ತೋಂಟದಾರ್ಯ ಶ್ರೀ ನಿಧನಕ್ಕೆ ಗಣ್ಯರ ಕಂಬನಿ

Update: 2018-10-20 14:05 GMT

ಬೆಂಗಳೂರು, ಅ.20: ಗದಗ ಜಿಲ್ಲೆಯ ತೋಂಟದಾರ್ಯ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿಯ ನಿಧನಕ್ಕೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಸಭಾಪತಿ ಬಸವರಾಜ ಹೊರಟ್ಟಿ, ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಇನ್ನಿತರ ಗಣ್ಯರು ಕಂಬನಿ ಮಿಡಿದಿದ್ದಾರೆ.

ಶಿಕ್ಷಣ ಹಾಗೂ ಸಾಹಿತ್ಯ ಕ್ಷೇತ್ರದ ಪೋಷಕರಾಗಿದ್ದ ತೋಂಟದಾರ್ಯ ಶ್ರೀಗಳು, ಸ್ವತಃ ಸಾಹಿತಿಯೂ ಆಗಿದ್ದರು. ಪ್ರಗತಿಪರ, ನೇರ ನಿಲುವುಗಳಿಂದ ಅಪಾರ ಭಕ್ತ ಸಮೂಹವನ್ನು ಹೊಂದಿದ್ದರು. ಮೌಢ್ಯ ವಿರೋಧಿ ಪರಿಸರ ಕಾಳಜಿ ಮತ್ತಿತರ ಹಲವು ಜನಪರ ಹೋರಾಟಗಳಲ್ಲಿಯೂ ಸಕ್ರಿಯರಾಗಿದ್ದರು. ಎಲ್ಲ ವರ್ಗಗಳ ಭಕ್ತ ಸಮೂಹವನ್ನು ಹೊಂದಿದ್ದ ಅವರು ‘ಜನರ ಸ್ವಾಮೀಜಿ’ಯಾಗಿದ್ದರು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಮಾನವ ತತ್ವದ ಮೈಲುಗಳನ್ನು ತನ್ನದಾಗಿಸಿಕೊಂಡು ಸಮಾಜಕ್ಕೆ ಮಾರ್ಗದರ್ಶನ ಮಾಡುತ್ತಿದ್ದ ಸ್ವಾಮೀಜಿ ಅವರ ಅಗಲಿಕೆ ಧಾರ್ಮಿಕ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಉಂಟು ಮಾಡಿದೆ. ಇವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ಲಕ್ಷಾಂತರ ಭಕ್ತಾದಿಗಳಿಗೆ ದೇವರು ಕರುಣಿಸಲಿ ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಪ್ರಾರ್ಥಿಸಿದ್ದಾರೆ.

ಪ್ರಗತಿಪರವಾದ, ಅಪಾರವಾದ ಪಾಂಡಿತ್ಯ ಹೊಂದಿದ್ದ ಸ್ವಾಮೀಜಿ, ಸಮಾಜಕ್ಕೆ ಮಾರ್ಗದರ್ಶನ, ಜನರಲ್ಲಿ ಜಾಗೃತಿ ಮೂಡಿಸುವ, ಸಾಮಾಜಿಕ ಹಾಗೂ ಧಾರ್ಮಿಕವಾಗಿ ವೈಚಾರಿಕತೆ ಬೆಳೆಸಿಕೊಂಡಿದ್ದರು. ಅವರ ಅಕಾಲಿಕ ಮರಣ ನಾಡಿನ ಜನತೆಗೆ ದಿಗ್ಭ್ರಮೆ ಉಂಟು ಮಾಡಿದೆ. ಅವರು ಯಾವುದೋ ಒಂದು ಜಾತಿ, ಧರ್ಮಕ್ಕೆ ಸೀಮಿತವಾಗಿರಲಿಲ್ಲ. ಬಸವಾದಿ ಶರಣರ ವಿಚಾರಗಳನ್ನು ಸಮಾಜಕ್ಕೆ ನೀಡುವುದು ಅವರ ದೀಕ್ಷೆಯಾಗಿತ್ತು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ವ್ಯಕ್ತಪಡಿಸಿದ್ದಾರೆ.

ಶ್ರೀ ಸಿದ್ಧಲಿಂಗ ಸ್ವಾಮೀಜಿಗಳು ಬಸವಣ್ಣ ಪ್ರತಿಪಾದಿಸಿದ ತತ್ವಗಳ ನಿಷ್ಠ ಅನುಯಾಯಿಗಳಾಗಿದ್ದರು. ಅವರು ಸಮಾಜದಲ್ಲಿ ಸಮಾನತೆ ಬರಬೇಕೆಂದು ಮತ್ತು ಲಿಂಗ ತಾರತಮ್ಯ ತೊಲಗಬೇಕೆಂದು ನಿರಂತರವಾಗಿ ಪ್ರಯತ್ನಿಸುತ್ತಿದ್ದರು. ಭಕ್ತವರ್ಗಕ್ಕೆ ಯಾವಾಗಲೂ ಸನ್ನಡತೆಯ ಮಾರ್ಗವನ್ನು ತೋರಿಸುತ್ತಿದ್ದ ಅವರ ನಿರ್ಗಮನದಿಂದಾಗಿ ಶೂನ್ಯ ಭಾವ ಸೃಷ್ಟಿಯಾಗಿದೆ ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಕಂಬನಿ ಮಿಡಿದಿದ್ದಾರೆ.

ತ್ರಿವಿಧ ದಾಸೋಹಿ ಕನ್ನಡದ ನೆಲ, ಜಲ ಹಾಗೂ ಪರಿಸರ ಸಂರಕ್ಷಣೆ ಹಾಗೂ ಭೂದಾನದಂತಹ ಕಾರ್ಯಕ್ರಮಗಳಲ್ಲಿ ತಮ್ಮನ್ನು ತಾವು ಸಮರ್ಪಿಸಿಕೊಂಡಿದ್ದ ತೋಂಟದಾರ್ಯ ಶ್ರೀಗಳ ಅಕಾಲಿಕ ಅಗಲಿಕೆ, ಕನ್ನಡಿನ ನಾಡಿನ ಸಾರಸ್ವತ ಲೋಕಕ್ಕೆ ಹಾಗೂ ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೋಕಕ್ಕೆ ತುಂಬಲಾರದ ನಷ್ಟವನ್ನುಂಟು ಮಾಡಿದೆ ಎಂದು ಆರೋಗ್ಯ ಸಚಿವ ಶಿವಾನಂದ ಪಾಟೀಲ್ ಕಂಬನಿ ಮಿಡಿದಿದ್ದಾರೆ.

ಲಿಂಗಾಯತ ಮಹಾಪುರುಷರ ಜೀವನ ಚರಿತ್ರೆಗಳನ್ನು ಪ್ರಕಟಿಸುವ ಮೂಲಕ ಅವರ ಇತಿಹಾಸವನ್ನು ಚಿರಸ್ಥಾಯಿಯಾಗಿಸಿದ ಸ್ವಾಮೀಜಿಯವರು ತಮ್ಮ ಆಳವಾದ ಆಧ್ಯಾತ್ಮಿಕ ಅನುಭಾವದಿಂದ ನಾಡಿಗೆ ಬೆಳಕನ್ನು ನೀಡಿದ ಅಗ್ರಗಣ್ಯರಾಗಿದ್ದರು. ಹಲವಾರು ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಬೆಳೆಸುವುದರ ಮೂಲಕ ಅನ್ನ ಹಾಗೂ ಅಕ್ಷರ ದಾಸೋಹದ ಕೈಂಕರ್ಯದಲ್ಲಿ ತೊಡಗಿಕೊಂಡಿದ್ದಾಗಲೇ ನಮ್ಮನ್ನು ಅಗಲಿದ್ದಾರೆ ಎಂದು ಸಭಾಪತಿ ಬಸವರಾಜ ಹೊರಟ್ಟಿ ಸಂತಾಪ ವ್ಯಕ್ತಪಡಿಸಿದ್ದಾರೆ.

ಶ್ರೀಗಳು ಧಾರ್ಮಿಕ, ಆಧ್ಯಾತ್ಮಿಕ, ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯಲ್ಲಿ ಹೆಚ್ಚಿನ ಪಾಂಡಿತ್ಯ ಹೊಂದಿದ್ದು, ಈ ಕ್ಷೇತ್ರಗಳನ್ನು ಬೆಳೆಸಲು ಅಪಾರವಾಗಿ ಶ್ರಮಿಸಿದ್ದರು. ಸಾತ್ವಿಕ ಮನೋಭಾವದೊಂದಿಗೆ ಜನರಲ್ಲಿ ಭಕ್ತಿ ಮಾರ್ಗವನ್ನು ಪ್ರೇರೇಪಿಸಲು ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಪ್ರಗತಿಶೀಲ ಚಿಂತನೆಯನ್ನು ಅಳವಡಿಸಿಕೊಂಡಿದ್ದರು. ಸಾಮಾಜಿಕ ಸೇವಾ ಕಾರ್ಯಗಳನ್ನೂ ಅವರ ಕೊಡುಗೆ ಅಪಾರವಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಡಾ.ಜಯಮಾಲಾ ಶೋಕ ವ್ಯಕ್ತಪಡಿಸಿದ್ದಾರೆ.

ಸರಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ

ತೋಂಟದಾರ್ಯ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿಯವರ ಅಂತ್ಯಕ್ರಿಯೆಯನ್ನು ಸರಕಾರಿ ಗೌರವಗಳೊಂದಿಗೆ ನೆರವೇರಿಸಲಾಗುವುದು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದು, ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಅಲ್ಲದೆ, ನಾಳೆ ಗದುಗಿನ ಮಠದ ಆವರಣದಲ್ಲಿ ನಡೆಯಲಿರುವ ಅಂತ್ಯಕ್ರಿಯೆಯಲ್ಲಿ ಮುಖ್ಯಮಂತ್ರಿ ಪಾಲ್ಗೊಳ್ಳಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News