ಒಪ್ಪಂದದ ಮಾತುಕತೆಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅಧಿಕಾರಿಗಳ ವರ್ಗಾವಣೆಯ ಸುತ್ತ ಸಂಶಯ
ಹೊಸದಿಲ್ಲಿ, ನ.8: ರಫೇಲ್ ಯುದ್ಧ ವಿಮಾನ ಖರೀದಿ ಹಾಗೂ ನಿರ್ಧಾರ ಪ್ರಕ್ರಿಯೆಗಳನ್ನು ಕೂಲಂಕಷವಾಗಿ ಪರಿಶೀಲಿಸಲು ಸುಪ್ರೀಂ ಕೋರ್ಟ್ ಕ್ರಮ ಕೈಗೊಂಡಿರುವಂತೆಯೇ ರಫೇಲ್ ಒಪ್ಪಂದದ ಮಾತುಕತೆಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದ ರಕ್ಷಣಾ ಸಚಿವಾಲಯದ ಖರೀದಿ ವಿಭಾಗದ ಕೆಲ ಪ್ರಮುಖ ಅಧಿಕಾರಿಗಳನ್ನು ಬೇರೆ ಇಲಾಖೆಗಳಿಗೆ ವರ್ಗಾಯಿಸಲಾಗಿರುವುದು ಸಾಕಷ್ಟು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.
1983ನೇ ಬ್ಯಾಚಿನ ಹಿಮಾಚಲ ಪ್ರದೇಶ ಕೇಡರ್ ಐಎಎಸ್ ಅಧಿಕಾರಿ ಆಶಾ ರಾಮ್ ಸಿಹಾಗ್ 2013ರಲ್ಲಿ ಮಹಾನಿರ್ದೇಶಕರ (ಸ್ವಾಧೀನ) ಹುದ್ದೆಯಲ್ಲಿದ್ದರೆ ಅವರನ್ನು ಒಪ್ಪಂದ ಪ್ರಮುಖ ಘಟ್ಟದಲ್ಲಿರುವಾಗ ಹಾಗೂ ರಫೇಲ್ ಒಪ್ಪಂದಕ್ಕೆ ಸಹಿ ಹಾಕಲು ಕೆಲವೇ ತಿಂಗಳುಗಳಿರುವಾಗ ರಕ್ಷಣಾ ಸಚಿವಾಲಯದಿಂದ ವರ್ಗಾಯಿಸಿ ಕೇಂದ್ರ ಲೋಕಸೇವಾ ಆಯೋಗದ ಕಾರ್ಯದರ್ಶಿಯನ್ನಾಗಿಸಲಾಗಿದೆ.
ಈ ಹುದ್ದೆ ಹೆಚ್ಚುವರಿ ಕಾರ್ಯದರ್ಶಿ ಮಟ್ಟದ ಹುದ್ದೆಯಾಗಿದ್ದು, ಅವರ ಹಿಂದಿನ ಹುದ್ದೆಗಿಂತ ಕೆಳಗಿನ ಶ್ರೇಣಿಯಲ್ಲಿದೆ. ಅವರ ಸ್ಥಾನಕ್ಕೆ ರಕ್ಷಣಾ ಸಚಿವಾಲಯದಲ್ಲಿ 1984 ಬ್ಯಾಚಿನ ತಮಿಳುನಾಡು ಕೇಡರ್ ಅಧಿಕಾರಿ ಸ್ಮಿತಾ ನಾಗರಾಜ್ ಅವರನ್ನು ನೇಮಕ ಮಾಡಲಾಗಿದ್ದು, ಅವರು ಅಧಿಕಾರ ವಹಿಸಿಕೊಂಡ ಒಂಬತ್ತು ತಿಂಗಳಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು.
ಆದರೆ ಒಂದು ವರ್ಷದ ನಂತರ ಅವರನ್ನು ಕೇಂದ್ರ ಲೋಕಸೇವಾ ಆಯೋಗದ ಸದಸ್ಯೆಯನ್ನಾಗಿಸಲಾಗಿತ್ತು. ಅವರು ಡಿಸೆಂಬರ್ 2017ರಲ್ಲಿ ನಿವೃತ್ತಿಯಾಗಲು ಆಗ ಸುಮಾರು ಒಂದು ವರ್ಷವಿದ್ದಾಗಲೂ ವರ್ಗಾಯಿಸಿ ಆರು ವರ್ಷ ಸೇವಾವಧಿಯ ಯುಪಿಎಸ್ಸಿ ಸದಸ್ಯೆಯನ್ನಾಗಿಸಿದ್ದನ್ನು ಕಾಂಗ್ರೆಸ್ ಪ್ರಶ್ನಿಸಿದೆ.