ಕೋಚ್ ಹುದ್ದೆಯಿಂದ ರವಿ ಶಾಸ್ತ್ರಿಯವರನ್ನು ಕೆಳಗಿಳಿಸಿ: ಚೇತನ್ ಚೌಹಾಣ್ ಒತ್ತಾಯ
ಧನಬಾದ್, ಸೆ.17: ‘‘ಇಂಗ್ಲೆಂಡ್ ವಿರುದ್ಧ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ ತಂಡ 1-4 ಅಂತರದಿಂದ ಹೀನಾಯವಾಗಿ ಸೋಲಲು ತಂಡದ ಮುಖ್ಯ ಕೋಚ್ ರವಿ ಶಾಸ್ತ್ರಿ ನೇರ ಹೊಣೆ. ಹಾಗಾಗಿ ಅವರನ್ನು ನವೆಂಬರ್ನಲ್ಲಿ ನಡೆಯುವ ಆಸ್ಟ್ರೇಲಿಯ ಪ್ರವಾಸಕ್ಕಿಂತ ಮೊದಲು ಹುದ್ದೆಯಿಂದ ಕೆಳಗಿಳಿಸಬೇಕು’’ ಎಂದು ಮಾಜಿ ಟೆಸ್ಟ್ ಕ್ರಿಕೆಟಿಗ ಚೇತನ್ ಚೌಹಾಣ್ ಒತ್ತಾಯಿಸಿದ್ದಾರೆ.
‘‘ರವಿ ಶಾಸ್ತ್ರಿ ಓರ್ವ ಉತ್ತಮ ವೀಕ್ಷಕವಿವರಣೆಗಾರ. ಕೋಚ್ ಹುದ್ದೆಯಿಂದ ಅವರನ್ನು ಕೆಳಗಿಳಿಸಿ ವೀಕ್ಷಕವಿವರಣೆಗಾರನಾಗಿ ಮುಂದುವರಿಸಲು ಅವಕಾಶ ನೀಡಬೇಕು’’ ಎಂದು ಉತ್ತರಪ್ರದೇಶದ ಕ್ರೀಡಾ ಸಚಿವರೂ ಆಗಿರುವ ಚೌಹಾಣ್ ಹೇಳಿದ್ದಾರೆ.
ವಿರಾಟ್ ಕೊಹ್ಲಿ ನೇತೃತ್ವದ ಈಗಿನ ಭಾರತ ತಂಡ ವಿದೇಶಿ ನೆಲದಲ್ಲಿ ಶ್ರೇಷ್ಠ ಪ್ರದರ್ಶನ ನೀಡುತ್ತಿದೆ ಎಂಬ ಶಾಸ್ತ್ರಿ ಅವರ ಹೇಳಿಕೆಯನ್ನು ಟೀಕಿಸಿದ ಮಾಜಿ ಆರಂಭಿಕ ಆಟಗಾರ ಚೌಹಾಣ್,‘‘ಈ ಮಾತನ್ನು ನಾನು ಒಪ್ಪಲಾರೆ. 1980ರಲ್ಲಿದ್ದ ಭಾರತೀಯ ಕ್ರಿಕೆಟ್ ತಂಡ ವಿಶ್ವದಲ್ಲಿ ಶ್ರೇಷ್ಠ ಪ್ರವಾಸಿ ತಂಡವಾಗಿತ್ತು’’ ಎಂದು ಹೇಳಿದ್ದಾರೆ.