ಶ್ರೀಕಾಂತ್, ಸಮೀರ್‌ಗೆ ಸೋಲು: ಭಾರತದ ಸವಾಲು ಅಂತ್ಯ

Update: 2018-11-16 18:17 GMT

ಕೌಲೂನ್, ನ.16: ಹಿರಿಯ ಶಟ್ಲರ್ ಕಿಡಂಬಿ ಶ್ರೀಕಾಂತ್ ಹಾಗೂ ಸಮೀರ್ ವರ್ಮಾ ಹಾಂಕಾಂಗ್ ಓಪನ್‌ನ ಪುರುಷರ ಸಿಂಗಲ್ಸ್ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಸೋಲುವುದರೊಂದಿಗೆ ಟೂರ್ನಿಯಲ್ಲಿ ಭಾರತದ ಸವಾಲು ಕೊನೆಗೊಂಡಿದೆ. ಇಲ್ಲಿ ಶುಕ್ರವಾರ ನಡೆದ ಅಂತಿಮ-8ರ ಸುತ್ತಿನ ಪಂದ್ಯದಲ್ಲಿ ನಾಲ್ಕನೇ ಶ್ರೇಯಾಂಕದ ಶ್ರೀಕಾಂತ್ ಜಪಾನ್‌ನ ಕೆಂಟಾ ನಿಶಿಮೊಟೊ ವಿರುದ್ಧ 17-21, 13-21 ನೇರ ಸೆಟ್‌ಗಳ ಅಂತರದಿಂದ ಸೋತಿದ್ದಾರೆ.

44 ನಿಮಿಷಗಳಲ್ಲಿ ಕೊನೆಗೊಂಡ ಪಂದ್ಯದುದ್ದಕ್ಕೂ ಆಂಧ್ರದ ಗುಂಟೂರಿನ ಆಟಗಾರ ಶ್ರೀಕಾಂತ್ ಎದುರಾಳಿ ನಿಶಿಮೊಟೊಗೆ ಸ್ಪರ್ಧೆಯನ್ನೇ ನೀಡಲಿಲ್ಲ. ಎರಡೂ ಗೇಮ್‌ಗಳಲ್ಲಿ ಜಪಾನ್ ಆಟಗಾರ ಎಲ್ಲ ವಿಭಾಗಗಳಲ್ಲಿ ಉತ್ತಮ ಪ್ರದರ್ಶನ ನೀಡಿದರು.

ಗುರುವಾರದ ಪಂದ್ಯದಲ್ಲಿ ವಾಕ್‌ಓವರ್ ಪಡೆದಿದ್ದ ಸಮೀರ್ ವರ್ಮಾ ಮತ್ತೊಂದು ಕ್ವಾರ್ಟರ್ ಫೈನಲ್‌ನಲ್ಲಿ ಹಾಂಕಾಂಗ್‌ನ ಲೀ ಚೆವುಕ್ ಯಿವು ವಿರುದ್ಧ 15-21, 21-19,11-21 ಗೇಮ್‌ಗಳ ಅಂತರದಿಂದ ಸೋತಿದ್ದಾರೆ.

ಮೊದಲ ಗೇಮ್‌ನಲ್ಲಿ 15-21 ಅಂತರದಿಂದ ಸೋತಿದ್ದ ಸಮೀರ್ ಎರಡನೇ ಗೇಮ್‌ನ್ನು 21-19ರಿಂದ ಜಯಿಸಿ ತಿರುಗೇಟು ನೀಡಿದ್ದರು. ಆದರೆ, ನಿರ್ಣಾಯಕ 3ನೇ ಗೇಮ್‌ನಲ್ಲಿ ಮತ್ತೊಮ್ಮೆ ಎಡವಿದರು.

ಸಮೀರ್, ಶ್ರೀಕಾಂತ್ ಸೋಲಿನೊಂದಿಗೆ ಈ ವರ್ಷ ಭಾರತದ ಯಾವೊಬ್ಬ ಬ್ಯಾಡ್ಮಿಂಟನ್ ತಾರೆಯರು ಪ್ರಮುಖ ಪ್ರಶಸ್ತಿಯನ್ನು ಜಯಿಸಿಲ್ಲ. ಪಿ.ವಿ. ಸಿಂಧು ಮೂರು ಮುಖ್ಯ ಟೂರ್ನಿಗಳಲ್ಲಿ ಫೈನಲ್‌ಗೆ ತಲುಪಿದ್ದರೂ ಪ್ರಶಸ್ತಿ ಕೈಗೆಟುಕಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News