ಸುದ್ದಿ ವಾಹಿನಿ ಹೆಸರಿನಲ್ಲಿ ಸುಲಿಗೆ: ಬಂಧನ

Update: 2018-09-25 14:52 GMT

ಬೆಂಗಳೂರು, ಸೆ.25: ಸುದ್ದಿ ವಾಹಿನಿ ಹೆಸರಿನಲ್ಲಿ ಅಂಗಡಿ ಮಾಲಕನಿಗೆ ಬೆದರಿಸಿ ಹಣಕ್ಕೆ ಬೇಡಿಕೆಯಿಟ್ಟಿದ್ದ ಆರೋಪದಡಿ ಇಲ್ಲಿನ ಬನಶಂಕರಿ ಠಾಣಾ ಪೊಲೀಸರು, ಇಬ್ಬರನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

ನಗರದ ಹೊಸಕೆರೆ ಹಳ್ಳಿಯ ಮಹದೇವ್(31), ನಾಗರಬಾವಿಯ ಅಶೋಕ್ ಕುಮಾರ್(33) ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.

ಕೆಆರ್ ರಸ್ತೆಯಲ್ಲಿರುವ ಸ್ಟೈಲೊ ರೆಡಿಮೇಡ್ ಬಟ್ಟೆ ಅಂಗಡಿಗೆ ಕಳೆದ ಸೆ.21 ರಂದು ಹೋಗಿ ತಾವು ಸುದ್ದಿ ವಾಹಿನಿಯ ವರದಿಗಾರರು ಎಂದು ಹೇಳಿಕೊಂಡು, ಅಲ್ಲಿನ ಬಟ್ಟೆಗಳನ್ನು ವಿಡಿಯೋ ಮಾಡಿ ಮಾಲಕರ ಮೊಬೈಲ್ ನಂಬರ್ ಪಡೆದಿದ್ದರು.

ತದನಂತರ ಮಾಲಕರಿಗೆ ಕರೆ ಮಾಡಿ ನಿಮ್ಮ ಅಂಗಡಿಯಲ್ಲಿ ನಕಲಿ ಬ್ರಾಂಡ್‌ಗಳ ಬಟ್ಟೆ ಮಾರಾಟ ಮಾಡುತ್ತಿದ್ದು, ವಿಡಿಯೊವನ್ನು ಮಾಧ್ಯಮದಲ್ಲಿ ಪ್ರಸಾರ ಮಾಡುತ್ತೇವೆ. ಅದನ್ನು ತಡೆಯಲು 50 ಸಾವಿರ ನೀಡಬೇಕೆಂದು ಒತ್ತಡ ಹಾಕಿದ್ದರು ಎನ್ನಲಾಗಿದೆ. ಈ ಸಂಬಂಧ ದಾಖಲಾಗಿದ್ದ ದೂರು ಆಧರಿಸಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳು ಕೃತ್ಯಕ್ಕೆ ಉಪಯೋಗಿಸಿದ ಕಾರು ವಶಕ್ಕೆ ಪಡೆದು ತನಿಖೆ ಮುಂದುವರೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News