‘ಗುಪ್ತಚರ ಇಲಾಖೆ ಕುಮಾರಸ್ವಾಮಿ ಪುತ್ರನಿಗೆ ವರದಿ ನೀಡುತ್ತಿದೆಯೇ?’

Update: 2018-11-21 13:02 GMT

ಬೆಂಗಳೂರು, ನ. 21: ಕಬ್ಬು ಬೆಳಗಾರರ ಪ್ರತಿಭಟನೆ ಸಂಬಂಧ ಮುಖ್ಯಮಂತ್ರಿ ಕುಮಾರಸ್ವಾಮಿ ಪುತ್ರ ನಿಖಿಲ್, ‘ನಮಗೆ ಬಂದ ಗುಪ್ತಚರ ವರದಿಯನ್ವಯ’ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಅಂದರೆ ಗುಪ್ತಚರ ವರದಿ ಅಷ್ಟು ಸಸ್ತಾ ಆಗೋಗಿದೆಯೇ? ಎಂದು ಬಿಜೆಪಿ ಶಾಸಕ ಎಸ್.ಸುರೇಶ್ ಕುಮಾರ್ ಟ್ವಿಟ್ಟರ್ ಮೂಲಕ ಪ್ರಶ್ನಿಸಿದ್ದಾರೆ.

ನಟ ನಿಖಿಲ್, ‘ನಮಗೆ ದೊರೆತಿರುವ ಗುಪ್ತಚರ ಮಾಹಿತಿ ಪ್ರಕಾರ ಕಬ್ಬು ಬಾಕಿ ಪಾವತಿಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದವರು ರೈತರೇ ಅಲ್ಲ’ ಎಂಬರ್ಥದ ಮಾತುಗಳನ್ನಾಡಿದ ವಿಡಿಯೋವನ್ನು ಶೇರ್ ಮಾಡಿರುವ ಸುರೇಶ್ ಕುಮಾರ್, ‘ಸಿಎಂ ಪುತ್ರನಿಗೆ ವರದಿ ನೀಡುತ್ತಿದೆಯೇ ಗುಪ್ತಚರ ಇಲಾಖೆ? ವರದಿ ಪಡೆಯಲು ನಿಖಿಲ್ ಕುಮಾರ್ ಮುಖ್ಯಮಂತ್ರಿಯೇ? ಗೃಹಮಂತ್ರಿಯೇ? ಅಪ್ಪ-ಮಕ್ಕಳ ರಾಜಕಾರಣದಲ್ಲಿ ಕಾನೂನು ಕಾಲಕಸ’ ಎಂದು ಉಲ್ಲೇಖಿಸಿದ್ದಾರೆ.

‘ಗುಪ್ತಚರ ವರದಿ ಅಷ್ಟು ಸಸ್ತಾ ಆಗೋಗಿದೆಯೇ? ಗುಪ್ತಚರ ವರದಿ ಸಿಗೋದಕ್ಕೆ ನಿಖಿಲ್ ಕುಮಾರಸ್ವಾಮಿಯವರ ಅಧಿಕಾರ ಏನು? ಮುಖ್ಯಮಂತ್ರಿಗಳ ಮಗನಾಗಿದ್ದಕ್ಕೆ ಈ ಮಹದವಕಾಶವೇ? ಮುಖ್ಯಮಂತ್ರಿ ಕುಮಾರಸ್ವಾಮಿಯವರು ಈ ಬಗ್ಗೆ ಸ್ಪಷ್ಟನೆ ನೀಡಬೇಕು’ ಎಂದು ಸುರೇಶ್ ಕುಮಾರ್ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News