ಬಿಸಿಸಿಐ ಯುಎಇ ಘಟಕದಿಂದ ಎಸ್.ಎಂ.ರಶೀದ್ ಹಾಜಿಗೆ ಸನ್ಮಾನ

Update: 2018-10-23 07:35 GMT

ದುಬೈ, ಅ.23: ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ(ಬಿಸಿಸಿಐ), ಮಂಗಳೂರು ಇದರ ನೂತನ ಯುಎಇ ಘಟಕ ಸ್ಥಾಪನೆಯಾಗುವಲ್ಲಿ ಪ್ರಮುಖ ಪಾತ್ರ ವಹಿಸಿದ ಸಂಘಟನೆಯ ಅಧ್ಯಕ್ಷ ಎಸ್.ಎಂ.ರಶೀದ್ ಹಾಜಿಯವರನ್ನು ಬಿಸಿಸಿಐ ಯುಎಇ ಘಟಕದ ವತಿಯಿಂದ ಸನ್ಮಾನಿಸಲಾಯಿತು.

ಇತ್ತೀಚೆಗೆ ದುಬೈಯ ಜೆ.ಡಬ್ಲು. ಮ್ಯಾರಿಯೆಟ್ ಹೋಟೆಲ್‌ನಲ್ಲಿ ನಡೆದ ಬಿಸಿಸಿಐ ಯುಎಇ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಸಂಘಟನಾ ಸಮಿತಿಯ ಪರವಾಗಿ ಮುಹಮ್ಮದ್ ಅಲಿ ಉಚ್ಚಿಲ್ ಹಾಗೂ ಡಾ.ಬಿ.ಕೆ.ಯೂಸುಫ್ ಅವರು ತುಂಬೆ ಗ್ರೂಪ್ ಸ್ಥಾಪಕ ಡಾ.ತುಂಬೆ ಮೊಯ್ದಿನ್, ಕರ್ನಾಟಕ ರಾಜ್ಯ ಸಚಿವ ಯು.ಟಿ.ಖಾದರ್, ವಿಧಾನ ಪರಿಷತ್ ಸದಸ್ಯ ಬಿ.ಎಂ.ಫಾರೂಕ್, ಟೀಕೇಸ್ ಗ್ರೂಪ್‌ನ ಎಂ.ಡಿ. ಉಮರ್ ಟೀಕೆ ಮೊದಲಾದ ಗಣ್ಯರ ಜೊತೆಗೂಡಿ ರಶೀದ್ ಹಾಜಿಯವರಿಗೆ ಸ್ಮರಣಿಕೆ ನೀಡಿ ಗೌರವಿಸಿದರು. 

ಈ ಸಂದರ್ಭ ಮಾತನಾಡಿದ ರಶೀದ್ ಹಾಜಿ, ಗಲ್ಫ್‌ನ ವಿವಿಧೆಡೆಗಳಲ್ಲಿ ಬಿಸಿಸಿಐ ಘಟಕಗಳನ್ನು ಸ್ಥಾಪಿಸುವ ಉದ್ದೇಶವನ್ನು ಹೊಂದಲಾಗಿದೆ. ಹೆಚ್ಚು ಉದ್ಯಮಿಗಳನ್ನು ಪರಸ್ಪರ ಸಂಪರ್ಕಕ್ಕೆ ತರಲು ಹಾಗೂ ಹೆಚ್ಚು ಹೆಚ್ಚು ವಾಣಿಜ್ಯ ಚಟುವಟಿಕೆಗಳಿಗೆ ಉತ್ತೇಜನ ಸಿಗುವಂತಾಗಲು ಇದು ಸಹಕಾರಿಯಾಗಲಿದೆ. ಅಂತಿಮವಾಗಿ ಇದು ಇಡೀ ಸಮುದಾಯಕ್ಕೆ ಪ್ರಯೋಜನಕಾರಿಯಾಗಲಿದೆ ಎಂದು ಅಭಿಪ್ರಾಯಿಸಿದರು. 

ಯುಎಇ ಘಟಕವು ಬಿಸಿಸಿಐನ 3ನೇ ಘಟಕವಾಗಿದ್ದು, ಇನ್ನೆರಡು ಘಟಕಗಳು ಚಿಕ್ಕಮಗಳೂರು ಮತ್ತು ಹಾಸನದಲ್ಲಿ ಕಾರ್ಯಾಚರಿಸುತ್ತಿವೆ. 

ಸಮಾರಂಭದಲ್ಲಿ ಬಿಸಿಸಿಐ ಮಂಗಳೂರು ಇದರ ಕಾರ್ಯಕಾರಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News