×
Ad

ವಂಚನೆ ಪ್ರಕರಣ: 2 ವರ್ಷದ ಬಳಿಕ ನಿರ್ದೇಶಕ ಎಸ್.ನಾರಾಯಣ್‌ಗೆ ಕೋರ್ಟ್‌ನಲ್ಲಿ ಗೆಲುವು

Update: 2018-10-01 20:48 IST

ಬೆಂಗಳೂರು, ಅ.1: ಸಾಲ ಕೊಡಿಸುವುದಾಗಿ ಹೇಳಿ ಸತ್ಯನಾರಾಯಣ ಎಂಬವರು ನಿರ್ದೇಶಕ ಎಸ್.ನಾರಾಯಣ್ ಅವರಿಗೆ ಮೋಸ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ 2 ವರ್ಷದ ಬಳಿಕ ಕೋರ್ಟ್‌ನಲ್ಲಿ ಗೆಲುವು ಸಿಕ್ಕಿದೆ.

22ನೆ ಎಸಿಎಂಎಂ ಕೋರ್ಟ್‌ನ ನ್ಯಾಯಾಧೀಶೆ ಹೇಮಾ ಪಾರ್ಥಪೂರ್ ಅವರಿದ್ದ ನ್ಯಾಯಪೀಠ, ಈ ಆದೇಶ ನೀಡಿದೆ. 2016ರಲ್ಲಿ ಸತ್ಯನಾರಾಯಣ ಎಂಬುವರು ಎಸ್.ನಾರಾಯಣ್‌ಗೆ ಸಾಲ ಕೊಡಿಸುವುದಾಗಿ ಹೇಳಿ ಅನೇಕ ಕಡೆ ಸುತ್ತಾಡಿಸಿ, ಬಳಿಕ ನಿಮಗೆ ಲೋನ್ ಆಗಿದೆ ಅಂದಿದ್ದರು. ನಂತರ ಒಂದು ಗಂಟೆಯೊಳಗೆ ನಿಮ್ಮ ಅಕೌಂಟ್‌ಗೆ 300 ಕೋಟಿ ಬರುತ್ತದೆ, 300 ಕೋಟಿಗೆ 50 ಲಕ್ಷ ಕಮಿಷನ್ ಕೊಡಿ ಅಂತಾ ಹೇಳಿದ್ದರು. ಇದನ್ನ ನಂಬಿದ್ದ ಎಸ್.ನಾರಾಯಣ್ 50 ಲಕ್ಷ ಕಮಿಷನ್ ಕೊಟ್ಟು ಬಂದಿದ್ದರು. ಆದರೆ, ಒಂದು ದಿನ ಕಳೆದರೂ ಎಸ್.ನಾರಾಯಣ್ ಅಕೌಂಟ್‌ಗೆ ಹಣ ಬಂದಿರಲಿಲ್ಲ. 10 ದಿನಗಳ ಕಾಲ ಸತ್ಯನಾರಾಯಣ ಕುಲಕರ್ಣಿಗಾಗಿ ಕಾದು ನಂತರ ಕಗ್ಗಲಿಪುರ ಠಾಣೆಗೆ ದೂರು ನೀಡಿದ್ದರು.

ಠಾಣೆಗೆ ದೂರು ಕೊಟ್ಟಾಗ ಸತ್ಯನಾರಾಯಣ ಬಂದು ಚೆಕ್ ಕೊಟ್ಟು ಸಮಾಧಾನ ಮಾಡಿದ್ದರು. ಆದರೆ, ನಂತರ ಆ ಚೆಕ್ ಬೌನ್ಸ್ ಆದ ಹಿನ್ನೆಲೆಯಲ್ಲಿ ಕೋರ್ಟ್‌ನಲ್ಲಿ ಕೇಸ್ ಹಾಕಿದ್ದರು. ಆಗ ಮತ್ತೆ ಹಣ ವಾಪಸ್ ಕೊಡುತ್ತೇನೆ ಅಂತಾ ಮೆಸೇಜ್ ಮಾಡಿದ್ದ ಸತ್ಯನಾರಾಯಣ ತಾನು ಮಾಡಿದ್ದ ಮೆಸೇಜ್‌ನಿಂದಲೇ ಕೊನೆಗೆ ಕೋರ್ಟ್‌ನಲ್ಲಿ ಸಿಕ್ಕಿ ಬಿದ್ದಿದ್ದಾನೆ. ಕೋರ್ಟ್ 30 ದಿನದಲ್ಲಿ ಹಣ ವಾಪಸ್ ನೀಡುವಂತೆ ಸತ್ಯನಾರಾಯಣ್‌ಗೆ ಸೂಚನೆ ನೀಡಿದ್ದು, ಇಲ್ಲವಾದಲ್ಲಿ 2 ವರ್ಷ ಜೈಲು ಶಿಕ್ಷೆ ವಿಧಿಸುವುದಾಗಿ ಎಚ್ಚರಿಕೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News