‘ಕನ್ವರ್‌ಲಾಲ್’ ಪಾರ್ಥೀವ ಶರೀರದ ಮೆರವಣಿಗೆಗೆ ಹರಿದುಬಂದ ಜನಸಾಗರ

Update: 2018-11-26 14:06 GMT

ಬೆಂಗಳೂರು, ನ. 26: ಅನಾರೋಗ್ಯದ ಹಿನ್ನೆಲೆಯಲ್ಲಿ ನಿನ್ನೆ ನಿಧನರಾದ ಕೇಂದ್ರದ ಮಾಜಿ ಸಚಿವ ಹಾಗೂ ನಟ ಅಂಬರೀಶ್ ಅವರ ಪಾರ್ಥಿವ ಶರೀರದ ಅಂತಿಮ ಯಾತ್ರೆಯ ಮೆರವಣಿಗೆಗೆ ದೊಡ್ಡಸಂಖ್ಯೆಯ ಅಭಿಮಾನಿಗಳ ಜನ ಸಾಗರವೇ ಹರಿದು ಬಂದಿತ್ತು.

ಸೋಮವಾರ ಬೆಳಗ್ಗೆ 11:30ರ ಸುಮಾರಿಗೆ ಸೇನಾ ಹೆಲಿಕಾಪ್ಟರ್ ಮೂಲಕ ಇಲ್ಲಿನ ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಪಾರ್ಥಿವ ಶರೀರವನ್ನು ತಂದು, ಅಲ್ಲಿಂದ ವಿಶೇಷ ಆ್ಯಂಬುಲೆನ್ಸ್ ಮೂಲಕ ಪೊಲೀಸ್ ಭದ್ರತೆಯಲ್ಲಿ 11:55ಕ್ಕೆ ಕಂಠೀರವ ಕ್ರೀಡಾಂಗಣಕ್ಕೆ ತರಲಾಯಿತು.

ಸುಮಾರು 1,800 ಕೆಜಿಗಳಷ್ಟು ವಿವಿಧ ಹೂವುಗಳಿಂದ ಅಲಂಕರಿಸಿದ್ದ ವಿಶೇಷ ವಾಹನದಲ್ಲಿ ಅಂಬರೀಶ್ ಅವರ ಪಾರ್ಥಿವ ಶರೀರದ ಅಂತಿಮ ಯಾತ್ರೆಯ ಮೆರವಣಿಗೆಯನ್ನು ಮಧ್ಯಾಹ್ನ 12:30ರ ಸುಮಾರಿಗೆ ಕಂಠೀರವ ಕ್ರೀಡಾಂಗಣದಿಂದ ಆರಂಭಿಸಲಾಯಿತು. ವಿಶೇಷ ವಾಹನದಲ್ಲಿ ಪತ್ನಿ ಸುಮಲತಾ ಅಂಬರೀಶ್ ಹಾಗೂ ಪುತ್ರ ಅಭಿಶೇಕ್ ಇದ್ದರು.

ಅಲ್ಲಿಂದ ಹಡ್ಸನ್ ವೃತ್ತ, ಮೈಸೂರು ಬ್ಯಾಂಕ್ ವೃತ್ತ, ಬಸವೇಶ್ವರ ವೃತ್ತ, ವಿಂಡ್ಸರ್ ಮ್ಯಾನರ್ ಬ್ರಿಡ್ಜ್ ಮೂಲಕ ಕಾವೇರಿ ಚಿತ್ರ ಮಂದಿರ ಜಂಕ್ಷನ್ ಮೂಲಕ ಬಾಷ್ಯಂ ವೃತ್ತ, ಸ್ಯಾಂಕಿ ಕೆರೆ ಮಾರ್ಗದಲ್ಲಿ ಸರ್ಕಲ್ ಮಾರಮ್ಮ ವೃತ್ತ, ಯಶವಂತಪುರ ಮಾರ್ಗದಲ್ಲಿ ಗೊರುಗುಂಟೆಪಾಳ್ಯ ಜಂಕ್ಷನ್‌ನಿಂದ ಕಂಠೀರವ ಸ್ಟುಡಿಯೋ ವರೆಗೆ ಪಾರ್ಥಿವ ಶರೀರದ ಮೆರವಣಿಗೆ ನಡೆಸಲಾಯಿತು.

ಮೆರವಣಿಗೆ ಸಾಗಿದ ದಾರಿಯುದ್ದಕ್ಕೂ ಮಕ್ಕಳು, ಮಹಿಳೆಯರು, ವೃದ್ಧರೆಂಬ ಬೇಧವಿಲ್ಲದೆ, ದೊಡ್ಡ ಸಂಖ್ಯೆಯ ಯುವಜನರು ‘ಕನ್ವರ್ ಲಾಲ್ ಅಮರ್ ರಹೇ, ಅಂಬರೀಶ್ ಅಮರ್ ರಹೇ, ಅಂಬಿ ಮತ್ತೊಮ್ಮೆ ಹುಟ್ಟಿ ಬಾ, ಅಂಬರೀಶ್ ಮಂಡ್ಯದ ಗಂಡು’ ಎಂಬ ಉದ್ಘೋಷಗಳು, ಘೋಷಣೆಗಳು ಮುಗಿಲುಮುಟ್ಟಿದ್ದವು.

ನಾಲ್ವರು ಹೆಚ್ಚುವರಿ ಪೊಲೀಸ್ ಆಯುಕ್ತರು, 15 ಮಂದಿ ಡಿಸಿಪಿ, 4 ಸಾವಿರ ಸಂಚಾರ ಸಿಬ್ಬಂದಿ, 30 ಕೆಎಸ್ಆರ್ಪಿ, 34 ಸಿಎಆರ್, 3 ಆರ್‌ಎಎಫ್ ತುಕಡಿ ಸೇರಿ 15ಸಾವಿರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ಮುನ್ನಚ್ಚರಿಕೆ ಕ್ರಮವಾಗಿ ಭದ್ರತೆಗೆ ನಿಯೋಜಿಸಲಾಗಿತ್ತು.

ಅಂಬರೀಶ್ ಅವರ ಪಾರ್ಥಿವ ಶರೀರ ಇರಿಸಿದ್ದ ವಾಹನದ ಮುಂದೆ ಮುಂದಿನ ವಾಹನದಲ್ಲಿ ಚಿತ್ರರಂಗದ ಗಣ್ಯರು, ಹಿಂದಿನ ವಾಹನದಲ್ಲಿ ಸಿಎಂ ಕುಮಾರಸ್ವಾಮಿ ಅಂತಿಮ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ರಸ್ತೆಯುದ್ದಕ್ಕೂ ಅಭಿಮಾನಿಗಳು, ಅಂತಿಮ ದರ್ಶನ ಪಡೆದು ಗೌರವ ನಮನ ಸಲ್ಲಿಸಿದರು.

ಪಾರ್ಥಿವ ಶರೀರದ ಅಂತಿಮ ಯಾತ್ರೆ ಸಂಜೆ 4 ಗಂಟೆಯ ಸುಮಾರಿಗೆ ಇಲ್ಲಿನ ಕಂಠೀರವ ಕ್ರೀಡಾಂಗಣ ತಲುಪಿತು. ಅಂತಿಮ ಸಂಸ್ಕಾರಕ್ಕೆ ರಾಜಕೀಯ ಮತ್ತು ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿ ಸೇರಿದ್ದ ಹಿನ್ನೆಲೆಯಲ್ಲಿ ಪೊಲೀಸರು ಜನರನ್ನು ನಿಯಂತ್ರಿಸಲು ಹರಸಾಹಸ ಪಡಬೇಕಾಯಿತು.

ವಿದೇಶದಿಂದ ಬಂದ ನಟ ದರ್ಶನ್

ಯಜಮಾನ ಚಿತ್ರದ ಚಿತ್ರೀಕರಣಕ್ಕೆ ವಿದೇಶಕ್ಕೆ ತೆರಳಿದ್ದ ನಟ ದರ್ಶನ್, ಅತ್ಯಂತ ಗೌರವದಿಂದ ಅಪ್ಪಾಜಿ ಎಂದೇ ಕರೆಯುತ್ತಿದ್ದ ನಟ ಅಂಬರೀಶ್ ನಿಧನದ ಸುದ್ದಿ ತಿಳಿದು ಚಿತ್ರೀಕರಣ ರದ್ದುಗೊಳಿಸಿ ಸೋಮವಾರ ಬೆಳಗ್ಗೆ ಬೆಂಗಳೂರಿಗೆ ಧಾವಿಸಿದರು. ವಿಮಾನ ನಿಲ್ದಾಣದಿಂದ ನೇರವಾಗಿ ಕಂಠೀರವ ಕ್ರೀಡಾಂಗಣಕ್ಕೆ ಆಗಮಿಸಿ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಕಂಬನಿ ಮಿಡಿದರು.

ಸೋನಿಯಾ ಸಂದೇಶ ಪತ್ರ

‘ಅಂಬರೀಶ್ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಕಾಂಗ್ರೆಸ್‌ಪಕ್ಷದ ಹಿರಿಯ ಮುಖಂಡರಾದ ಗುಲಾಂ ನಬಿ ಆಝಾದ್, ಕೆ.ಸಿ.ವೇಣುಗೋಪಾಲ್, ಮುಖ್ಯಮಂತ್ರಿ ಕುಮಾರಸ್ವಾಮಿ ಅವರೊಂದಿಗೆ ಸಮಾಲೋಚನೆ ನಡೆಸಿದರು. ಇದೇ ವೇಳೆ ಎಐಸಿಸಿ ಮಾಜಿ ಅಧ್ಯಕ್ಷ ಸೋನಿಯಾ ಗಾಂಧಿ ಅವರ ಸಂದೇಶ ಪತ್ರವನ್ನು ಅಂಬರೀಶ್ ಪುತ್ರ ಅಭಿಷೇಕ್‌ಗೆ ಹಸ್ತಾಂತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News