ಬಹರೈನ್: 'ಕನ್ನಡ ಭವನ' ನಿರ್ಮಾಣಕ್ಕೆ ಸಿದ್ಧತೆ

Update: 2018-09-10 12:31 GMT

ಬಹರೈನ್, ಸೆ. 10: ಸುಮಾರು 10 ಕೋಟಿ ರೂ. ವೆಚ್ಚದಲ್ಲಿ ಬಹರೈನ್ ದ್ವೀಪ ರಾಷ್ಟ್ರದಲ್ಲಿ ನಿರ್ಮಾಣಗೊಳ್ಳಲಿರುವ ಬಹರೈನ್ ಕನ್ನಡಿಗರ ಕನ್ನಡ ಭವನಕ್ಕೆ ಇಲ್ಲಿನ ರಾಜ್ಯ ಪ್ರಶಸ್ತಿ ವಿಜೇತ ಕನ್ನಡ ಸಂಘ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ.

ದ್ವೀಪರಾಷ್ಟ್ರದ ಹೃದಯ ಭಾಗವಾದ ಮನಾಮದಲ್ಲಿ ತಲೆ ಎತ್ತಲಿರುವ ಈ ಭವನಕ್ಕೆ ಬೇಕಾಗಿರುವ ಸ್ಥಳೀಯ ಪರವಾನಿಗೆಗಳು, ಒಪ್ಪಂದಗಳು ಮುಂತಾದ ಎಲ್ಲಾ ಪ್ರಾಥಮಿಕ ಪ್ರಕ್ರಿಯೆಗಳು ಸಂಪೂರ್ಣಗೊಂಡಿದ್ದು ಕಟ್ಟಡದ ಕಾಮಗಾರಿಯು ಶೀಘ್ರದಲ್ಲಿಯೇ ಪ್ರಾರಂಭಗೊಳ್ಳಲಿದೆ. ಈ ನಿಟ್ಟಿನಲ್ಲಿ ಕನ್ನಡ ಸಂಘದ ಅಧ್ಯಕ್ಷ ಪ್ರದೀಪ್ ಶೆಟ್ಟಿ ನೇತೃತ್ವದಲ್ಲಿ ಪ್ರಧಾನ ಕಾರ್ಯದರ್ಶಿ ಕಿರಣ್ ಉಪಾಧ್ಯಾಯ, ಮನೋರಂಜನಾ ಕಾರ್ಯದರ್ಶಿ ವರುಣ್ ಹೆಗ್ಡೆ ಯವರನ್ನು ಒಳಗೊಂಡ ಉನ್ನತ ಮಟ್ಟದ ನಿಯೋಗದೊಂದಿಗೆ ರಾಜ್ಯದ ಮುಖ್ಯಮಂತ್ರಿ ಕುಮಾರ ಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಸಚಿವೆ ಜಯಮಾಲಾ ಅವರುಗಳನ್ನು ಭೇಟಿಯಾಗಿ ಕಟ್ಟಡ ನಿರ್ಮಾಣಕ್ಕೆ ಹೆಚ್ಚಿನ ಅನುದಾನವನ್ನು ಕೋರುವ ಮನವಿಯೊಂದಿಗೆ ಮಾತುಕತೆ ನಡೆಸಿದರು.

ಸಂಭಾವ್ಯ ಕನ್ನಡ ಭವನದ ನೀಲಿ ನಕ್ಷೆಯನ್ನು ಮುಖ್ಯಮಂತ್ರಿಗಳಿಗೆ ನೀಡಿದ ಅಧ್ಯಕ್ಷ ಪ್ರದೀಪ್ ಶೆಟ್ಟಿ ಕನ್ನಡ ಸಂಘದ ಕಾರ್ಯವೈಖರಿಯ ಬಗ್ಗೆ ಮುಖ್ಯಮಂತ್ರಿಗೆ ವರದಿ ನೀಡುತ್ತಾ ಕಳೆದ ನಾಲ್ಕು ದಶಕಗಳಿಂದ ಕೊಲ್ಲಿಯ ಮಣ್ಣಿನಲ್ಲಿ ಕನ್ನಡದ ಕಂಪನ್ನು ಪಸರಿಸುತ್ತಾ ಕನ್ನಡ ಕಲೆ, ಭಾಷೆ , ಸಂಸ್ಕೃತಿಗಳನ್ನು ಉಳಿಸಿ, ಬೆಳೆಸುವಲ್ಲಿ ಅನನ್ಯ ಕೊಡುಗೆಯನ್ನು ನೀಡುತ್ತಾ ಬಂದಿರುವ ಕನ್ನಡ ಸಂಘವು ಕರ್ನಾಟಕದ ಸಾಂಸ್ಕೃತಿಕ ರಾಯಭಾರಿಯಂತೆ ಸೇವೆ ಸಲ್ಲಿಸುತ್ತಿದೆ ಎಂದರು.

ಸುಮಾರು 20,000 ಕನ್ನಡಿಗರು ನೆಲೆಸಿರುವ ಈ ದ್ವೀಪ ರಾಷ್ಟ್ರದಲ್ಲಿ ಸುಸಜ್ಜಿತ ಕನ್ನಡ ಭವನದ ಅಗತ್ಯತೆಯಿದ್ದು ಇದಾಗಲೇ ಕಟ್ಟಡ ನಿರ್ಮಾಣಕ್ಕೆ ಬೇಕಾಗಿರುವ ಎಲ್ಲಾ ಪೂರ್ವಭಾವಿ ಪ್ರಕ್ರಿಯೆಗಳು ಮುಗಿದಿದ್ದು ,ಸುಮಾರು 10 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಈ ಭವನಕ್ಕೆ ತಾವು ಕರ್ನಾಟಕ ಸರಕಾರದಿಂದ ಇನ್ನಷ್ಟು ಹೆಚ್ಚಿನ ಅನುದಾನವನ್ನು ನೀಡಬೇಕೆಂದು ಮನವಿ ಮಾಡಿದರು.

ಪ್ರದೀಪ್ ಶೆಟ್ಟಿ ಅವರ ಮನವಿಗೆ ಪೂರಕವಾಗಿ ಸ್ಪಂದಿಸುತ್ತಾ ಮಾತನಾಡಿದ  ಮುಖ್ಯಮಂತ್ರಿ ಅವರು ಕನ್ನಡ ಸಂಘದ ಚಟುವಟಿಕೆಗಳ ಬಗ್ಗೆ ತಿಳಿದು ಶ್ಲಾಘಿಸುತ್ತಾ ಅತೀವ ಹರ್ಷ ವ್ಯಕ್ತಪಡಿಸಿದ್ದರಲ್ಲದೆ, ಖಂಡಿತವಾಗಿಯೂ ಕರ್ನಾಟಕ ಸರಕಾರದಿಂದ ತಮಗೆ ಸಾಧ್ಯವಾದಷ್ಟು ಅನುದಾನವನ್ನು ನೀಡುತ್ತೇವೆಂದು ಭರವಸೆ ನೀಡಿದರು. 

Writer - ಕಮಲಾಕ್ಷ ಅಮೀನ್

contributor

Editor - ಕಮಲಾಕ್ಷ ಅಮೀನ್

contributor

Similar News