ಶಾಲಾ ಮಕ್ಕಳಿಗೆ ಬಿಸಿಯೂಟದೊಂದಿಗೆ ಜೇನುತುಪ್ಪ ಪೂರೈಕೆ ?

Update: 2018-09-25 14:21 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಸೆ.25: ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯ ಆದೇಶ ಹಿನ್ನೆಲೆಯಲ್ಲಿ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ಜತೆಗೆ ಜೇನುತುಪ್ಪವನ್ನು ಸೇರಿಸಲು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.

ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಎಲ್ಲ ರಾಜ್ಯ ಸರಕಾರಗಳಿಗೆ ಈ ಸಂಬಂಧ ಸುತ್ತೋಲೆ ಹೊರಡಿಸಿದ್ದು ಅದರಲ್ಲಿ, ಜೇನುತುಪ್ಪದಲ್ಲಿ ಹೇರಳವಾಗಿ ರೋಗ ನಿರೋಧಕಗಳು, ಕಾರ್ಬೋಹೈಡ್ರೇಟ್‌ಗಳು, ಉತ್ತಮ ಅಮಿನೊ ಆಮ್ಲಗಳು, ಜೀವಸತ್ವಗಳು ಮತ್ತು ಖನಿಜ, ಪ್ರೊಟೀನ್‌ಗಳಿವೆ. ಇದು ದೇಹಕ್ಕೆ ಶಕ್ತಿ ನೀಡುವುದಲ್ಲದೆ ಲಘುವಾದ ಮಕ್ಕಳ ಹೊಟ್ಟೆಯಲ್ಲಿ ಹಸಿವಿನ ಪ್ರಮಾಣವನ್ನು ಹೆಚ್ಚಿಸುತ್ತದೆ ಮತ್ತು ಆಹಾರ ಸುಲಭವಾಗಿ ಜೀರ್ಣವಾಗಲು ಸಹಾಯ ಮಾಡುತ್ತದೆ. ದೇಹದಲ್ಲಿ ಕ್ಯಾಲ್ಸಿಯಂನ ಸಮ್ಮಿಲನಕ್ಕೆ ಸಹಾಯ ಮಾಡುತ್ತದೆ. ಜೇನುತುಪ್ಪ ನಿಯಮಿತವಾಗಿ ಸೇವಿಸುತ್ತಾ ಬಂದರೆ ಮಕ್ಕಳು ಬ್ಯಾಕ್ಟೀರಿಯಾ ಮತ್ತು ಸೋಂಕು, ಶೀತ, ಕಫ, ಅಲರ್ಜಿಗಳಿಗೆ ತುತ್ತಾಗುವುದು ಕಡಿಮೆ. ದೇಹದಲ್ಲಿ ರಕ್ತದ ಮಟ್ಟವನ್ನು ನಿಯಂತ್ರಿಸುವಲ್ಲಿ ಕೂಡ ಸಹಾಯ ಮಾಡುತ್ತದೆ ಎಂದು ವಿವರಿಸಲಾಗಿದೆ.

ಆದರೆ ರಾಜ್ಯ ಸರಕಾರದ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ಜೊತೆ ಜೇನುತುಪ್ಪ ನೀಡುವುದು ಹೇಗೆ ಎಂಬ ಯೋಚನೆಯಲ್ಲಿದ್ದಾರೆ. ಬಿಸಿ ಹಾಲಿನ ಜೊತೆ ಜೇನುತುಪ್ಪ ಸೇರಿಸಿ ಮಕ್ಕಳಿಗೆ ನೀಡಬಹುದು. ಪ್ರತ್ಯೇಕವಾಗಿ ನೀಡುವುದು ಕಷ್ಟ. ನಾವಿನ್ನೂ ಅಂತಿಮ ತೀರ್ಮಾನ ತೆಗೆದುಕೊಂಡಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ರಾಷ್ಟ್ರೀಯ ಜೇನುಹುಳ ನಿಗಮದ ಕಾರ್ಯದಡಿಯಲ್ಲಿ ಬರುವ ಕೇಂದ್ರ ಕೃಷಿ ಮತ್ತು ರೈತರ ಅಭಿವೃದ್ಧಿ ಸಚಿವಾಲಯದ ಸೂಚನೆಯಂತೆ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಈ ಅಧಿಸೂಚನೆ ಹೊರಡಿಸಿದೆ. ಸ್ವಿಡ್ಜರ್ಲೆಂಡ್ ಮೂಲದ ಜೇನುಹುಳ ಸಂಶೋಧನಾ ಕೇಂದ್ರದ ಅಧ್ಯಯನ ಪ್ರಕಾರ, ಜೇನುತುಪ್ಪದಲ್ಲಿ ಸುಮಾರು 600 ಅಂಶಗಳು ಕಂಡುಬರುತ್ತಿವೆ. ಅವುಗಳ ಪೋಷಕಾಂಶಗಳ ಮೌಲ್ಯಗಳನ್ನು ಆಧರಿಸಿ ಜೇನುತುಪ್ಪ ಒಂದು ಉತ್ತಮ ಜೀರ್ಣಕಾರಿ ಎಂದು ಹೇಳಲಾಗಿದೆ.

ಪ್ರಧಾನಿ ಜೊತೆ ಸಭೆ ನಡೆಸಿ ಅವುಗಳ ಪೌಷ್ಟಿಕಾಂಶ ಮೌಲ್ಯಗಳಿಗೆ ಹಲವು ತರದ ಜೇನುತುಪ್ಪಗಳನ್ನು ಪರೀಕ್ಷೆ ಮಾಡಲಾಗಿದ್ದು, ಅವುಗಳಿಂದ ಬಂದಿರುವ ವರದಿಯಲ್ಲಿ ಜೇನುತುಪ್ಪದಲ್ಲಿ ಹಲವು ಪೋಷಕಾಂಶಗಳು ಕಂಡುಬಂದಿದೆ. ಜೇನುತುಪ್ಪ ತಯಾರಿಕೆಯಲ್ಲಿ ತೊಡಗಿರುವ ಸೊಸೈಟಿಗಳು, ಘಟಕಗಳು ಮತ್ತು ಕಂಪೆನಿಗಳು ಗುಣಮಟ್ಟದ ಜೇನುತುಪ್ಪವನ್ನು ಮಕ್ಕಳಿಗೆ ಪೂರೈಸುವಂತೆ ಮನವಿ ಮಾಡಲಾಗಿದೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News