ಆನೆ ದಂತ ಮಾರಾಟಕ್ಕೆ ಯತ್ನ: ಮೂವರ ಬಂಧನ

Update: 2018-11-05 14:16 GMT

ಬೆಂಗಳೂರು, ನ.5: ಆನೆ ದಂತ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪದಡಿ ಮೂವರನ್ನು ಬಂಧಿಸಿರುವ ನಗರದ ಈಶಾನ್ಯ ವಿಭಾಗದ ಪೊಲೀಸರು 15 ಕೆ.ಜಿ. ತೂಕದ ಎರಡು ಆನೆ ದಂತ ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಹಾಸನ ಜಿಲ್ಲೆ ಮಾರನಹಳ್ಳಿಯ ನಾಗೇಶ್(48), ಕಡಗರವಳ್ಳಿಯ ಕೃಷ್ಣರಾಜು (54) ಹಾಗೂ ಹರಳಹಳ್ಳಿ ಪ್ರತಾಪ್ (27) ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳು ಹೆಬ್ಬಾಳ ಕೆರೆಯ ಗಣೇಶ ವಿಸರ್ಜನೆ ಮಾಡುವಾಗ ಕಲ್ಯಾಣಿ ಗೇಟ್ ಮುಂಭಾಗದ ರಿಂಗ್ ರಸ್ತೆಯಲ್ಲಿ ಆಟೊ ಕಾರಿನಲ್ಲಿ ಆನೆ ದಂತಗಳನ್ನು ಇಟ್ಟುಕೊಂಡು ಮಾರಾಟ ಮಾಡಲು ಯತ್ನಿಸಿದ್ದಾಗ ಕಾರ್ಯಾಚರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ ಎನ್ನಲಾಗಿದೆ.

ಆರೋಪಿಗಳು ಕೃಷಿ ಕೂಲಿಕಾರರಾಗಿದ್ದು, ಸಕಲೇಶಪುರ ಅರಣ್ಯದಲ್ಲಿ ಮೃತಪಟ್ಟಿದ್ದ ಆನೆಯ ಬಗ್ಗೆ ಅರಣ್ಯ ಇಲಾಖೆಯವರಿಗೆ ತಿಳಿಸದೆ ಸ್ಥಳೀಯರಿಗೂ ಗೊತ್ತಾಗದಂತೆ ಸಂಚು ರೂಪಿಸಿ, ದಂತಗಳನ್ನು ತೆಗೆದುಕೊಂಡು ಮೃತದೇಹವನ್ನು ಹೂತು ಹಾಕಿದ್ದರು. ದಂತಗಳನ್ನು ನಗರಕ್ಕೆ ಆಟೊ ಕಾರಿನಲ್ಲಿ ತೆಗೆದುಕೊಂಡು ಬಂದು ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News