ಮಂಗಳೂರಿನ ವೈದ್ಯರು, ಖಾಸಗಿ ಆಸ್ಪತ್ರೆಗಳ 'ಲೂಟಿ ಕಾಯಿಲೆಗೆ' ಚುಚ್ಚು ಮದ್ದು ನೀಡುವವರು ಯಾರು ?

Update: 2018-10-07 11:27 GMT

ಮೂರು ದಿನಗಳ ಹಿಂದೆ ರಾತ್ರಿ ಸುಮಾರು 8 ಗಂಟೆಗೆ ನನ್ನ ಹನ್ನೊಂದು ತಿಂಗಳ ಮಗುವಿನ ವೃಷಣದ ಭಾಗ ಹಠಾತ್ತನೆ ಊದಿಕೊಂಡಿದ್ದು ಕಂಡು ಬಂತು. ತಕ್ಷಣ ನನ್ನ ಮಿತ್ರರೊಬ್ಬರನ್ನು ಸಂಪರ್ಕಿಸಿ ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ಹೋದೆವು. ಅಲ್ಲಿನ ಎಮರ್ಜೆನ್ಸಿ ವಿಭಾಗದ ಕರ್ತವ್ಯ ನಿರತ ವೈದ್ಯರು ನಗರದ ಖ್ಯಾತ ಮಕ್ಕಳ ಶಸ್ತ್ರಚಿಕಿತ್ಸೆ ತಜ್ಞರೊಬ್ಬರಿಗೆ ಕರೆ ಮಾಡಿ ಮಗುವಿನ ಪರಿಸ್ಥಿತಿ ವಿವರಿಸಿದರು.

ಫೋನಿಟ್ಟ ಕೂಡಲೇ ಆಸ್ಪತ್ರೆಯ ವೈದ್ಯರು ಮಗುವನ್ನು ಅಡ್ಮಿಟ್ ಮಾಡಲು ಹೇಳಿದ್ದಾರೆ. ಅಲ್ಟ್ರಾ ಸೌಂಡ್ ಸ್ಕಾನಿಂಗ್ ಹಾಗು ಕೆಲವು ರಕ್ತ ಪರೀಕ್ಷೆ ಮಾಡಿಸಬೇಕು ಎಂದು ಹೇಳಿದರು ! ಅರೆ .. ಅಷ್ಟು ಬೇಗ ಅಡ್ಮಿಟ್ ಮಾಡಲು ಹೇಳಿದರೆ ? ಏಕೆ ಎಂದು ವಿವರ ಕೇಳಿದೆ. ಹೇಳಲು ಹೆಚ್ಚಿನ ವಿವರ ಅವರಲ್ಲೇ ಇರಲಿಲ್ಲ. ಅಲ್ಲೇ ಇದ್ದ ನರ್ಸ್ ಗಳು ಮಗುವಿನ ಕೈಗೆ ಚುಚ್ಚಲು ಕ್ಯಾನುಲ ( ಔಷಧಿ, ಗ್ಲುಕೋಸ್ ಇತ್ಯಾದಿ ನೀಡುವ ನಳಿಕೆ)  ಹಿಡಿದುಕೊಂಡು ಬಂದೇ ಬಿಟ್ಟರು.

ನಾನು ಅದಕ್ಕೆ ಒಪ್ಪಲಿಲ್ಲ. '   ಮೊದಲು ಸ್ಕಾನಿಂಗ್ ಮಾಡಿ. ಅದರಲ್ಲಿ ಸಮಸ್ಯೆ ಏನೆಂದು ಗೊತ್ತಾದ ಮೇಲೆ ಅಡ್ಮಿಟ್ ಮಾಡುವುದು, ರಕ್ತ ಪರೀಕ್ಷೆ ಮಾಡುವ ಬಗ್ಗೆ ನಿರ್ಧರಿಸೋಣ ಎಂದೆ. ಸ್ಕಾನಿಂಗ್ ಆಯಿತು. ಸ್ಕಾನಿಂಗ್ ದರ 650 ರೂ. , ವೈದ್ಯರ ಫೀಸು 600 ರೂ. ಪಾವತಿಸಿದೆ. ಸ್ಕಾನಿಂಗ್ ವರದಿ ನೋಡಿದ ಆಸ್ಪತ್ರೆಯ ವೈದ್ಯರು ಅದನ್ನು ಆ ಮಕ್ಕಳ ಶಸ್ತ್ರಚಿಕಿತ್ಸೆ ತಜ್ಞರಿಗೆ ಫೋನ್ ಮೂಲಕ ತಿಳಿಸಿದರು. ಜೊತೆಗೆ ಮಗುವಿನ ಮನೆಯವರು ಸೂಜಿ ಚುಚ್ಚಲು ಬಿಡುತ್ತಿಲ್ಲ ಎಂದೂ ವರದಿ ಒಪ್ಪಿಸಿದರು.  "ಅದು ಹರ್ನಿಯಾ ಸಮಸ್ಯೆ. ಸಣ್ಣ ಶಸ್ತ್ರಚಿಕಿತ್ಸೆ ಮಾಡಬೇಕು. ತಕ್ಷಣ ಆಗಬೇಕೆಂದಿಲ್ಲ" ಎಂದು ಅವರ ಪ್ರತಿಕ್ರಿಯೆ ಬಂತು. ಮಗುವನ್ನು ಕರೆದುಕೊಂಡು ಮನೆಗೆ ಬಂದೆವು.

ಸಮಸ್ಯೆ ಏನೆಂದು ಗೊತ್ತಾಗಿತ್ತು. ಹಾಗಾಗಿ ನಮ್ಮ ಮನೆ ಸಮೀಪವೇ ಇರುವ ಇನ್ನೊಬ್ಬ ಯುವ ಮಕ್ಕಳ ಶಸ್ತ್ರಚಿಕಿತ್ಸೆ ತಜ್ಞರೊಬ್ಬರ ಬಳಿ ಹೋಗಿ ಮಗುವನ್ನು, ಸ್ಕಾನಿಂಗ್ ವರದಿಯನ್ನು ತೋರಿಸಿದೆವು. ಹಿಂದಿನ ದಿನ ವೈದ್ಯರು ಹೇಳಿದಂತೆ ಇವರೂ ಹೇಳಿದರು. ಒಂದೇ ದಿನ ಆಸ್ಪತ್ರೆಯಲ್ಲಿ ಇದ್ದರೆ ಸಾಕು ಎಂದು ಸೇರಿಸಿದರು.

ಹೇಗೂ ಶಸ್ತ್ರಚಿಕಿತ್ಸೆ ಮಾಡಲೇಬೇಕು. ತಡ ಮಾಡುವುದು ಬೇಡ ಎಂದು ಶನಿವಾರ ಬೆಳಗ್ಗೆ ಸುಮಾರು 10 ಗಂಟೆಗೆ ನಗರದ ಖಾಸಗಿ ಆಸ್ಪತ್ರೆಯೊಂದಕ್ಕೆ ಮಗುವನ್ನು ದಾಖಲು ಮಾಡಿದೆವು. ಮಧ್ಯಾಹ್ನ 12.30 ಕ್ಕೆ ಮಗುವನ್ನು ಆಪರೇಷನ್ ಥಿಯೇಟರ್ ಗೆ ಕರೆದುಕೊಂಡು ಹೋದರು. ಒಂದು ಗಂಟೆಗೆ ಮೂರು ನಿಮಿಷ ಇರುವಾಗ ಆ ಯುವ ಶಸ್ತ್ರಚಿಕಿತ್ಸೆ ತಜ್ಞ ಬಂದು ಓಟಿ ಒಳಗೆ ಹೋದರು. ಸುಮಾರು ಇಪ್ಪತ್ತೈದು ನಿಮಿಷದೊಳಗೆ ಆಪರೇಷನ್ ಮುಗಿದು, ನಮ್ಮನ್ನು ಒಳಗೆ ಕರೆದು ಮಗುವನ್ನು ತೋರಿಸಿ ಅಲ್ಲಿಂದ ವೈದ್ಯರು ಹೊರಟರು.

ಸಂಜೆ ಮಗುವಿದ್ದ ರೂಮಿಗೆ ಬಂದು ಮಗುವನ್ನು ನೋಡಿದರು. ಆಪರೇಷನ್ ಆದ ಮೇಲಿನ ಮುನ್ನೆಚ್ಚರಿಕೆಗಳ ಬಗ್ಗೆ  ನಾವೇ ಕೇಳಿದ ಮೇಲೆ ಕೆಲವು ಪ್ರಶ್ನೆಗಳಿಗೆ ಉತ್ತರಿಸಿ ಮಾಹಿತಿ ನೀಡಿದರು. ರವಿವಾರ ಬೆಳಗ್ಗೆ ಮನೆಗೆ ಹೋಗಬಹುದು ಎಂದು ಹೇಳಿದರು. 

ರವಿವಾರ ಬೆಳಗ್ಗೆ 9 ಗಂಟೆಗೆ ನಾವು ಡಿಸ್ಚಾರ್ಜ್ ಗೆ ಕೇಳಲು ಪ್ರಾರಂಭಿಸಿದೆವು. ಮಧ್ಯಾಹ್ನ ಒಂದು ಗಂಟೆಗೆ ಬಿಲ್ ಆಗಿದೆ ಎಂದರು. 40,000 ರೂ. ಬಿಲ್ ! ಶಸ್ತ್ರಚಿಕಿತ್ಸೆ ತಜ್ಞರ ಫೀಸು 16,000 ರೂ., ಅರಿವಳಿಕೆ ತಜ್ಞರ ಫೀಸು 5500 ರೂ., ಆಪರೇಷನ್ ಥಿಯೇಟರ್ ನ ಬಾಡಿಗೆ 14,500 ರೂ., ಉಳಿದದ್ದು ರೂಮು, ಇತರ ದರಗಳು. ( ಈ ಆಸ್ಪತ್ರೆಗೆ ಇತ್ತೀಚಿಗೆ ಸುಣ್ಣ, ಬಣ್ಣ ಬಳಿದು ಟೈಲ್ಸ್ ಇತ್ಯಾದಿ ಬದಲಾಯಿಸಿದ್ದಾರೆ. ಇಷ್ಟಕ್ಕೂ ಮಂಗಳೂರಿಗರ ಅಭಿಪ್ರಾಯದಲ್ಲಿ ಇದು ಅಷ್ಟೇನೂ ಕಾಸ್ಟ್ಲಿ ಅಲ್ಲದ ಸಾಮಾನ್ಯ ಆಸ್ಪತ್ರೆ !).

ಮಂಗಳೂರಿನಲ್ಲಿ ಅತ್ಯುತ್ತಮ ಅರೋಗ್ಯ ಸೇವೆ ಲಭಿಸುತ್ತದೆ ಎಂದು ಹೇಳಲಾಗುತ್ತದೆ. ಆದರೆ ಈ ಅತ್ಯುತ್ತಮ 'ಸೇವೆಗೆ' ಜನರು ತೆರಬೇಕಾದ ಬೆಲೆ ಎಷ್ಟು ? ಇದು ಯಾವ ಸೀಮೆಯ ಸೇವೆ ? ಹೀಗೆ ದುಡ್ಡು ಸುರಿದು ಎಷ್ಟು ಜನ ತಮ್ಮ ಮಕ್ಕಳಿಗೆ, ಹೆತ್ತವರಿಗೆ ಈ ' ಅತ್ಯುತ್ತಮ ಸೇವೆ ' ಕೊಡಿಸಬಹುದು ? ತೀರಾ ಅಪಾಯಕಾರಿಯಲ್ಲದ ಅನಾರೋಗ್ಯಕ್ಕೆ ಇದ್ದಕ್ಕಿದ್ದಂತೆ ಇಷ್ಟು ದೊಡ್ಡ ಮೊತ್ತ ತೆರಬೇಕಾದರೆ ಇನ್ನು ಗಂಭೀರ ಕಾಯಿಲೆಗಳಿಗೆ ತುತ್ತಾದವರ ಗತಿ ಏನು ಈ ಮಂಗಳೂರಿನಲ್ಲಿ ? ಹೆಚ್ಚೆಂದರೆ ಕಾಲು ಗಂಟೆಯ ಶಸ್ತ್ರಚಿಕಿತ್ಸೆಗೆ ಇಷ್ಟು ದೊಡ್ಡ ಮೊತ್ತ ಪಡೆಯುವ ಈ ವೈದ್ಯರಲ್ಲಿ ಸಾಮಾನ್ಯವಾಗಿ ವೈದ್ಯರಲ್ಲಿ ಇರಲೇಬೇಕಾದ ಸಾಮಾಜಿಕ ಹೊಣೆಗಾರಿಕೆಯನ್ನು ನಿರೀಕ್ಷಿಸಲು ಸಾಧ್ಯವೇ ? ಮಗುವಿನ ಆಸ್ಪತ್ರೆಯ ಬಿಲ್ ಪಾವತಿಸುವಾಗ ಹೆತ್ತವರು ಸುಸ್ತಾಗಿ ಅನಾರೋಗ್ಯಕ್ಕೊಳಗಾಗುವ ಈ ವ್ಯವಸ್ಥೆಗೆ ' ಅತ್ಯುತ್ತಮ ವೈದ್ಯಕೀಯ ಸೇವೆ ' ಎಂದು ಹೇಳಲು ಸಾಧ್ಯವೇ  ? ಇವುಗಳಿಗೆ ಕಡಿವಾಣ ಹಾಕಲು ಹೊರಟ ಸರಕಾರ ಈಗ ಏನು ಮಾಡುತ್ತಿದೆ ? 

50,60,70 ಲಕ್ಷ ರೂ. ಗಳ ವಿಲಾಸಿ ಕಾರುಗಳಲ್ಲೇ ತಿರುಗುವ, ಕಾರ್ಪೊರೇಟ್ ಅಧಿಕಾರಿಗಳಂತೆ ವೇಷಭೂಷಣ ತೊಟ್ಟು ಅವರಂತೆಯೇ ವರ್ತಿಸುವ ವೈದ್ಯರು ಮತ್ತು ಸೌಲಭ್ಯದ ಹೆಸರಲ್ಲಿ ದೋಚುವ ಮಂಗಳೂರಿನ ಖಾಸಗಿ ಆಸ್ಪತ್ರೆಗಳ ಈ 'ಲೂಟಿ ಕಾಯಿಲೆಯನ್ನು' ಗುಣಪಡಿಸಲು ಇಲ್ಲಿನ ಜನರು, ಜನಪರ ಸಂಘಟನೆಗಳು ಬೀದಿಗಿಳಿದು ಹೋರಾಟ ಮಾಡದಿದ್ದರೆ ಮಂಗಳೂರು ಒಳಗೊಳಗೇ ಕಾಯಿಲೆಯಿಂದ ನರಳಿ ಹಾಸಿಗೆ ಹಿಡಿಯಲಿದೆ. ಎಚ್ಚರಿಕೆ ! 
 

Writer - ಮಹಮ್ಮದ್ , ಮಂಗಳೂರು

contributor

Editor - ಮಹಮ್ಮದ್ , ಮಂಗಳೂರು

contributor

Similar News