ಮೂವರು ಗಾಂಜಾ ಮಾರಾಟಗಾರರ ಬಂಧನ: 20 ಕೆಜಿ ಗಾಂಜಾ ಜಪ್ತಿ
Update: 2018-10-20 14:34 GMT
ಬೆಂಗಳೂರು, ಅ.20: ಮಾದಕ ವಸ್ತು ಗಾಂಜಾ ಮಾರಾಟ ಆರೋಪದಡಿ ಮೂವರನ್ನು ಬಂಧಿಸಿರುವ ಇಲ್ಲಿನ ಹೆಣ್ಣೂರು ಠಾಣಾ ಪೊಲೀಸರು, 20 ಕೆಜಿ ಗಾಂಜಾ ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ಕುಮಾರ್, ಆಂಧ್ರಪ್ರದೇಶದ ತಾಟಿ ಗಡಪ ನರೇಂದ್ರಬಾಬು (22), ಗುಂಟೂರಿನ ಜಯಸೂರ್ಯ (24) ಹಾಗೂ ಉತ್ತರ ಗಾನಾ ದೇಶ ಮೂಲದ ಚಿಕ್ಕಬಾಣವಾರದ ಆಂಟೋನಿ (45) ಎಂಬುವರು ಬಂಧಿತ ಆರೋಪಿಗಳೆಂದು ತಿಳಿಸಿದರು.
ಆರೋಪಿಗಳು ಹೆಣ್ಣೂರು ಬಂಡೆಯ ಡಾ.ಅಂಬೇಡ್ಕರ್ ಮೈದಾನದ ಬಳಿ ಕಾರಿನಲ್ಲಿ ಗಾಂಜಾ ಇಟ್ಟುಕೊಂಡು ಗಿರಾಕಿಗಳಿಗೆ ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಕಾರ್ಯಾಚರಣೆ ನಡೆಸಿದ ಹೆಣ್ಣೂರು ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸಂಬಂಧ ತನಿಖೆ ಮುಂದುವರೆಸಲಾಗಿದೆ ಎಂದರು.