ಅನಧಿಕೃತ ನೀರಿನ ಸಂಪರ್ಕ ಹೊಂದಿದರೆ ಕ್ರಿಮಿನಲ್ ಕೇಸ್: ಡಿಸಿಎಂ ಪರಮೇಶ್ವರ್ ಎಚ್ಚರಿಕೆ

Update: 2018-11-20 13:41 GMT

ಬೆಂಗಳೂರು, ನ. 20: ಅನಧಿಕೃತವಾಗಿ ನೀರಿನ ಸಂಪರ್ಕ ಹೊಂದಿರುವ ಬಳಕೆದಾರರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ, ಕಟ್ಟುನಿಟ್ಟಿನ ಕ್ರಮಕೈಗೊಳ್ಳಿ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಜಲಮಂಡಳಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಮಂಗಳವಾರ ಬಿಡಬ್ಲ್ಯೂಎಸ್‌ಎಸ್‌ಬಿ ಕಚೇರಿಯಲ್ಲಿ ಜಲ ಮಂಡಳಿ ಅಧಿಕಾರಿಗಳ ಜತೆ ಸಭೆ ನಡೆಸಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಪೈಪ್‌ಲೈನ್‌ಗಳಿಂದಲೇ ಶೇ.25ರಷ್ಟು ನೀರು ಸೋರಿಕೆಯಾಗುತ್ತಿದೆ. ಇದನ್ನು ಹೊರತುಪಡಿಸಿ ನೀರಿನ ಶುಲ್ಕ ಪಾವತಿಸದೇ, ಅನಧಿಕೃತ ಸಂಪರ್ಕ ಹೊಂದಿ ನೀರು ಬಳಕೆ ಮಾಡುವವರು ಇದ್ದಾರೆ. 1ಸಾವಿರಕ್ಕೂ ಹೆಚ್ಚು ಅನಧಿಕೃತ ಸಂಪರ್ಕದ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿದ್ದೇವೆ. ಆದರೆ, ಎಫ್‌ಐಆರ್ ದಾಖಲಿಸಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಕೇವಲ ದೂರು ನೀಡುವುದರಿಂದ ಅನಧಿಕೃತ ಸಂಪರ್ಕವನ್ನು ಕಡಿಮೆ ಮಾಡಲು ಸಾಧ್ಯವಿಲ್ಲ. ಅಂಥವರ ವಿರುದ್ಧ ಕೂಡಲೇ ಎಫ್‌ಐಆರ್ ದಾಖಲಿಸಿ. ಇದರಿಂದ, ಅನಧಿಕೃತ ಸಂಪರ್ಕ ಹೊಂದಲು ಮುಂದಾಗುವುದಿಲ್ಲ. ಯಾವುದೇ ದೂರಾದರೂ ಕ್ರಿಮಿನಲ್ ಪ್ರಕರಣದಲ್ಲಿ ಎಫ್‌ಐಆರ್ ದಾಖಲಿಸುವಂತೆ ಅವರು ಸೂಚಿಸಿದರು. ಇದರ ಜೊತೆಗೆ ಪೈಪ್‌ಲೈನ್ ಮೂಲಕವೂ ಸೋರಿಕೆಯಾಗುತ್ತಿರುವ ಬಗ್ಗೆ ಶೇ.25ರಷ್ಟು ಎಂದು ಅಂದಾಜಿಸಲಾಗಿದೆ. ಆದರೆ, ನಿಖರತೆ ಇಲ್ಲ. ಎಷ್ಟೆಲ್ಲ ಹಳೆಯ ಪೈಪ್‌ಲೈನ್ ಇದೆ ಹಾಗೂ ಎಲ್ಲೆಲ್ಲಿ ಸೋರಿಕೆಯಾಗುತ್ತಿದೆ ಎಂಬುದರ ಬಗ್ಗೆ ಆಡಿಟ್ ನಡೆಸಿ, ವರದಿ ನೀಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಪೈಪ್‌ಲೈನ್ ಬದಲಾವಣೆ: ದಕ್ಷಿಣ, ಪಶ್ಚಿಮ, ಕೇಂದ್ರ ವಿಭಾಗದಲ್ಲಿ ಯುಎಫ್‌ಡಬ್ಲ್ಯೂ ಯೋಜನೆ ಕೈಗೊಂಡು, 635 ಕೋಟಿ ರೂ.ವೆಚ್ಚದಲ್ಲಿ 132 ಕಿ.ಮೀ. ಉದ್ದದ ಅತ್ಯಂತ ಹಳೆಯ ಪೈಪ್‌ಲೈನ್ ಬದಲಿಸಲಾಗಿದೆ. ಇದರಿಂದ ಸೋರಿಕೆ ಪ್ರಮಾಣ ಈ ಭಾಗದಲ್ಲಿ ಕಡಿಮೆಯಾಗಿದೆ. ಆದರೆ, ನೀರಿನ ಸೋರಿಕೆಯನ್ನು ಸಂಪೂರ್ಣ ತಡೆಗಟ್ಟಬೇಕು ಎಂದು ಪರಮೇಶ್ವರ್ ಅಧಿಕಾರಿಗಳಿಗೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News