ಮಂಗಳೂರು: ಡಿ.1ರಿಂದ ಎರಡು ದಿನಗಳ ಜನನುಡಿ-2018 ಕಾರ್ಯಕ್ರಮ

Update: 2018-11-21 16:34 GMT

ಬೆಂಗಳೂರು, ನ.21: ದೇಶದ ಜನ ಎದುರಿಸುತ್ತಿರುವ ಸವಾಲುಗಳಿಗೆ ಸಾಹಿತ್ಯ ಮತ್ತು ಸಂಸ್ಕೃತಿಗಳ ಮೂಲಕ ಉತ್ತರ ಕಂಡುಕೊಳ್ಳುವ ಸಲುವಾಗಿ ಡಿ.1 ಮತ್ತು 2 ರಂದು ಮಂಗಳೂರಿನ ಶಾಂತಿಕಿರಣದಲ್ಲಿ ‘ಜನನುಡಿ-2018’ ಅನ್ನು ಹಮ್ಮಿಕೊಳ್ಳಲಾಗಿದೆ.

ಬುಧವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚಿತ್ರ ನಿರ್ದೇಶಕ ಬಿ.ಸುರೇಶ್, ನಾಡಿನ ಸಾಹಿತ್ಯಕ, ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರದವರ ಗಮನ ಸೆಳೆಯುತ್ತಿರುವ ಪ್ರಮುಖ ಕಾರ್ಯಕ್ರಮವಾಗಿದೆ. ಕಲಬುರಗಿಯಿಂದ ಹಿಡಿದು ಮೈಸೂರು ವರೆಗೆ, ಶಿವಮೊಗ್ಗದಿಂದ ಕೋಲಾರದವರೆಗೆ ರಾಜ್ಯದ ಬಹುತೇಕ ಭಾಗಗಳಿಂದ ಜನ ಸ್ವ ಇಚ್ಛೆಯಿಂದ ಜನನುಡಿಯಲ್ಲಿ ಪಾಲ್ಗೊಳಲಿದ್ದಾರೆ ಎಂದು ಹೇಳಿದರು.

ದೇಶದಲ್ಲಿ ಸಾಮಾಜಿಕ, ಧಾರ್ಮಿಕ, ರಾಜಕೀಯ, ಶೋಷಣೆಗೆ ಒಳಗಾಗಿ ದನಿ ಕಳೆದುಕೊಂಡಿದ್ದ ವರ್ಗ ಇದೀಗ ಮಾತನಾಡತೊಡಗಿದೆ. ದಲಿತರು, ಹಿಂದುಳಿದ ಜಾತಿಗಳು ಅಲ್ಪಸಂಖ್ಯಾತರು ಜಾಗೃತರಾಗುತ್ತಿದ್ದಾರೆ. ಅಸಮಾನತೆಯನ್ನು ಪ್ರಶ್ನಿಸುತ್ತಿದ್ದಾರೆ. ಅಲ್ಲದೆ, ಸಾಹಿತಿಗಳು, ಕಲಾವಿದರು, ವಿಜ್ಞಾನಿಗಳು ಧೈರ್ಯವಾಗಿ ಮಾತನಾಡುತ್ತಾ, ಬೀದಿಗಿಳಿದು ಪ್ರತಿಭಟಿಸುತ್ತಿದ್ದಾರೆ.

ನಮ್ಮನ್ನು ಒಡೆದು, ನಮ್ಮಲ್ಲಿಯೇ ಅಪನಂಬಿಕೆ ಹುಟ್ಟಿಸಿ ಪ್ರತ್ಯೇಕವಾಗಿಸಿ ಪರಸ್ಪರ ಕಾದಾಡುತ್ತಾ ನಾಶವಾಗುವಂತೆ ಮಾಡುತ್ತಿರುವ ಕೋಮುವಾದದ ದುಷ್ಟತನವನ್ನು ಎಲ್ಲರೂ ಪ್ರಶ್ನಿಸುತ್ತಿದ್ದಾರೆ. ಇದು ಜನನುಡಿಯ ಆಶಯವಾಗಿದ್ದು, ಕಳೆದ ನಾಲ್ಕು ವರ್ಷಗಳಿಂದ ವಿಚಾರ ಹರಡುವಲ್ಲಿ ಜನನುಡಿ ಯಶಸ್ವಿಯಾಗಿದೆ. ಅದರ ಮುಂದುವರಿದ ಭಾಗವಾಗಿಯೇ ಈ ಬಾರಿಯ ಜನನುಡಿ ಎಂದರು.

ಹಿಂದಿನ ದಿನಗಳಲ್ಲಿ ವಿಚಾರಗಳಲ್ಲಿ ಭಿನ್ನಾಭಿಪ್ರಾಯಗಳಿದ್ದರೂ ಪರಸ್ಪರ ಹೊಂದಾಣಿಕೆಯಿಂದ ಇರುತ್ತಿದ್ದರು. ಆದರೆ, ಇಂದು ನಾಡಿನ ಚಿಂತಕರನ್ನು, ಲೇಖಕರನ್ನು, ಸಾಹಿತಿಗಳನ್ನು ಬಲಪಂಥೀಯರು ಗುರಿಯಾಗಿಸಿಕೊಂಡು ಹತ್ಯೆ ಮಾಡಲಾಗುತ್ತಿದೆ. ಅಲ್ಲದೆ, ಪ್ರಭುತ್ವದ ವಿರುದ್ಧ ಮಾತನಾಡುವವರನ್ನು ನಕ್ಸಲ್ ಎಂದು ಹೆಸರಿಸಲಾಗುತ್ತಿದೆ. ಈ ಮೂಲಕ ನ್ಯಾಯದ ಪರ ಮಾತನಾಡುವವರ ಧ್ವನಿ ಅಡಗಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಹೇಳಿದರು.

ಈ ನಿಟ್ಟಿನಲ್ಲಿ ಜನನುಡಿ ಪ್ರಮುಖ ಪಾತ್ರ ವಹಿಸಲಿದೆ. ಕಾರ್ಯಕ್ರಮವನ್ನು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಉದ್ಘಾಟಿಸಲಿದ್ದು, ಬಹುಭಾಷಾ ನಟ ಹಾಗೂ ಚಿಂತಕ ಪ್ರಕಾಶ್ ರೈ, ಚಿಂತಕ ಡಾ.ಹಸೀನಾ ಖಾದ್ರಿ, ದಲಿತ ಹೋರಾಟಗಾರ ಎಂ.ದೇವದಾಸ್ ಪಾಲ್ಗೊಳ್ಳಲಿದ್ದು, ಲೇಖಕಿ ವಿನಯಾ ಒಕ್ಕುಂದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಎರಡು ದಿನಗಳ ಕಾಲ ನಡೆಯಲಿರುವ ಜನನುಡಿಯಲ್ಲಿ ‘ಭವಿಷ್ಯದ ಭಾರತ: ಮಾಕ್ಸ್-ಅಂಬೇಡ್ಕರ್-ಗಾಂಧಿ-ಲೋಹಿಯಾ’ ವಿಷಯದ ವಿಚಾರ ಗೋಷ್ಠಿಯಲ್ಲಿ ಡಾ.ಪುರುಷೋತ್ತಮ ಬಿಳಿಮಲೆ, ಡಾ.ಮುಜಾಫರ್ ಅಸ್ಸಾದಿ, ಡಾ.ಡಿ.ಡೊಮಿನಿಕ್, ಜಿ.ರಾಜಶೇಖರ ವಿಷಯ ಮಂಡನೆ ಮಾಡಲಿದ್ದಾರೆ. ಸಂಜೆ ನಡೆಯಲಿರುವ ‘ಭಾರತದ ಮುಸ್ಲಿಮರು’ ವಿಚಾರಗೋಷ್ಠಿಯಲ್ಲಿ ವಾರ್ತಾಭಾರತಿ ಪ್ರಧಾನ ಸಂಪಾದಕ ಅಬ್ದುಸ್ಸಲಾಂ ಪುತ್ತಿಗೆ ವಿಚಾರ ಮಂಡನೆ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದರು.

ಎರಡನೇ ದಿನ ಕವಿಗೋಷ್ಠಿ ನಡೆಯಲಿದ್ದು, ಅನಂತರ ‘ಹೊರಳು ನೋಟ’ ಗೋಷ್ಠಿಯಲ್ಲಿ ಮಹೇಂದ್ರಕುಮಾರ್, ಸುಧೀರ್ ಮರೊಳ್ಳಿ, ನಿಕೇತ್‌ರಾಜ್ ಮೌರ್ಯ ವಿಷಯ ಮಂಡನೆ ಮಾಡಲಿದ್ದಾರೆ. ‘ದಲಿತ ಭಾರತ: ಸಂವಾದ ಗೋಷ್ಠಿಯಲ್ಲಿ ರವಿಕುಮಾರ್ ಟೆಲೆಕ್ಸ್, ಡಾ.ಪುಷ್ಪಾ ಅಮರೇಶ್ ವಿಷಯ ಮಂಡನೆ ಮಾಡುವರು.

ಅನಂತರದ ಮಹಿಳಾ ಭಾರತ: ಸಂವಾದ ಗೋಷ್ಠಿಯಲ್ಲಿ ಡಾ.ಚಮನ್ ಫರ್ಜಾನ, ಸೌಮ್ಯ ವಿಚಾರ ಮಂಡನೆ ಮಾಡಲಿದ್ದು, ಎಚ್.ಎಸ್.ಅನುಪಮಾ ಅಧ್ಯಕ್ಷತೆ ವಹಿಸುವರು. ಅಂದೇ ಸಂಜೆ ಸಮಾರೋಪ ಸಮಾರಂಭ ನಡೆಯಲಿದ್ದು, ದಿನೇಶ್ ಅಮಿನ್ ಮಟ್ಟು, ಪ್ರೊ.ವಲೇರಿಯನ್ ರೊಡ್ರಿಗಸ್, ಮಾವಳ್ಳಿ ಶಂಕರ್, ಎಸ್.ವರಲಕ್ಷ್ಮಿ ಪಾಲ್ಗೊಳ್ಳುವರು ಎಂದು ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News