ನಟನ ಗಮನ ಬೇರೆಡೆ ಸೆಳೆದು ಕಳವು

Update: 2018-09-28 14:05 GMT

ಬೆಂಗಳೂರು, ಸೆ.28: ನಟ ವಿನೋದ್ ರಾಜ್ ಅವರ ಗಮನವನ್ನು ಬೇರೆಡೆ ಸೆಳೆದು 1 ಲಕ್ಷ ರೂಪಾಯಿ ನಗದು ಕಳವು ಮಾಡಿರುವ ಘಟನೆ ಇಲ್ಲಿನ ನೆಲಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಶುಕ್ರವಾರ ಮಧ್ಯಾಹ್ನ ನೆಲಮಂಗಲ ಪಟ್ಟಣದ, ಇಂಡಸ್‌ಲ್ಯಾಂಡ್ ಬ್ಯಾಂಕ್ ಮುಂಭಾಗದಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.

ಕೃಷಿ ಚಟುವಟಿಕೆಯನ್ನೇ ವಿನೋದ್ ರಾಜ್ ಅವರು ಜೀವನಾಧಾರವನ್ನಾಗಿ ಮಾಡಿಕೊಂಡಿದ್ದಾರೆ. ಹೀಗಾಗಿ, ತೋಟದ ಕೂಲಿಯಾಳುಗಳಿಗೆ ಸಂಬಳ ನೀಡಲು ಬ್ಯಾಂಕ್‌ನಿಂದ ಹಣವನ್ನು ತೆಗೆದಿದ್ದರು. ಬಳಿಕ ಬ್ಯಾಂಕ್ ಮುಂಭಾಗದಲ್ಲಿ ನಿಲ್ಲಿಸಿದ್ದ ತಮ್ಮ ಕಾರಿನಲ್ಲಿ ಕುಳಿತಿದ್ದರು. ಈ ವೇಳೆ ಅಲ್ಲಿಗೆ ಬಂದ ದುಷ್ಕರ್ಮಿಯೊಬ್ಬ, ಸರ್ ನಿಮ್ಮ ಕಾರಿನ ಟೈರ್ ಪಂಚರ್ ಆಗಿದೆ ಎಂದಿದ್ದಾನೆ.

ಅವರ ಮಾತು ಕೇಳಿ ವಿನೋದ್‌ರಾಜ್ ಕಾರಿನಿಂದ ಇಳಿದು ನೋಡುತ್ತಿದ್ದಂತೆ ದುಷ್ಕರ್ಮಿಗಳು ವಾಹನದೊಳಗೆ ಇದ್ದ ನಗದು ದೋಚಿ ಪರಾರಿಯಾಗಿದ್ದಾರೆ. ಈ ಸಂಬಂಧ ನೆಲಮಂಗಲ ಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದು, ತನಿಖೆ ಮುಂದುವರೆಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News