ಸಮಾನ ನಾಗರಿಕ ಸಂಹಿತೆ ಎಷ್ಟು ಪ್ರಸ್ತುತ?

Update: 2018-09-04 18:38 GMT

ಸಮಾನ ನಾಗರಿಕ ಸಂಹಿತೆಯೆಂಬ ಬೆಂಕಿಕಡ್ಡಿಯನ್ನು ಕಳೆದ ಕೆಲವು ವರ್ಷಗಳಿಂದೀಚೆಗೆ ಆಗಾಗ್ಗೆ ಗೀರುತ್ತಲೇ ಬರಲಾಗುತ್ತಿದೆ. ರಾಜಕೀಯ ಬಲಪಂಥೀಯರು ಹಾಗೂ ಇತರ ಹಲವರು, ನಮ್ಮ ಭಾರತೀಯ ಸಂವಿಧಾನವು ರಚನೆಯಾದಾಗಿನಿಂದ ಸಮಾನ ನಾಗರಿಕ ಸಂಹಿತೆಯನ್ನು ಪ್ರತಿಪಾದಿಸುತ್ತಾ ಬಂದಿದ್ದಾರೆ. ಈ ವಿಷಯವು ನಿರಂತರವಾದ ವಿವಾದದ ಬಿರುಗಾಳಿಗೆ, ವಾಗ್ವಾದಗಳಿಗೆ ಹಾಗೂ ಇತಿಹಾಸದ ಕುರಿತಾದ ಚರ್ಚೆಯನ್ನು ಬಿತ್ತಲು ಕಾರಣವಾಗಿದೆ.

ಬಲಪಂಥೀಯ ವಿಚಾರಧಾರೆಗೆ ದೊಡ್ಡ ಹಿನ್ನಡೆಯೆಂಬಂತೆ, ಭಾರತದ ಕಾನೂನು ಆಯೋಗವು, ದೇಶಕ್ಕೆ ಈ ಹಂತದಲ್ಲಿ ಸಮಾನ ನಾಗರಿಕ ಸಂಹಿತೆಯ ಅಗತ್ಯವಿಲ್ಲ ಹಾಗೂ ಅದು ಅಪೇಕ್ಷಣೀಯವೂ ಅಲ್ಲವೆಂದು ಹೇಳಿದೆ. ದೇಶದಲ್ಲಿ ಪ್ರಚಲಿತದಲ್ಲಿರುವ ಬಹುತ್ವಕ್ಕೆ ವಿರುದ್ಧವಾಗಿ ಜಾತ್ಯತೀತತೆಯು ವರ್ತಿಸಲು ಸಾಧ್ಯವಿಲ್ಲವೆಂದು ಅದು ಪ್ರತಿಪಾದಿಸಿದೆ.

ಏಕರೂಪತೆ ((uniformity))ಗಾಗಿನ ನಮ್ಮ ಹಂಬಲವು, ಸಾಂಸ್ಕೃತಿಕ ವೈವಿಧ್ಯವಿರುವ ನಮ್ಮ ದೇಶದ ಪ್ರಾದೇಶಿಕ ಸಮಗ್ರತೆಗೆ ಬೆದರಿಕೆಯಾಗಕೂಡದೆಂದು ಮಾಜಿ ಸುಪ್ರೀಂಕೋರ್ಟ್ ನ್ಯಾಯಾಧೀಶ ಬಿ.ಎಸ್.ಚೌಹಾಣ್ ನೇತೃತ್ವದ ಕಾನೂನು ಆಯೋಗವು ತಿಳಿಸಿದೆ.

‘‘ಏಕೀಕೃತಗೊಂಡಿರುವ ಒಂದು ದೇಶವು, ‘ಏಕರೂಪತೆ’ಯನ್ನು ಹೊಂದಿರಬೇಕಾದ ಅಗತ್ಯವಿಲ್ಲ. ಒಂದು ದೃಢವಾದ ಪ್ರಜಾಪ್ರಭುತ್ವದಲ್ಲಿ ವಿಭಿನ್ನತೆಯು ಯಾವಾಗಲೂ ತಾರತಮ್ಯವನ್ನು ವ್ಯಕ್ತಗೊಳಿಸಿಲ್ಲ’’ ಎಂದು ಆಯೋಗವು ಅಭಿಪ್ರಾಯಿಸಿದೆ.

ಭಾರತವು ವಿವಿಧ ಧಾರ್ಮಿಕ ಸಮುದಾಯಗಳು ತಮ್ಮದೇ ಆದ ವೈಯಕ್ತಿಕ ಕಾನೂನಿನ ಸಂಹಿತೆಗಳ ವ್ಯಾಪ್ತಿಗೊಳಪಡಲು ಅವಕಾಶ ನೀಡುವಂತಹ ಕಾನೂನುಬದ್ಧವಾದ ಬಹುತ್ವವಾದಿ ವ್ಯವಸ್ಥೆಯನ್ನು ಅನುಸರಿಸುತ್ತಿದೆ. ವಿಭಿನ್ನ ಧಾರ್ಮಿಕ ಅಸ್ಮಿತೆಗಳನ್ನು ರಕ್ಷಿಸುವ ಹಾಗೂ ತಮ್ಮ ಧರ್ಮವನ್ನು ಆಚರಿಸಲು ಪೌರರಿಗಿರುವ ಸಂವಿಧಾನದತ್ತವಾದ ಹಕ್ಕುಗಳನ್ನು ರಕ್ಷಿಸುವ ಮಾರ್ಗ ಇದಾಗಿದೆಯೆಂದು ಪರಿಗಣಿಸಲಾಗಿದೆ.

ಸಂವಿಧಾನವು ಎಲ್ಲಾ ನಾಗರಿಕರಿಗೆ ಕಾನೂನಿನಡಿ ರಕ್ಷಣೆಯನ್ನು ನೀಡಿದೆ. ಮುಸ್ಲಿಮರು 1937ರಲ್ಲಿ ಜಾರಿಗೆ ಬಂದಿರುವ ವೈಯಕ್ತಿಕ ಕಾನೂನಿನ ವ್ಯಾಪ್ತಿಗೆ ಒಳಪಟ್ಟಿದ್ದಾರೆ. ಆದಾಗ್ಯೂ ಸಂವಿಧಾನದ ನಿರ್ಮಾತೃಗಳು, ಸಮಾನವಾದ ಕೌಟುಂಬಿಕ ಕಾನೂನುಗಳು ಇರಬೇಕೆಂದು ಅಭಿಪ್ರಾಯಿಸಿದ್ದರು. ‘‘ಭಾರತದಾದ್ಯಂತ ಎಲ್ಲಾ ನಾಗರಿಕರಿಗೆ ಸಮಾನವಾದ ನಾಗರಿಕ ಸಂಹಿತೆಯನ್ನು ಜಾರಿಗೊಳಿಸಲು ಆಡಳಿತವು ಮುತುವರ್ಜಿ ವಹಿಸಬೇಕು’’ ಎಂದವರು ಸಲಹೆ ನೀಡಿದ್ದರು. ಆದರೆ ಮುಸ್ಲಿಂ ಸಮುದಾಯದ ಸತತ ವಿರೋಧದ ಹಿನ್ನೆಲೆಯಲ್ಲಿ ಅವರು ಆ ಚಿಂತನೆಯನ್ನು ಕೈಬಿಟ್ಟಿದ್ದರು. ಆದಾಗ್ಯೂ ಈ ವಿಷಯವನ್ನು ಅವರು ಅಲ್ಲಿಗೆ ಮುಕ್ತಾಯಗೊಳಿಸಲಿಲ್ಲ. ಎಲ್ಲಾ ಭಾರತೀಯರಿಗೆ ಅನ್ವಯವಾಗುವಂತಹ ಸಮಾನ ನಾಗರಿಕ ಸಂಹಿತೆಯನ್ನು ಅಳವಡಿಸುವ ಚಿಂತನೆಯನ್ನು ಮುಂಬರುವ ತಲೆಮಾರಿನ ವಿವೇಚನೆಗೆ ಬಿಟ್ಟುಬಿಟ್ಟಿದ್ದರು. ತಮ್ಮ ವೈಯಕ್ತಿಕ ಕಾನೂನನ್ನು ಕಾಪಾಡುವ ವಿಷಯದಲ್ಲಿ ಮುಸ್ಲಿಮರು ಕಟಿಬದ್ಧರಾಗಿದ್ದಾರೆ ಹಾಗೂ ಸಮಾನನಾಗರಿಕ ಸಂಹಿತೆಯನ್ನು ಜಾರಿಗೊಳಿಸಲು ಕಾಲ ಪಕ್ವವಾಗಿಲ್ಲ ಎಂಬುದನ್ನು ಸಂವಿಧಾನ ನಿರ್ಮಾತೃಗಳು ಅರಿತುಕೊಂಡಿದ್ದರು.

ಸಮಾನ ನಾಗರಿಕ ಸಂಹಿತೆಯೆಂಬ ಬೆಂಕಿಕಡ್ಡಿಯನ್ನು ಕಳೆದ ಕೆಲವು ವರ್ಷಗಳಿಂದೀಚೆಗೆ ಆಗಾಗ್ಗೆ ಗೀರುತ್ತಲೇ ಬರಲಾಗುತ್ತಿದೆ. ರಾಜಕೀಯ ಬಲಪಂಥೀಯರು ಹಾಗೂ ಇತರ ಹಲವರು, ನಮ್ಮ ಭಾರತೀಯ ಸಂವಿಧಾನವು ರಚನೆಯಾದಾಗಿನಿಂದ ಸಮಾನ ನಾಗರಿಕ ಸಂಹಿತೆಯನ್ನು ಪ್ರತಿಪಾದಿಸುತ್ತಾ ಬಂದಿದ್ದಾರೆ. ಈ ವಿಷಯವು ನಿರಂತರವಾದ ವಿವಾದದ ಬಿರುಗಾಳಿಗೆ, ವಾಗ್ವಾದಗಳಿಗೆ ಹಾಗೂ ಇತಿಹಾಸದ ಕುರಿತಾದ ಚರ್ಚೆಯನ್ನು ಬಿತ್ತಲು ಕಾರಣವಾಗಿದೆ.

ಕೇವಲ ಮುಸ್ಲಿಮರು ಹಾಗೂ ಕ್ರೈಸ್ತರು ಮಾತ್ರವೇ ತಮ್ಮ ಸಾಂಪ್ರದಾಯಿಕ ಹಾಗೂ ಧಾರ್ಮಿಕವಾಗಿ ಬೋಧಿಸಲಾದ ಸಾಂಪ್ರದಾಯಿಕ ಕಾನೂನುಗಳನ್ನು ಅನುಸರಿಸುತ್ತಿದ್ದಾರೆಂಬ ತಪ್ಪು ಗ್ರಹಿಕೆಯನ್ನು ಸಮಾನನಾಗರಿಕ ಸಂಹಿತೆಯ ಜಾರಿಗಾಗಿ ಆಗ್ರಹಿಸುವ ಹೆಚ್ಚಿನ ಜನರು ಹೊಂದಿದ್ದಾರೆ. 1950ರಿಂದೀಚೆಗೆ ಭಾರತದಲ್ಲಿ ಲೆಕ್ಕವಿಲ್ಲದಷ್ಟು ಸುಧಾರಣಾ ಕ್ರಮಗಳು ಜಾರಿಗೊಂಡ ಹೊರತಾಗಿಯೂ ಹೆಚ್ಚಿನ ಹಿಂದೂಗಳು ಕೂಡಾ ತಮ್ಮ ತಮ್ಮ ಜಾತಿ, ಪಂಗಡ ಹಾಗೂ ಸಮುದಾಯಗಳಲ್ಲಿ ಪ್ರಚಲಿತದಲ್ಲಿರುವ ಸಾಂಪ್ರದಾಯಿಕ ಪದ್ಧತಿಗಳನ್ನು ಅನುಸರಿಸುತ್ತಿದ್ದಾರೆ.

ಇಸ್ಲಾಮಿನ ವೈಯಕ್ತಿಕ ಕಾನೂನಾದ ಶರಿಯಾ ಎಂದರೆ ‘ದಾರಿ’ ಅಥವಾ ‘ಮಾರ್ಗ’ ಎಂಬ ಅರ್ಥವಿದೆ. ಶರಿಯಾ ಎಂಬುದು ಮುಸ್ಲಿಮರ ಧಾರ್ಮಿಕ ಸಂಹಿತೆಯಾಗಿದ್ದು, ಅದು ಪಠ್ಯಗಳು ಹಾಗೂ ವ್ಯಾಖ್ಯಾನಗಳ ಅಗಾಧವಾದ ಸಂಗ್ರಹವಾಗಿದೆ. ಶರಿಯಾ ಎಂಬುದು ಮುಸ್ಲಿಮರ ಧಾರ್ಮಿಕ ಸಂಹಿತೆಯಾಗಿದ್ದು, ಅವರ ದೈನಂದಿನ ಕಾರ್ಯಗಳು, ಧಾರ್ಮಿಕ, ಕೌಟುಂಬಿಕ ಬಾಧ್ಯತೆಗಳು ಹಾಗೂ ವಿವಾಹ ಮತ್ತು ವಿಚ್ಛೇದನ, ಆರ್ಥಿಕ ವ್ಯವಹಾರಗಳು ಸೇರಿದಂತೆ ಜೀವನದ ಎಲ್ಲಾ ವಿಷಯಗಳಿಗೆ ಸಂಬಂಧಿಸಿದ ಧಾರ್ಮಿಕ ಸಂಹಿತೆ ಯಾಗಿದೆ. ಪ್ರವಾದಿ ಮುಹಮ್ಮದರ ನಿಧನದ ಬಳಿಕ ಅದನ್ನು ಧಾರ್ಮಿಕ ವಿದ್ವಾಂಸ(ಉಲೇಮಾ)ರುಗಳು ಅಭಿವೃದ್ಧಿಪಡಿಸಿದ್ದರು. ಮುಸ್ಲಿಮರಿಗೆ ನೈತಿಕ ಹಾಗೂ ಕಾನೂನು ಮಾರ್ಗದರ್ಶನವನ್ನು ಒದಗಿಸುವ ಉದ್ದೇಶವನ್ನು ಹೊಂದಿರುವ ಶರಿಯಾವು ಪವಿತ್ರ ಕುರ್‌ಆನ್‌ನ ಸೂಕ್ತಿಗಳು ಹಾಗೂ ಪ್ರವಾದಿ ಮುಹಮ್ಮದರ ನುಡಿಗಳು, ಆಚರಣೆಗಳು ಹಾಗೂ ಬೋಧನೆಗಳನ್ನು ಆಧರಿಸಿದೆ.

ಶರಿಯಾವು ಪ್ರಾಥಮಿಕವಾಗಿ ಕುರ್‌ಆನ್ ಹಾಗೂ ಸುನ್ನಹಾದ ಸೂಕ್ತಿಗಳನ್ನು ಆಧರಿಸಿದೆ. ಕುರ್‌ಆನ್‌ನಲ್ಲಿ ಕಾನೂನು ವಿಷಯಗಳಿಗೆ ಸಂಬಂಧಿಸಿ ಸುಮಾರು 80 ಸೂಕ್ತಿಗಳಿವೆ. ಸಮಾಜದಲ್ಲಿ ಮಹಿಳೆಯರ ಪಾತ್ರ ಹಾಗೂ ಮದುವೆ, ವಿಚ್ಛೇದನ ಹಾಗೂ ಉತ್ತರಾಧಿಕಾರದ ಹಾಗೂ ನೂತನ ವಿಷಯಗಳಿಗೆ ಸ್ಪಂದಿಸಲು ಮುಸ್ಲಿಂ ವಿದ್ವಾಂಸರು ಅನ್ವಯಿಸಿರುವ ವಿವರಣೆಗಳು ಇತ್ಯಾದಿಗಳನ್ನು ಶರಿಯಾ ಒಳಗೊಂಡಿದೆ.

ಸಮಾನ ನಾಗರಿಕ ಸಂಹಿತೆಯು ಲಿಂಗಸಮಾನತೆಯ ನ್ಯಾಯವನ್ನು ಒದಗಿಸುವುದಕ್ಕೆ ಒಂದು ಬ್ರಹ್ಮಾಸ್ತ್ರವೆಂಬುದಾಗಿ ಅತಿಯಾದ ಪ್ರಚಾರ ಮಾಡಲಾಗುತ್ತಿದೆ. ಆದರೆ ಖಂಡಿತವಾಗಿಯೂ, ಅಂತಹ ಯಾವುದೇ ಸನ್ನಿವೇಶಗಳು ಇದರಿಂದ ಸೃಷ್ಟಿಯಾಗಲಾರದು. ಈಗಿನ ತುರ್ತು ಅಗತ್ಯವೆಂದರೆ, ಅಶಾಂತಿ ಹಾಗೂ ಹತಾಶೆಯನ್ನು ಹುಟ್ಟುಹಾಕುವಂತಹ ಮುಸ್ಲಿಮರ ಬಡತನವನ್ನು ನಿವಾರಿಸುವುದಾಗಿದೆ. ಸಾಂಪ್ರದಾಯಿಕ ಕಾನೂನನ್ನು ಬಯಸದವರಿಗೆ ನಮ್ಮ ದೇಶದಲ್ಲಿ ಹಲವಾರು ಅವಕಾಶಗಳಿವೆಯೆಂದು ಸಮಾನ ನಾಗರಿಕ ಸಂಹಿತೆಯ ಹೇರಿಕೆಯನ್ನು ವಿರೋಧಿಸುವವರು ವಾದಿಸುತ್ತಾರೆ. ಈಗಾಗಲೇ ಭಾರತೀಯ ವಿವಾಹ ಕಾಯ್ದೆ, ಭಾರತೀಯ ವಿಚ್ಛೇದನ ಕಾಯ್ದೆ, ಭಾರತೀಯ ಉತ್ತರಾಧಿಕಾರ ಕಾಯ್ದೆಯಂತಹ ಹಲವಾರು ಕಾನೂನುಗಳು ಅಸ್ತಿತ್ವದಲ್ಲಿವೆ. ಈ ಕಾನೂನಿನಡಿ ಯಾವುದೇ ಭಾರತೀಯರು ಯಾವುದೇ ಜಾತಿ, ಧರ್ಮ, ಪಂಗಡಕ್ಕೆ ಸೇರಿದವರಾಗಿದ್ದರೂ, ಪರಸ್ಪರ ವಿವಾಹವಾಗಲು ಅವಕಾಶ ನೀಡುತ್ತದೆ ಹಾಗೂ ಜಾತ್ಯತೀತ ನಾಗರಿಕ ಕಾನೂನುಗಳ ವ್ಯಾಪ್ತಿಗೆ ಒಳಪಡಬಹುದಾಗಿದೆ. ಹೀಗಾಗಿ, ಯಾರ ಮೇಲೂ ಜಾತ್ಯತೀತ ಸಮಾನ ನಾಗರಿಕ ಸಂಹಿತೆಯನ್ನು ಹೇರುವ ಅಗತ್ಯವಿರುವುದಿಲ್ಲ.

ಇಸ್ಲಾಂ ಧರ್ಮವು ಮಹಿಳೆಯರ ಅಭಿವೃದ್ಧಿಯ ಪರವಾಗಿದೆ. ಸ್ತ್ರೀ, ಪುರುಷರಿಬ್ಬರಿಗೂ ಸಮಾನವಾದ ಅವಕಾಶಗಳನ್ನು ಒದಗಿಸುವುದನ್ನು ಅದು ಬೆಂಬಲಿಸುತ್ತದೆ. ಹೀಗಾಗಿ ಅವರು ತಮ್ಮ ಇಸ್ಲಾಮೀ ನಂಬಿಕೆಗಳಿಗೆ ಪ್ರತಿಕೂಲವಾದ ಕಾನೂನುಗಳ ಬಗ್ಗೆ ಒಲವು ಹೊಂದಿಲ್ಲ. ಧಾರ್ಮಿಕವಾಗಿ ಶ್ರದ್ಧಾವಂತರೂ, ದೃಢಮನಸ್ಕರೂ ಹಾಗೂ ಆಧುನಿಕ ಮನೋಭಾವದ ಮುಸ್ಲಿಂ ಮಹಿಳೆಯರು ಕೂಡಾ ಮಹಿಳಾ ಹಕ್ಕುಗಳು ಇಸ್ಲಾಮಿಕ್ ತತ್ವಗಳ ವ್ಯಾಪ್ತಿಯೊಳಗೆ ಇರಬೇಕೆಂದು ವಾದಿಸುತ್ತಾರೆ.

ಹದೀಸ್‌ಗಳು ಹಾಗೂ ಕುರ್‌ಆನ್‌ನಲ್ಲಿ ಮಹಿಳೆಯರ ಹಕ್ಕುಗಳನ್ನು ಸಮರ್ಥಿಸುವಂತಹ ಸೂಕ್ತಿಗಳ ದೊಡ್ಡ ಪಟ್ಟಿಯನ್ನೇ ಮಾಡಬಹುದಾಗಿದೆ. ಮಹಿಳೆಯರ ಶಿಕ್ಷಣದ ಹಕ್ಕು, ಕೆಲಸ ಮಾಡುವ ಹಕ್ಕು ಹಾಗೂ ತಾವು ಸಂಪಾದಿಸಿದ ಹಣವನ್ನು ತಮ್ಮಲ್ಲಿ ಇರಿಸಿಕೊಳ್ಳುವ ಅವರ ಹಕ್ಕನ್ನು ಬೆಂಬಲಿಸುವಂತಹ ಹಲವಾರು ಸೂಕ್ತಿಗಳು ಅವುಗಳಲ್ಲಿವೆ. ಆದರೆ ಕೆಲವು ಮಾಧ್ಯಮಗಳು, ಸಮಸ್ಯೆಗೆ ಮೂಲ ಕಾರಣವನ್ನು ಹುಡುಕುವ ಬದಲು, ಸಮಾನ ನಾಗರಿಕ ಸಂಹಿತೆಯ ಕುರಿತಾದ ಸಂಕೀರ್ಣ ಚರ್ಚೆಯನ್ನು ಪೊಳ್ಳು ಘೋಷಣೆಗಳು ಹಾಗೂ ವಾಗ್ವಾದಗಳಿಗಷ್ಟೇ ಸೀಮಿತಗೊಳಿಸಿವೆ.

ಹಲವಾರು ದೇಶಗಳಲ್ಲಿ ವೈಯಕ್ತಿಕ ಕಾನೂನುಗಳು ಹಾಗೂ ಜಾತ್ಯತೀತ ಕಾನೂನುಗಳು ಜೊತೆಯಾಗಿ ಅಸ್ತಿತ್ವದಲ್ಲಿರುವ ಹಲವಾರು ನಿದರ್ಶನಗಳಿವೆ. ವಾಸ್ತವಿಕವಾಗಿ ಭಾರತದ ಸಂವಿಧಾನವನ್ನು ರೂಪಿಸಿದಂತಹ ಸಂವಿಧಾನ ರಚನಾ ಸಂಸತ್ ಕೂಡಾ ಸಮಾನ ನಾಗರಿಕ ಸಂಹಿತೆಯು ಅಂತಿಮ ಆದೇಶವಲ್ಲವೆಂದು ಸ್ಪಷ್ಟಪಡಿಸಿತ್ತು.

ಶ್ರೀಲಂಕಾದಲ್ಲಿಯೂ ಮುಸ್ಲಿಮರು ತಮ್ಮದೇ ಆದ ವೈಯಕ್ತಿಕ ಕಾನೂನುಗಳನ್ನು ಹೊಂದಿದ್ದಾರೆ ಹಾಗೂ ದೇಶದ ಮುಖ್ಯವಾಹಿನಿಯೊಂದಿಗೆ ಅತ್ಯುತ್ತಮವಾಗಿ ಸಮ್ಮಿಳಿತಗೊಂಡಿದ್ದಾರೆ. ಆ ದೇಶದಲ್ಲಿ ಮುಸ್ಲಿಮರ ವೈಯಕ್ತಿಕ ಕಾನೂನುಗಳನ್ನು ನ್ಯಾಯವೇತ್ತರು ಮುಕ್ತಕಂಠದಿಂದ ಪ್ರಶಂಸಿಸಿದ್ದಾರೆ. ಕೆನಡದ ಕ್ಯೂಬೆಕ್ ಪ್ರಾಂತವೂ ಮುಸ್ಲಿಮರಿಗೆ ಪ್ರತ್ಯೇಕ ಕಾನೂನು ವ್ಯವಸ್ಥೆಯನ್ನು ಹೊಂದಿದೆ. ಸಿಂಗಾಪುರ ಹಾಗೂ ಇಸ್ರೇಲ್ ಕೂಡಾ ಮುಸ್ಲಿಂ ವೈಯಕ್ತಿಕ ಕಾನೂನನ್ನು ಅಂಗೀಕರಿಸಿದೆ. 1973ರ ಜುಲೈನಲ್ಲಿ ಇಸ್ಲಾಮಿ ಅಧ್ಯಯನಕಾರ ಅಹ್ರೊನ್ ಲಾಯಿಶ್ ಎಂಬವರು 1973ರಲ್ಲಿ ಮಂಡಿಸಿದ ಪ್ರಬಂಂಧವೊಂದರಲ್ಲಿ, ಇಸ್ರೇಲ್‌ನ ಶರಿಯಾ ನ್ಯಾಯಾಲಯವು, ಆ ದೇಶದಲ್ಲಿ ಅಸ್ತಿತ್ವದಲ್ಲಿರುವ ಇಸ್ರೇಲಿ ನಾಗರಿಕ ಕಾನೂನಿಗಿಂತಲೂ ಹೆಚ್ಚು ದಕ್ಷವಾಗಿದೆಯೆಂದು ಶ್ಲಾಘಿಸಿದ್ದರು. ಮುಕ್ತ, ಆಧುನಿಕ ಹಾಗೂ ಅಭಿವೃದ್ಧಿ ಹೊಂದಿದ ಸಮಾಜದ ಬೇಡಿಕೆಗಳನ್ನು ಅನುಗುಣವಾಗಿ ವಿಕಸನಗೊಳ್ಳುವ ಸಾಮರ್ಥ್ಯವನ್ನು ಅದು ಹೊಂದಿದೆ. ಇಸ್ರೇಲ್‌ನ ಧಾರ್ಮಿಕ ನ್ಯಾಯಾಲಯಗಳು, ನ್ಯಾಯಾಂಗ ವ್ಯವಸ್ಥೆಯ ಭಾಗವಾಗಿದ್ದು, ಅರ್ಜಿದಾರರಿಗೆ ತಮ್ಮ ಮೊಕದ್ದಮೆಗಳನ್ನು ಧಾರ್ಮಿಕ ಅಥವಾ ಸಿವಿಲ್ ನ್ಯಾಯಾಲಯಗಳಲ್ಲಿ ಹೂಡುವುದನ್ನು ತಾವಾಗಿಯೇ ಆಯ್ಕೆ ಮಾಡುವ ಅವಕಾಶವನ್ನು ನೀಡಲಾಗಿದೆ.

ಭಾರತ ಕೂಡಾ ಭಾಗೀದಾರನಾಗಿರುವ ಅಂತರ್‌ರಾಷ್ಟ್ರೀಯ ನಾಗರಿಕ ಹಾಗೂ ಮಾನವಹಕ್ಕುಗಳ ಒಡಂಬಡಿಕೆಯ 27ನೇ ವಿಧಿಯು ಮಾನವಹಕ್ಕುಗಳ ಬಗ್ಗೆ ಕಾಳಜಿಯನ್ನು ಹೊಂದಿದೆ. ಆಫ್ರಿಕಾ ಹಾಗೂ ಏಶ್ಯ ಖಂಡದ ದೇಶಗಳಲ್ಲಿ ಸಾಂಪ್ರದಾಯಿಕ ಕಾನೂನುಗಳು, ಸಾಮಾನ್ಯ ಕಾನೂನು ವ್ಯವಸ್ಥೆಯ ಅವಿಭಾಜ್ಯ ಅಂಗವಾಗಿ ಬಿಟ್ಟಿದೆ. ಅಲ್ಲಿ ವಿವಿಧ ಜನಾಂಗೀಯ ಗುಂಪುಗಳು ಈಗಲೂ ವೈಯಕ್ತಿಕ ಹಾಗೂ ಇತರ ಕ್ಷೇತ್ರಗಳಲ್ಲಿ, ಸಾಂಪ್ರದಾಯಿಕ ಕಾನೂನಿನ ವ್ಯಾಪ್ತಿಗೊಳಪಟ್ಟಿದ್ದಾರೆ. ಅಲ್ಪಸಂಖ್ಯಾತರ ಸಂಸ್ಕೃತಿಗೆ ಪರಿಣಾಮಕಾರಿ ಹಾಗೂ ಸಂಪೂರ್ಣವಾದ ಭದ್ರತೆ ದೊರೆಯಬೇಕಾದರೆ, ಅವರ ಬದುಕಿನ ಅವಿಭಾಜ್ಯ ಅಂಗವಾಗಿರುವ ಸಂಪ್ರದಾಯ ಹಾಗೂ ಕಾನೂನು ಪರಂಪರೆಗಳನ್ನು ಕಾಪಾಡಬೇಕಾಗಿದೆ ಎಂದು ಈ ಒಡಂಬಡಿಕೆ ಪ್ರತಿಪಾದಿಸಿದೆ.

ಸುಧಾರಣೆಯೆಂಬುದು ಪುಂಡುಕುದುರೆಯಾಗಿದ್ದು, ಅದಕ್ಕೆ ಸರಿಯಾಗಿ ಜೀನು ಕಟ್ಟದಿದ್ದರೆ ಅದು ಹುಚ್ಚುಗಟ್ಟಿ ಓಡುವುದು ಖಂಡಿತ. ವೈವಿಧ್ಯತೆಯನ್ನು ಒಪ್ಪಿಕೊಳ್ಳುವುದು ಆಧುನಿಕ ಮನೋವೃತ್ತಿಯಾಗಿದೆ. ಮುಸ್ಲಿಂ ಧರ್ಮಗುರುಗಳು ಕೂಡಾ ಈ ನಿಟ್ಟಿನಲ್ಲಿ ತಮ್ಮ ಪಾತ್ರವನ್ನು ಅರಿತುಕೊಳ್ಳಬೇಕಾಗಿದೆ. ಕುರ್‌ಆನ್ ಹಾಗೂ ಅದರ ಸಂದೇಶವಾಹಕ ಇಬ್ಬರಿಂದಲೂ ಉತ್ಕೃಷ್ಟವಾದ ಸ್ಥಾನಮಾನವನ್ನು ಪಡೆದುಕೊಂಡಿರುವ ಮಹಿಳೆಯರ ಸುಧಾರಣೆಗೆ ಕಾಳಜಿಯನ್ನು ಪ್ರದರ್ಶಿಸುವಂತಹಹ ಮನೋಭಾವವನ್ನು ಅವರು ಪ್ರದರ್ಶಿಸಬೇಕಾಗಿದೆ.

ಭಾರತವು ಬಹುತ್ವವಾದದ ಧ್ವಜವಾಹಕವಾಗಿದೆ ಹಾಗೂ ಅದು ಯಾವತ್ತಿಗೂ ಸಹಿಷ್ಣುತೆಯ ಪರಸ್ಪರ ಗೌರವ ಹಾಗೂ ಶಾಂತಿಯುತವಾದ ಸಹಬಾಳ್ವೆಯ ದೀಪವನ್ನು ಎತ್ತಿ ಹಿಡಿದಿದೆ. ದೇಶದ ಐದನೆ ಒಂದರಷ್ಟು ಜನಸಂಖ್ಯೆಯನ್ನು ದೂರವಿಡುವುದು, ಶತಮಾನಗಳಷ್ಟು ಹಳೆಯದಾದ ಈ ಪರಿಶುದ್ಧ ತತ್ವಗಳಿಗೆ ವಿರುದ್ಧವಾದುದಾಗಿದೆ.

ಪ್ರಸಿದ್ಧ ರಾಜಕೀಯ ಇತಿಹಾಸಕಾರರಾದ ಸುನೀಲ್ ಖಿಲ್‌ನಾನಿ ಅವರು ತನ್ನ ಪ್ರಸಿದ್ಧ ಕೃತಿ ‘ಐಡಿಯಾ ಆಫ್ ಇಂಡಿಯಾ’ದಲ್ಲಿ ಅತ್ಯಂತ ಹೃದಯಸ್ಪರ್ಶಿ ಸಾಲುಗಳನ್ನು ಬರೆದಿದ್ದು, ಅದು ಪ್ರಸಕ್ತ ಸನ್ನಿವೇಶಕ್ಕೆ ಅತ್ಯಂತ ಪ್ರಸ್ತುತವಾದುದಾಗಿದೆ.

‘‘ಏಕರೂಪಿ ಹಾಗೂ ಒಂದು ವರ್ಗವನ್ನು ಹೊರತುಪಡಿಸಲ್ಪಟ್ಟ ಗಣರಾಜ್ಯಗಳಿಗಿಂತ ವೈವಿಧ್ಯಮಯ ಹಾಗೂ ಸಂಘರ್ಷಕಾರಿ ಹಿತಾಸಕ್ತಿಗಳನ್ನು ಹೊಂದಿದ ದೊಡ್ಡ ಗಣರಾಜ್ಯಗಳು, ಸ್ವಾತಂತ್ರಕ್ಕೆ ಅತ್ಯುತ್ತಮ ಆವಾಸಸ್ಥಾನವಾಗಿದೆ ಹಾಗೂ ನಿರಂಕುಶತೆಯ ವಿರುದ್ಧ ಸುರಕ್ಷಿತ ಸ್ವರ್ಗವಾಗಿದೆ. ಇಲ್ಲಿ ವಿವಿಧ ಸಮುದಾಯಗಳು ಪರಸ್ಪರರ ಬಗ್ಗೆ ಆತ್ಮಾವಲೋಕನ ಮಾಡಬಹುದಾಗಿದೆ, ತಮ್ಮ ಸೈದ್ಧಾಂತಿಕ ಒಲವಿನಲ್ಲಿ ಸುಧಾರಣೆಯನ್ನು ಮಾಡಬಹುದಾಗಿದೆ ಹಾಗೂ ತಮ್ಮ ಸಾಮರ್ಥ್ಯವನ್ನು ಮೃದುಗೊಳಿಸಬಹುದಾಗಿದೆ.

ಮಾನವನ ಆಕಾಂಕ್ಷೆಗಳು ಮೂಲಭೂತವಾಗಿ ಮೃಗೀಯವಾಗಿರುತ್ತದೆ ಹಾಗೂ ಒಂದು ರೀತಿಯಲ್ಲಿ ಸ್ವಾರ್ಥಯುತವಾಗಿರುತ್ತದೆ. ಆದರೆ ಧರ್ಮ ಗ್ರಂಥಗಳು ಅವುಗಳಿಗೆ ಕಡಿವಾಣ ಹಾಕಲು ಯತ್ನಿಸುತ್ತವೆ. ಉತ್ತಮ ಸಮಾಜದ ಸೃಷ್ಟಿಯೇ ಧರ್ಮಗ್ರಂಥಗಳ ಉದ್ದೇಶವಾಗಿದೆ. ನ್ಯಾಯ, ಕರುಣೆ ಹಾಗೂ ವಿವೇಕದ ತಳಹದಿಯಲ್ಲಿ ಅವು ನಿಂತಿವೆ. ಮಾನವನಲ್ಲಿ ದೈವಿಕ ಗುಣದ ಸೈತಾನನ ಗುಣಲಕ್ಷಣ ಕೂಡಾ ಇರುತ್ತದೆೆ. ಅದನ್ನು ನಿಯಂತ್ರಿಸಲು ಕಾನೂನುಗಳೇ ನಮಗಿ ರುವ ದಾರಿಯಾಗಿದೆ. ಕೇವಲ ಪೂರ್ವಗ್ರಹಪೀಡಿತರಾಗಿ ಅಥವಾ ಅಸಮರ್ಪಕ ತಿಳುವಳಿಕೆಯಿಂದಾಗಿ ಧಾರ್ಮಿಕ ಕಾನೂನುಗಳನ್ನು ತಿರಸ್ಕರಿಸುವುದು, ಸ್ನಾನ ಮಾಡಿಸಿದ ನೀರಿನೊಂದಿಗೆ ಮಗುವನ್ನೂ ಹೊರಗೆ ಎಸೆದಂತಾದೀತು.

ಕೃಪೆ: countercurrents.org

Writer - ಮೊಯಿನ್ ಖಾಜಿ

contributor

Editor - ಮೊಯಿನ್ ಖಾಜಿ

contributor

Similar News