ಈ ವಿವಾದಗಳ ನಡುವೆ ನಾವು ಮರೆತದ್ದೇನು?

Update: 2018-10-22 18:31 GMT

ಇಂಡಿಯಾದ ಸಂಸದೀಯ ಪ್ರಜಾಸತ್ತೆಯ ದೌರ್ಬಲ್ಯ ಮತ್ತು ದುರಂತವಿರುವುದೇ ನಮ್ಮ ಈ ತೆರನಾದ ನಡವಳಿಕೆಗಳಲ್ಲಿ. ಈ ನೆಲದ ಪ್ರಜಾಪ್ರಭುತ್ವ ವಿರೋಧಿ ಶಕ್ತಿಗಳು ಕಾಲಕಾಲಕ್ಕೆ ಇಂತಹ ಹುಸಿ ಕ್ರಾಂತಿಗಳ ಹೆಸರಿನಲ್ಲಿ ಪ್ರಜಾಸತ್ತಾತ್ಮಕ ಚುನಾವಣೆಗಳನ್ನು, ಅವುಗಳ ಸುತ್ತ ಚರ್ಚೆಯಾಗಬೇಕಾದ ವಿಚಾರಗಳ ದಾರಿ ತಪ್ಪಿಸುತ್ತ ಹೋಗುವುದು ನಡೆದುಕೊಂಡೇ ಬಂದಿದೆ. ನಾವು ಸಹ ನಮಗರಿವಿದ್ದೊ ಇಲ್ಲದೆಯೊ ದಾರಿ ತಪ್ಪುತ್ತಲೇ ಬರುತ್ತಿದ್ದೇವೆ.

ಇದೀಗ ಎರಡು ವಿಷಯಗಳು ಇಡೀ ದೇಶದ ಗಮನವನ್ನು ಸೆಳೆದಿದ್ದು ನಮ್ಮ ಗಮನ ಮತ್ತು ಚರ್ಚೆಯನ್ನು ಆ ಎರಡು ವಿಚಾರಗಳೇ ಆವರಿಸಿಕೊಂಡಿವೆ. ಮೊದಲನೆಯದು ಮಾಜಿ ನಟಿ ತನುಶ್ರೀ ದತ್ತಾ ಶುರು ಮಾಡಿದ ‘ಮೀಟೂ’ ಅಭಿಯಾನವಾದರೆ ಎರಡನೆಯದು, ಶಬರಿಮಲೆಗೆ ಮಹಿಳೆಯರ ಮುಕ್ತ ಪ್ರವೇಶದ ಬಗ್ಗೆ ಎದ್ದಿರುವ ವಿವಾದ ಮತ್ತು ಅದರ ಪರ-ವಿರೋಧ ಪ್ರತಿಭಟನೆಗಳು!.

ಇವುಗಳ ಟೈಮಿಂಗ್ ನೋಡಿ. ಕೇಂದ್ರದಲ್ಲಿ ಭಾಜಪ ಸರಕಾರ ನಾಲ್ಕೂವರೆ ವರ್ಷಗಳ ಆಡಳಿತವನ್ನು ಮುಗಿಸಿ ಮುಂದಿನ ಮೇ ತಿಂಗಳ ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದು ಮತ್ತೊಮ್ಮೆ ಅಧಿಕಾರ ಹಿಡಿಯುವ ಹವಣಿಕೆಯಲ್ಲಿದೆ. ಇನ್ನೊಂದೆಡೆ 2019ರ ಮೇ ಚುನಾವಣೆಗಳಿಗೆ ದಿಕ್ಸೂಚಿಯಾಗಬಹುದಾದ ಪಂಚ ರಾಜ್ಯಗಳ ಚುನಾವಣೆಗಳಿಗೆ ದಿನಾಂಕ ಘೋಷಣೆಯಾಗಿದ್ದು ಚುನಾವಣಾ ಜ್ವರ ಕಾವೇರುತ್ತಿದೆ. ಕಳೆದ ನಾಲ್ಕು ವರ್ಷಗಳ ಕೇಂದ್ರದಲ್ಲಿನ ಭಾಜಪದ ಆಡಳಿತದಿಂದ ಜನತೆ ಭ್ರಮನಿರಸನಗೊಂಡಿದ್ದಾರೆ. ಸತತ ಬೆಲೆ ಏರಿಕೆ, ಹೆಚ್ಚುತ್ತಿರುವ ಅಲ್ಪಸಂಖ್ಯಾತರ ಮತ್ತು ದಲಿತರ ಮೇಲಿನ ದೌರ್ಜನ್ಯಗಳು ಮತದಾರರನ್ನು ಕಂಗೆಡಿಸಿವೆ. 2014ರ ಹೊತ್ತಿನಲ್ಲಿನ ನರೇಂದ್ರಮೋದಿಯವರ ಜನಪ್ರಿಯತೆಯ ಗ್ರಾಫ್ ಇಳಿಯುತ್ತಿದೆ. ಹೆಚ್ಚುತ್ತಿರುವ ನಿರುದ್ಯೋಗ ಯುವಜನತೆಗೆ ವಾಸ್ತವ ಮತ್ತು ಭ್ರಮೆಗಳ ನಡುವಿನ ಅಂತರವನ್ನು ಅರಿವು ಮಾಡಿಸತೊಡಗಿದೆ. ಮುಂದಿನ ಚುನಾವಣೆಗಾಗಿ ಜನರನ್ನು ಮರಳು ಮಾಡುವ ಹೊಸ ಘೋಷಣೆಗಾಗಿ, ಹೊಸ ಅಲೆಯೊಂದಕ್ಕಾಗಿ ಭಾಜಪ ತಲೆಕೆಡಿಸಿಕೊಂಡು ಕೂತಿದೆ.

ಇದೇ ಸಮಯದಲ್ಲಿ ಪಂಚರಾಜ್ಯ ಚುನಾವಣೆಗಳಲ್ಲಿ ಪ್ರಮುಖವಾದ ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸಗಡ ರಾಜ್ಯಗಳಲ್ಲಿ ಭಾಜಪ ಸೋಲುತ್ತದೆಯೆಂದು ಸಮೀಕ್ಷಾವರದಿಗಳು ಭವಿಷ್ಯ ನುಡಿಯುತ್ತಿವೆ. ಹಾಗೆಂದ ಮಾತ್ರಕ್ಕೆ ಕಾಂಗ್ರೆಸ್ ಇಲ್ಲಿ ಸುಲಭವಾಗಿ ಗೆದ್ದು ಬಿಡುತ್ತದೆಯೆಂದೇನು ಅಲ್ಲ. ಹೀಗಾಗಿ ಎರಡೂ ಪಕ್ಷಗಳು ಭರ್ಜರಿಯಾಗಿ ಚುನಾವಣಾ ಪ್ರಚಾರದಲ್ಲಿ ತೊಡಗಿವೆ.

ಇಂತಹ ಸಂಕೀರ್ಣ ಸಮಯದಲ್ಲಿ ಚುನಾವಣೆಗಳಲ್ಲಿ ಚರ್ಚೆಯಾಗಬೇಕಿದ್ದ ಪ್ರಮುಖ ವಿಚಾರಗಳ ಬಗ್ಗೆ ಮಾಧ್ಯಮಗಳು ಮಾತಾಡಬೇಕಿತ್ತು. ಮತ್ತದು ಅವುಗಳ ಕರ್ತವ್ಯವೂ ಆಗಿತ್ತು. ಆದರೀಗ ಶುರುವಾಗಿರುವ ಮೀಟೂ ಅಭಿಯಾನ ಮತ್ತು ಶಬರಿಮಲೆಗೆ ಮಹಿಳೆಯರ ಮುಕ್ತ ಪ್ರವೇಶದ ವಿವಾದಗಳು ನಮ್ಮ ಮಾಧ್ಯಮಗಳ (ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳೆರಡೂ)ಕೇಂದ್ರ ಬಿಂದುವಾಗಿವೆ. ಡಿಸೆಂಬರಿನಲ್ಲಿ ನಡೆಯಲಿರುವ ಚುನಾವಣೆಗಳಲ್ಲಿ ನಿಜಕ್ಕೂ ಚರ್ಚೆಯ ವಿಷಯವಾಗ ಬೇಕಿದ್ದ ಸತತ ಬೆಲೆ ಏರಿಕೆ, ಕುಸಿಯುತ್ತಿರುವ ಆರ್ಥಿಕ ವ್ಯವಸ್ಥೆ ಮತ್ತು ಹೆಚ್ಚುತ್ತಿರುವ ನಿರುದ್ಯೋಗದಂತಹ ಸಮಸ್ಯೆಗಳು ಹಿಂದಿನ ಸೀಟಿಗೆ ಹೋಗಿವೆ. ಹಾಗಂತ ಮೀಟೂ ಅಭಿಯಾನ ವ್ಯರ್ಥವೆಂದೊ ಅನಗತ್ಯವೆಂದೊ ನಾನು ಹೇಳುತ್ತಿಲ್ಲ.

ನೂರಾರು ವರ್ಷಗಳಿಂದ ತಮ್ಮ ಮೇಲೆ ನಡೆಯುತ್ತಿದ್ದ ಲೈಂಗಿಕ ಶೋಷಣೆಯ ಕರಾಳತೆಯನ್ನು ನಮ್ಮ ಹೆಣ್ಣುಮಕ್ಕಳು ಈಗಲಾದರೂ ಮುಕ್ತವಾಗಿ ಬಹಿರಂಗವಾಗಿ ಹೇಳಿಕೊಳ್ಳುತ್ತಿರುವುದು ಸ್ವಾಗತಾರ್ಹ ವಿಚಾರವೇ ಸರಿ. ಆ ಮಟ್ಟಿಗೆ ನಮ್ಮ ಮಹಿಳೆ ಒಂದು ಹೆಜ್ಜೆ ಮುಂದಿಟ್ಟಿರುವುದು ಸಮಾನ ಸಮಾಜದ ಆಶಯ ಹೊಂದಿರುವವರೆಲ್ಲ ಸ್ವಾಗತಿಸಲೇ ಬೇಕಾದ ಕ್ರಮ. ಅದೇ ರೀತಿ ಮಹಿಳೆಯನ್ನು ದೇವತೆಯೆಂದು ಪೂಜಿಸುವ ಈ ಸಮಾಜದಲ್ಲಿ ಆಕೆಗೆ ದೇವಾಲಯ ಪ್ರವೇಶವನ್ನು ನಿರಾಕರಿಸುವ ಪುರುಷ ಪ್ರಧಾನ ವ್ಯವಸ್ಥೆಯ ವಿರುದ್ಧ ಸಿಡಿದು ನಿಂತಿರುವ ಮಹಿಳೆಯರ ಹೋರಾಟವನ್ನು ನಿರ್ಲಕ್ಷಿಸುವುದು ಸಾಧ್ಯವಿರದ ಮಾತು. ಇವೆರಡೂ ಪ್ರತಿಭಟನೆ ಪ್ರತಿಕ್ರಿಯೆಗಳು ಆರೋಗ್ಯವಂತ ಸಮಸಮಾಜದ ನಿರ್ಮಾಣಕ್ಕೆ ಖಂಡಿತಾ ಅಗತ್ಯವಾದಂತಹವುಗಳೇನೊ ನಿಜ.

ಅದರೆ ಈ ಎರಡು ಚಳವಳಿಗಳನ್ನು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುತ್ತಿರುವ ನಮ್ಮ ರಾಜಕೀಯ ಪಟ್ಟಭದ್ರ ಹಿತಾಸಕ್ತಿಗಳು ಇವೆರಡೇ ಈ ದೇಶದ ನೆಲದ ಸಮಸ್ಯೆಯೇನೊ ಎಂಬಂತೆ ವೈಭವೀಕರಿಸುತ್ತ ಜನರ ಗಮನವನ್ನು ಚುನಾವಣೆಗಳಿಂದ ಬೇರೆಡೆಗೆ ಸೆಳೆಯಲು ಯತ್ನಿಸುತ್ತಿರುವುದೇ ಆತಂಕಕ್ಕೆ ಕಾರಣ. ಶಬರಿ ಮಲೆಯ ವಿಷಯವನ್ನೇ ನೋಡಿ. ಲಿಂಗ ತಾರತಮ್ಯದ ವಿಚಾರವನ್ನು ಬಳಸಿಕೊಂಡ ಭಾಜಪ ಅದನ್ನು ಹಿಂದುತ್ವದ ಪ್ರಶ್ನೆಯನ್ನಾಗಿಸಿ ಜನರ ದಾರಿ ತಪ್ಪಿಸುತ್ತಿದೆ.

ಈ ವಿಚಾರಗಳನ್ನು ಚರ್ಚಿಸುವ ಭರದಲ್ಲಿ ನಾವು ಬರುತ್ತಿರುವ ಚುನಾವಣೆಗಳನ್ನು, ಆಡಳಿತ ಪಕ್ಷವೊಂದಕ್ಕೆ ನಾವು ಕೇಳಬೇಕಾಗಿರುವ ಪ್ರಶ್ನೆಗಳನ್ನು ನೇಪಥ್ಯಕ್ಕೆ ಸರಿಸುವಲ್ಲಿ ನಮ್ಮ ನಡುವಿನ ಕೆಲಶಕ್ತಿಗಳು ಪ್ರಯತ್ನಿಸುತ್ತಿರುವುದನ್ನು ನಾವು ಗಮನಿಸುತ್ತಲೇ ಇಲ್ಲ.

ನಾವೀಗ ಬಹುಮುಖ್ಯವಾದ ಘಟ್ಟದಲ್ಲಿ ನಿಂತಿದ್ದೇವೆ. ಈಗ ತೆಗೆದುಕೊಳ್ಳಬೇಕಾದ ನಿರ್ಧಾರವೊಂದು ಮುಂದಿನ ಪೀಳಿಗೆಯ ಭವಿಷ್ಯದ ದೃಷ್ಟಿಯಿಂದ ಭಾರೀ ಮಹತ್ವ ಪಡೆದಿದೆ ಎನ್ನುವುದನ್ನು ನಾವು ಮರೆಯಲಾಗದು. ಈ ಎರಡೂ ಅಭಿಯಾನಗಳಿಗೆ ಬೆಂಬಲ ನೀಡುತ್ತಲೇ ರಾಜಕೀಯ ಬದಲಾವಣೆಯೊಂದಕ್ಕೆ ಜನತೆಯನ್ನು ಅಣಿಗೊಳಿಸಬೇಕಿದೆ.

Similar News