ಜಾಲತಾಣದಲ್ಲಿ ಶಸ್ತ್ರಾಸ್ತ್ರಗಳ ಫೋಟೊ: ಮುತ್ತಪ್ಪ ರೈಗೆ ಸಿಸಿಬಿ ನೋಟಿಸ್

Update: 2018-10-20 14:39 GMT

ಬೆಂಗಳೂರು, ಅ.20: ಕರ್ನಾಟಕ ರಾಜ್ಯ ಅಥ್ಲೆಟಿಕ್ ಸಂಸ್ಥೆ (ಕೆಎಎ) ಅಧ್ಯಕ್ಷರೂ ಆಗಿರುವ ಜಯ ಕರ್ನಾಟಕ ಸಂಸ್ಥೆಯ ಸ್ಥಾಪಕ ಮುತ್ತಪ್ಪ ರೈ ಅವರು ಸಾಮಾಜಿಕ ಜಾಲತಾಣದಲ್ಲಿ ಶಸ್ತ್ರಾಸ್ತ್ರಗಳ ಫೋಟೋ ಹಾಕಿದ್ದ ಆರೋಪ ಪ್ರಕರಣ ಸಂಬಂಧ ಅವರನ್ನು ವಿಚಾರಣೆ ನಡೆಸಿದ ಬಳಿಕ ಕ್ರಮ ಕೈಗೊಳ್ಳಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ತಿಳಿಸಿದ್ದಾರೆ.

ಮುತ್ತಪ್ಪ ರೈಗೆ ಸಿಸಿಬಿ ಪೊಲೀಸರು ನೋಟಿಸ್ ನೀಡಿರುವುದರ ಕುರಿತು ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಮಾಜಿಕ ಜಾಲತಾಣದಲ್ಲಿ ಶಸ್ತ್ರಾಸ್ತ್ರಗಳಿಗೆ ಆಯುಧಪೂಜೆ ಮಾಡುವ ಫೋಟೋ ಹಾಕಿದ್ದ ಹಿನ್ನೆಲೆಯಲ್ಲಿ ಮುತ್ತಪ್ಪರೈಗೆ ಆ ಶಸ್ತ್ರಾಸ್ತ್ರಗಳ ಬಗ್ಗೆ ಮಾಹಿತಿ ನೀಡುವಂತೆ ಸಿಸಿಬಿ ಪೊಲೀಸರು ನೋಟಿಸ್ ನೀಡಿದ್ದಾರೆ ಎಂದರು.

ವಿಚಾರಣೆ ವೇಳೆ ಶಸ್ತ್ರಾಸ್ತ್ರಗಳ ಬಗ್ಗೆ ತನಿಖೆ ಮಾಡಲಾಗುತ್ತದೆ. ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.

ಸಿನಿಮಾ ನಿರ್ಮಾಪಕ ಕಪಾಲಿ ಮೋಹನ್‌ಗೆ ಸೇರಿದ ಜೂಜು ಅಡ್ಡೆ ಹಾಗೂ ಮನೆ ಮೇಲೆ ದಾಳಿ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಅವರು, ದಾಳಿ ವೇಳೆ ಕೆಲವೊಂದು ದಾಖಲೆಗಳು ಸಿಕ್ಕಿದೆ. ಸದ್ಯ ಕಪಾಲಿ ಮೋಹನ್ ತಲೆಮರೆಸಿಕೊಂಡಿದ್ದಾನೆ. ದಾಳಿ ವೇಳೆ ಪತ್ತೆಯಾದ ದಾಖಲೆಗಳನ್ನು ಸಿಸಿಬಿ ಪರಿಶೀಲನೆ ನಡೆಸುತ್ತಿದೆ. ಲಭ್ಯವಾಗಿರುವ ದಾಖಲೆಗಳ ಪರಿಶೀಲಿಸುವ ವೇಳೆ ಸಿಗುವ ಮಾಹಿತಿ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News