ಕ್ಷೀರಕ್ರಾಂತಿಯ ಜನಕನ ವಿರುದ್ಧ ಗುಜರಾತ್ ಸಚಿವರ ವಿವಾದಾತ್ಮಕ ಹೇಳಿಕೆ
Update: 2018-11-27 09:04 GMT
ಹೊಸದಿಲ್ಲಿ, ನ.27: ಕ್ಷೀರಕ್ರಾಂತಿಯ ಜನಕ ಡಾ. ವರ್ಗೀಸ್ ಕುರಿಯನ್ ಡೈರಿ ಕಾರ್ಪೊರೇಟೀವ್ ಅಮುಲ್ ನ ಲಾಭವನ್ನು ಧಾರ್ಮಿಕ ಮತಾಂತರ ಕೆಲಸಗಳಿಗೆ ನೀಡಿದ್ದಾರೆ ಎನ್ನುವ ಗುಜರಾತ್ ಸಚಿವ ದಿಲೀಪ್ ಸಂಘಾನಿಯವರ ಹೇಳಿಕೆಗೆ ಕುರಿಯನ್ ಪುತ್ರಿ ನಿರ್ಮಲಾ ಕುರಿಯನ್ ಪ್ರತಿಕ್ರಿಯಿಸಿದ್ದಾರೆ.
“ಇಂತಹ ಹೇಳಿಕೆಗಳನ್ನು ನಾವು ನಿರ್ಲಕ್ಷಿಸಬೇಕು ಮತ್ತು ಭಾರತದ ಕ್ಷೀರಕ್ರಾಂತಿಗೆ ವರ್ಗೀಸ್ ಕುರಿಯನ್ ಮಾಡಿರುವ ಕೆಲಸಗಳ ಬಗ್ಗೆ ಗಮನಹರಿಸಬೇಕು. ನನ್ನ ತಂದೆ ನಾಸ್ತಿಕರಾಗಿದ್ದರು ಮತ್ತು ಅವರ ಆಸೆಯ ಪ್ರಕಾರ ಅವರ ಅಂತ್ಯಸಂಸ್ಕಾರ ನಡೆಸಲಾಗಿತ್ತು” ಎಂದು ನಿರ್ಮಲಾ ಹೇಳಿದ್ದಾರೆ.
ಅಮುಲ್ ಲಾಭವನ್ನು ವರ್ಗೀಸ್ ಕುರಿಯನ್ ಕ್ರಿಶ್ಚಿಯನ್ ಮಿಷನರಿಗಳು ನಡೆಸುವ ಮತಾಂತರಕ್ಕೆ ಬಳಸಿದ್ದಾರೆ ಎಂದು ಸಂಘಾನಿ ಆರೋಪಿಸಿದ್ದರು. “ಜಾನುವಾರು ಸಾಕುತ್ತಿದ್ದ ರೈತರ ಬದುಕಿನಲ್ಲಿ ಕುರಿಯನ್ ತಂದ ಬದಲಾವಣೆಗಳ ಬಗ್ಗೆ ನಾವು ಗಮನಹರಿಸಬೇಕಿದೆಯೇ ಹೊರತು ಇಂತಹ ಹೇಳಿಕೆಗಳ ಮೇಲಲ್ಲ” ಎಂದು ಸಚಿವರ ಹೇಳಿಕೆಗೆ ನಿರ್ಮಲಾ ಪ್ರತಿಕ್ರಿಯಿಸಿದ್ದಾರೆ.