×
Ad

ಕೇಂದ್ರ ಸರಕಾರದ ಸ್ವಚ್ಛ ಭಾರತ ಅಭಿಯಾನದಲ್ಲಿ ಮಲಹೊರುವ ಪದ್ಧತಿ ನಿಷೇಧಕ್ಕೆ ಯೋಜನೆಯಿಲ್ಲ: ಬೆಜವಾಡ ವಿಲ್ಸನ್

Update: 2018-09-15 21:00 IST

ಬೆಂಗಳೂರು, ಸೆ.15: ಸ್ವಚ್ಛ ಭಾರತ ಅಭಿಯಾನದ ಕ್ರಿಯಾ ಯೋಜನೆಯಲ್ಲಿ ಮಲ ಹೊರುವ ಪದ್ಧತಿ ನಿಷೇಧದ ಕುರಿತು ಒಂದು ಅಂಶವು ಇಲ್ಲವೆಂದು ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ಬೆಜವಾಡ ವಿಲ್ಸನ್ ತಿಳಿಸಿದರು. 

ಶನಿವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಗರದ ನಯನ ಸಭಾಂಗಣದಲ್ಲಿ ಆಯೋಜಿಸಿದ್ದ ಮನೆಯಂಗಳದಲ್ಲಿ ಮಾತುಕತೆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದ ಅವರು, ಸ್ವಚ್ಛ ಭಾರತ ಅಭಿಯಾನದ ಮೂಲಕ ಮಲಹೊರುವ ಪದ್ಧತಿಯನ್ನು ನಿಷೇಧಿಸಲಾಗುವುದು ಎಂದು ಹೇಳಲಾಗುತ್ತಿದೆ. ಆದರೆ, ಅದಕ್ಕೆ ಸಂಬಂಧಿಸಿದ ಯಾವುದೆ ಕಾರ್ಯಕ್ರಮವನ್ನು ಇಲ್ಲಿಯವರೆಗೂ ಮಾಡಿಲ್ಲವೆಂದು ತಿಳಿಸಿದರು.

ಸ್ವಚ್ಛ ಭಾರತ ಅಭಿಯಾನದ ಕಾರ್ಯಕ್ರಮಗಳಿಗೂ ಪೌರಕಾರ್ಮಿಕರು ಮಾಡುವ ಕೆಲಸಕ್ಕೂ ಸಂಬಂಧ ಕಲ್ಪಿಸಲು ಸಾಧ್ಯವಿಲ್ಲ. ಕೇವಲ ಶೌಚಾಲಯ ಕಟ್ಟುವುದರಿಂದ ಮಲಹೊರುವ ಪದ್ಧತಿ ನಿಷೇಧವಾಗುವುದಿಲ್ಲ. ಕೆಲವು ಜನಪ್ರತಿನಿಧಿಗಳು, ಸಂಘ-ಸಂಸ್ಥೆಗಳು ಕೇವಲ ಫ್ಯಾಷನ್‌ಗಾಗಿ, ಜನಪ್ರಿಯತೆಗಾಗಿ ಸ್ವಚ್ಛಭಾರತ ಅಭಿಯಾನವನ್ನು ಕೈಗೊಳ್ಳಲಾಗುತ್ತಿದೆ ಎಂದು ಅವರು ಖಂಡಿಸಿದರು.

ಕೇಂದ್ರ ಸರಕಾರ ಸ್ವಚ್ಛ ಭಾರತ ಅಭಿಯಾನಕ್ಕೆ 2ಲಕ್ಷ ಕೋಟಿ ರೂ. ಖರ್ಚು ಮಾಡುತ್ತಿದೆ. ಆದರೆ, ಮಲ ಹೊರುವ ಕೆಲಸವನ್ನು ಬಿಡುವವರಿಗೆ 1ಲಕ್ಷ ರೂ.ನಿಂದ 15ಲಕ್ಷ ರೂ.ವರೆಗೆ ಪರಿಹಾರ ಕೊಡಬೇಕು ಎಂದು ಕಾನೂನು ಮಾಡಲಾಗಿದೆ. ಇಲ್ಲಿಯವರೆಗೂ ಯಾರಿಗೂ ಪರಿಹಾರ ಸಿಕ್ಕಿಲ್ಲವೆಂದು ಅವರು ಆರೋಪಿಸಿದರು.

ದೇಶದಲ್ಲಿರುವ ಬಹು ಕಟ್ಟಡಗಳಲ್ಲಿ ಲಿಫ್ಟ್, ಹವಾನಿಯಂತ್ರಿತ(ಎಸಿ) ಸೇರಿದಂತೆ ಅತ್ಯಾಧುನಿಕ ಯಂತ್ರಗಳನ್ನು ಅಳವಡಿಸಲಾಗಿರುತ್ತದೆ. ಆದರೆ, ಮಲದ ಗುಂಡಿಯನ್ನು ಶುಚಿ ಮಾಡುವುದಕ್ಕೆ ಮಾತ್ರ ಯಾವ ಯಂತ್ರವನ್ನು ಬಳಸದೆ, ಪೌರಕಾರ್ಮಿಕರನ್ನು ಮಲದ ಗುಂಡಿಗೆ ಇಳಿಸುತ್ತಾರೆ. ಈ ಬಗ್ಗೆ ಯಾವ ಅಧಿಕಾರಿಗಳು, ನ್ಯಾಯಾಲಯ, ಪೊಲೀಸ್ ವ್ಯವಸ್ಥೆ ಮಾತನಾಡುವುದಿಲ್ಲವೆಂದು ಅವರು ವಿಷಾದಿಸಿದರು.

ಪೌರಕಾರ್ಮಿಕರು ಮಲದ ಗುಂಡಿಯಲ್ಲಿ ಬಿದ್ದು ಸಾವನ್ನಪ್ಪಿದಾಗ ಯಾವ ಅಧಿಕಾರಿಯು ಇದರ ಹೊಣೆಗಾರಿಕೆಯನ್ನು ಹೊರುವುದಿಲ್ಲ. ಅಧಿಕಾರಿಗಳ ಈ ನಿಸ್ಸಾಯಕತೆ, ನಿರ್ಲಕ್ಷತೆ ಹಾಗೂ ಸ್ವಾರ್ಥ ಭಾವನೆಯಿಂದಾಗಿಯೆ ಮಲ ಹೊರತು ಪದ್ಧತಿ ಇನ್ನೂ ಜೀವಂತವಾಗಿದೆ, ಯಾವುದೆ ಒಬ್ಬ ಅಧಿಕಾರಿ, ಜನಪ್ರತಿನಿಧಿ ಪೌರಕಾರ್ಮಿಕರ ಸಾವಿಗೆ ಹೊಣೆಹೊತ್ತು, ಮಲ ಹೊರುವ ಪದ್ಧತಿಯ ನಿರ್ಮೂಲನಕ್ಕೆ ಮುಂದಾದರೆ, ಇವರ ಜೊತೆಗೆ ಸಾವಿರಾರು ಮಂದಿ ಕೈ ಜೋಡಿಸಲಿದ್ದಾರೆ ಎಂಬುದರಲ್ಲಿ ಅನುಮಾನವೆ ಇಲ್ಲವೆಂದು ಅವರು ಹೇಳಿದರು.

ಪೌರಕಾರ್ಮಿಕ ವೃತ್ತಿ ಮಾಡದಿದ್ದರೂ ಆ ಸಮುದಾಯದಲ್ಲಿ ಹುಟ್ಟಿದ ಕಾರಣಕ್ಕಾಗಿ ಇಡೀ ಸಮುದಾಯವನ್ನು ಆ ವೃತ್ತಿಯಿಂದಲೆ ಗುರುತಿಸಲಾಗುತ್ತಿದೆ. ಇದು ಭಾರತ ಜಾತಿ ವ್ಯವಸ್ಥೆಯ ಕ್ರೂರತೆಗೆ ಸಾಕ್ಷಿಯಾಗಿದೆ. ಹುಟ್ಟಿದ ಯಾವ ವ್ಯಕ್ತಿಯು ಪೌರಕಾರ್ಮಿಕನಾಗಲು ಇಷ್ಟಪಡುವುದಿಲ್ಲ. ಆದರೆ, ಭಾರತದ ಜಾತಿ ವ್ಯವಸ್ಥೆ ಪೌರಕಾರ್ಮಿಕ ವೃತ್ತಿಗೆ ಒತ್ತಾಯ ಪೂರ್ವಕವಾಗಿ ದೂಡುತ್ತಿದೆ ಎಂದು ಅವರು ಹೇಳಿದರು.

ಭಾರತದ ಜಾತಿ ವ್ಯವಸ್ಥೆಯ ಅಂತಃಸತ್ವವನ್ನು ಅರಿಯಲು ಡಾ.ಬಿ.ಆರ್.ಅಂಬೇಡ್ಕರ್ ಚಿಂತನೆಗಳು ದೇಶದ ಪ್ರತಿಯೊಬ್ಬ ಪ್ರಜೆಗೂ ಅಗತ್ಯವಾಗಿದೆ. ಆದರೆ, ನಮ್ಮ ಪಠ್ಯಕ್ರಮದಲ್ಲಿ ಅಂಬೇಡ್ಕರ್ ಚಿಂತನೆ ಕುರಿತು ಓದಲು ಅವಕಾಶವಿಲ್ಲದಾಗಿದೆ. ಹೀಗಾಗಿ ಸಂಬಂಧಪಟ್ಟ ಶಿಕ್ಷಣ ತಜ್ಞರು, ಚಿಂತಕರು ನಮ್ಮ ಶಿಕ್ಷಣ ವ್ಯವಸ್ಥೆಯ ಪ್ರತಿ ತರಗತಿಯಲ್ಲಿ ಅಂಬೇಡ್ಕರ್ ಚಿಂತನೆಗಳನ್ನು ಪಠ್ಯವಾಗಿ ಅಳವಡಿಸಬೇಕು ಎಂದು ಅವರು ಒತ್ತಾಯಿಸಿದರು.

ಗೌರಿ ಹತ್ಯೆ ಕನ್ನಡ ಸಂಸ್ಕೃತಿಗೆ ಮಾಡಿದ ಅವಮಾನ

 ಹಿರಿಯ ಪತ್ರಕರ್ತೆ ಗೌರಿ ಲಂಕೇಶ್, ಸಂಶೋಧಕ ಎಂ.ಎಂ.ಕಲಬುರ್ಗಿ ಹತ್ಯೆ ಕನ್ನಡ ಸಂಸ್ಕೃತಿಗೆ ಮಾಡಿದ ಅವಮಾನ. ಕನ್ನಡನಾಡಿನ ಸಂಸ್ಕೃತಿ ಎಲ್ಲರನ್ನು, ಎಲ್ಲವನು ಒಳಗೊಳಿಸಿಕೊಳ್ಳುವಂತಹ ಹೃದಯವಿರುವಂತಹದ್ದಾಗಿದೆ. ಇಂತಹ ಸಂಸ್ಕೃತಿಯನ್ನು ದೇಶದ ಇತರೆ ಭಾಗಗಳಲ್ಲಿ ನೋಡಲು ಸಾಧ್ಯವಿಲ್ಲ. ಆದರೆ, ಇತ್ತೀಚಿಗೆ ನಮ್ಮ ಸಂಸ್ಕೃತಿಗೆ ಅವಮಾನ ಮಾಡುವಂತಹ ಕೃತ್ಯಗಳು ನಡೆಯುತ್ತಿರುವುದು ಆತಂಕಕಾರಿ.

 -ಬೆಜವಾಡ ವಿಲ್ಸನ್, ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News