ಕೆಡಿಪಿ ಸಭೆಗೆ ತಪ್ಪು ಮಾಹಿತಿ ನೀಡಿದರೆ ಅಮಾನತು: ಡಿಸಿಎಂ ಪರಮೇಶ್ವರ್

Update: 2018-11-05 14:09 GMT

ಬೆಂಗಳೂರು, ನ.5: ಕೆಡಿಪಿ ಸಭೆಗೆ ತಪ್ಪು ಮಾಹಿತಿಗಳನ್ನು ನೀಡಿದರೆ ಸೇವೆಯಿಂದ ಅಮಾನತು ಮಾಡುವುದಾಗಿ ಅಧಿಕಾರಿಗಳಿಗೆ ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಾ.ಜಿ.ಪರಮೇಶ್ವರ್ ಎಚ್ಚರಿಕೆ ನೀಡಿದ್ದಾರೆ.

ಸೋಮವಾರ ಬೆಂಗಳೂರು ನಗರ ಜಿಲ್ಲಾ ಪಂಚಾಯತ್ ಪ್ರಗತಿ ಪರಿಶೀಲನಾ ನಡೆಸಿದ ಅವರು, ಬೆಂಗಳೂರು ನಗರ ಜಿಲ್ಲೆಯ ವ್ಯಾಪ್ತಿಯಲ್ಲಿ ಸಾಲಮನ್ನಾ ಸೌಲಭ್ಯ ಪಡೆದಿರುವ ರೈತರ ಬಗ್ಗೆ ಅಸಮರ್ಪಕ ಮಾಹಿತಿ ನೀಡಿದ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿ ಸಹಕಾರ ಹಾಗೂ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಎಷ್ಟು ರೈತರು ಸಾಲ ಪಡೆದಿದ್ದಾರೆ ಹಾಗೂ ಈವರೆಗೂ ಎಷ್ಟು ಮೊತ್ತದ ಸಾಲ ಮನ್ನಾ ಆಗಿದೆ ಎಂಬ ಮಾಹಿತಿ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗೆ ಕೇಳಿದರು. ಇದಕ್ಕೆ ಉತ್ತರಿಸಿದ ಅಧಿಕಾರಿ, ಅಲ್ಪಾವಧಿಗೆ 3,530 ರೈತರು, ಮಧ್ಯಮ ಅವಧಿಗೆ 8 ಜನ ರೈತರು ಹಾಗೂ ದೀರ್ಘಾವಧಿಗೆ 53 ರೈತರು ಸಾಲ ಪಡೆದಿದ್ದು, 7,531 ರೈತರ ಸಾಲ ಮನ್ನಾ ಆಗಿದೆ ಎಂದು ತಪ್ಪು ಮಾಹಿತಿ ನೀಡಿದರು.

ಇದರಿಂದ ಸಿಟ್ಟಿಗೆದ್ದ ಉಪ ಮುಖ್ಯಮಂತ್ರಿ, ಸಾಲ ಪಡೆದವರಿಗಿಂತ ಸಾಲಮನ್ನಾ ಆಗಿದವರ ಸಂಖ್ಯೆ ಹೇಗೆ ಹೆಚ್ಚಾಗಿರಲು ಸಾಧ್ಯ? ಕೆಡಿಪಿ ಸಭೆಗೆ ಈ ರೀತಿ ತಪ್ಪು ಮಾಹಿತಿ ನೀಡಲು ಸಭೆಗೆ ಬರುತ್ತೀರಾ? ಇನ್ನೊಮ್ಮೆ ಈ ರೀತಿ ತಪ್ಪು ಮಾಡಿದರೆ ಸೇವೆಯಿಂದ ಅಮಾನತು ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸಾಲ ಪಡೆದ ರೈತರ ಮಾಹಿತಿ ಕೂಡ ಅಧಿಕಾರಿ ನೀಡಲಿಲ್ಲ. ಅದಕ್ಕೆ ಕೋಪಗೊಂಡ ಅವರು, ಏತಕ್ಕಾಗಿ ಸಭೆಗೆ ಬರುತ್ತೀರಾ? ನಿಮ್ಮ ಮುಖ ನೋಡಲು ಕರೆಸುತ್ತೀವಾ? ಬೆಂಗಳೂರಿನಂತಹ ನಗರದಲ್ಲಿಯೇ ಸಾಲ ಪಡೆದ ರೈತರ ಅಂಕಿ ಸಂಖ್ಯೆ ಇಲ್ಲವೆಂದರೆ ಬೇರೆ ಜಿಲ್ಲೆಗಳಲ್ಲಿ ಹೇಗೆ ಸಿಗುತ್ತದೆ? ಆದಷ್ಟು ಶೀಘ್ರವೇ ಈ ಮಾಹಿತಿಯನ್ನು ಡಿಸಿಗೆ ನೀಡಬೇಕು, ಮುಂದಿನ ಸಭೆಗೆ ಸಿದ್ಧರಾಗಿ ಬರುವಂತೆ ಸೂಚಿಸಿದರು.

ನಾವು ದಿನ ನಿತ್ಯ ರೈತರ 49 ಸಾವಿರ ಕೋಟಿ ರೂ.ಸಾಲ ಮನ್ನಾ ಮಾಡುತ್ತಿದ್ದೇವೆ ಎಂದು ಹೇಳುತ್ತೇವೆ. ಆದರೆ, ಅಧಿಕಾರಿಗಳಿಗೆ ಮಾತ್ರ ಇದರ ಗಂಭೀರತೆ ಅರ್ಥವಾಗುತ್ತಿಲ್ಲ ಎಂದು ಪರಮೇಶ್ವರ್ ಗದರಿಸಿದರು.

ಬೆಂಗಳೂರು ದಕ್ಷಿಣದಲ್ಲಿ 885 ಸರಕಾರಿ ಪ್ರೌಢ ಶಾಲೆ ಇದ್ದು, 35 ಶಾಲೆಗಳ ಕೊಠಡಿಗಳು ದುರಸ್ಥಿಯಲ್ಲಿವೆ. 24 ಮರು ನಿರ್ಮಾಣ ಆಗಬೇಕಿದೆ. ಈ ಶಾಲೆಗಳಲ್ಲಿ ಶೌಚಾಲಯ ಸ್ವಚ್ಛತೆ ಇಲ್ಲದ ಬಗ್ಗೆ ಚರ್ಚೆಯಾಯಿತು. ಈ ಶೌಚಾಲಯಗಳ ಸ್ವಚ್ಛತೆಗೆ 2 ಸಾವಿರ ರೂ.ನೀಡಬೇಕು, ಇನ್ನೊಂದು ತಿಂಗಳಲ್ಲಿ ಎಲ್ಲ ಶೌಚಾಲಯ ಸ್ವಚ್ಛಗೊಳಿಸುವಂತೆ ಅವರು ಸೂಚಿಸಿದರು.

ಸರಕಾರಿ ಪ್ರಾಥಮಿಕ ಆಸ್ಪತ್ರೆಯಲ್ಲಿ ವೈದ್ಯರು ಸರಿಯಾದ ಸಮಯಕ್ಕೆ ಬರಲ್ಲ. ರೋಗಿಗಳು ಕೇಳಿದರೆ ಬೆದರಿಕೆ ಹಾಕುತ್ತಾರೆ ಎಂದು ಸ್ಥಾಯಿ ಸಮಿತಿ ಸದಸ್ಯರು ದೂರಿದರು. ಇದಕ್ಕೆ ಸಚಿವರು, ಆರೋಗ್ಯಾಧಿಕಾರಿಗಳು ದಿಢೀರ್ ಭೇಟಿ ನೀಡಿ ವೈದ್ಯರ ಕಾರ್ಯವೈಖರಿ ಪರಿಶೀಲಿಸಿ, ಸಮಯಕ್ಕೆ ಸರಿಯಾಗಿ ಬಾರದಿದ್ದರೆ ಅಂಥವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಸೂಚನೆ ನೀಡಿದರು.

ಮದರ್‌ವುಡ್ ಆಸ್ಪತ್ರೆಯಲ್ಲಿ ಸೂಕ್ತ ರೀತಿ ಹೆರಿಗೆ ಮಾಡಿಸದೇ ಮೂರು ಮಕ್ಕಳ ಸಾವಾಗಲು ಕಾರಣವಾಗಿದ್ದು, ಚಿಕಿತ್ಸಾ ವೆಚ್ಚ ಕೂಡ ಹೆಚ್ಚು ಎಂಬ ದೂರನ್ನು ಸಭೆಯಲ್ಲಿ ಹೊರ ಹಾಕಲಾಯಿತು. ಇದಕ್ಕೆ, ಅಂಥವರ ವಿರುದ್ಧ ಕ್ರಮ ತೆಗೆದುಕೊಳ್ಳಿ, ಅಗತ್ಯ ಬಿದ್ದರೆ ಆಸ್ಪತ್ರೆ ಮುಚ್ಚಿಸಿ ಎಂದು ಪರಮೇಶ್ವರ್ ಹೇಳಿದರು.

ಬಡವರಿಗೆ ಸರಕಾರ ಮನೆ ಕಟ್ಟಿಕೊಡಲು ಯೋಜನೆ ಮಾಡಿದೆ. ಆದರೆ, ಅಧಿಕಾರಿಗಳ ನಿರ್ಲಕ್ಷತನದಿಂದ ಕೇವಲ ಶೇ.48ರಷ್ಟು ಮಾತ್ರ ಕಾಮಗಾರಿಯಾಗಿದೆ. ಮುಂದಿನ ಬಾರಿ ಕೆಡಿಪಿ ಸಭೆ ಕರೆದಾಗ ಐದು ವರ್ಷದ ಸಂಪೂರ್ಣ ಮಾಹಿತಿ, ಹಣಕಾಸಿನ ಅಂಕಿ ಅಂಶವನ್ನು ಮೊದಲೆ ಲೆಕ್ಕ ಹಾಕಿಕೊಂಡು ಬರಬೇಕು. ಪ್ರತಿ ಇಲಾಖೆ ಮಾಹಿತಿ ಇರಬೇಕು. ತಪ್ಪುಮಾಹಿತಿ ನೀಡಿದರೆ ಸಹಿಸುವುದಿಲ್ಲ ಎಂದು ಅವರು ಎಚ್ಚರಿಕೆ ನೀಡಿದರು.

ರಾಸಾಯನಿಕಗಳ ಸೇರ್ಪಡೆಯಿಂದ ತಿಪ್ಪಗೊಂಡನಹಳ್ಳಿ ನೀರು ಸಂಪೂರ್ಣ ಮಲಿನವಾಗಿದೆ. ಎತ್ತಿನಹೊಳೆ ಯೋಜನೆಯೊಂದಿಗೆ ಈ ಕೆರೆಯ ನೀರನ್ನು ಬಳಸಿಕೊಳ್ಳುವ ಚಿಂತನೆ ಇದೆ. ಸುತ್ತಲು ಇರುವ ಕೈಗಾರಿಕೆ ಕೊಳಚೆ ನೀರನ್ನು ಇದಕ್ಕೆ ಬಿಡದೇ ಇರಲು ಸೂಚಿಸಲಾಗಿದೆ. ಈ ನೀರನ್ನು ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪರಮೇಶ್ವರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News