು ಪ್ರಕರಣಗಳು ಪತ್ತೆಯಾಗಿವೆ. ಉಳಿದ 14 ಪ್ರಕರಣಗಳ ವಾರಸುದಾರರನ್ನು ಪತ್ತೆಹಚ್ಚುವ ಕಾರ್ಯ ಪ್ರಗತಿಯಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News