ತಡರಾತ್ರಿ ಶಬರಿಮಲೆಯಲ್ಲಿ ಅಯ್ಯಪ್ಪ ಭಕ್ತರ ಬಂಧನ: ಕೇರಳದಾದ್ಯಂತ ಭಾರೀ ಪ್ರತಿಭಟನೆ
ಶಬರಿಮಲೆ, ನ.19: ಶಬರಿಮಲೆ ದೇಗುಲದಲ್ಲಿ ತಡರಾತ್ರಿ ಸುಮಾರು 70 ಅಯ್ಯಪ್ಪ ಭಕ್ತರನ್ನು ಪೊಲೀಸರು ಬಂಧಿಸಿದ್ದನ್ನು ಖಂಡಿಸಿ ಹಿಂದೂಪರ ಸಂಘಟನೆಗಳು ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಂಡಿವೆ.
ಪೊಲೀಸರ ನಿರ್ಬಂಧ ಹಾಗೂ ಪೊಲೀಸ್ ಪಡೆಯನ್ನು ಹಿಂಪಡೆಯಬೇಕೆಂದು ಆಗ್ರಹಿಸಿ ನೂರಾರು ಅಯ್ಯಪ್ಪ ಭಕ್ತರು ತಡರಾತ್ರಿ ಪ್ರತಿಭಟನೆ ನಡೆಸಲಾರಂಭಿಸಿದರು. ದೇವಸ್ಥಾನದ ಆವರಣದಲ್ಲಿ ರಾತ್ರಿ ತಂಗುವ ಕುರಿತು ವಿಧಿಸಿರುವ ನಿಷೇಧವನ್ನು ಹಿಂಪಡೆಯಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ರವಿವಾರ ರಾತ್ರಿ ನಡೆದ ಘಟನೆಯನ್ನು ಖಂಡಿಸಿ ಸಂಘಪರಿವಾರದ ಕಾರ್ಯಕರ್ತರು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ತಿರುವನಂತಪುರದಲ್ಲಿರುವ ನಿವಾಸದ ಎದುರು ಪ್ರತಿಭಟನೆ ನಡೆಸಿದರು. ಬಿಜೆಪಿ ಕಾರ್ಯಕರ್ತರು ಕೊಚ್ಚಿ, ಕೋಯಿಕ್ಕೋಡ್, ಮಲ್ಲಪ್ಪುರಂ, ಅರನಮೂಲ,ಕೊಲ್ಲಂ, ಕಾಲಾಡಿ ಹಾಗೂ ಇಡುಕ್ಕಿ ಸಹಿತ ಹಲವು ಪ್ರದೇಶಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಈ ಹಿಂದಿನ ಹಿಂಸಾಚಾರ ಘಟನೆ ಹಿನ್ನೆಲೆಯಲ್ಲಿ ಪೊಲೀಸರು ಸನ್ನಿಧಾನಂ ಹಾಗೂ ದೇವಸ್ಥಾನ ಒಳಗೆ ಭಕ್ತಾಧಿಗಳಿಗೆ ಕಠಿಣ ನಿರ್ಬಂಧ ಹೇರುತ್ತಿದ್ದಾರೆ. ರಾತ್ರಿ ವೇಳೆ ದೇವಸ್ಥಾನದಲ್ಲಿ ತಂಗುವುದಕ್ಕೆ ಅವಕಾಶವನ್ನು ನಿರಾಕರಿಸಲಾಗಿದೆ.