ರಾಜ್ಯದ ಅಭಿವೃದ್ಧಿ ಯೋಜನೆಗಳಿಗೆ ನೆರವು: ಕೇಂದ್ರದ ಮೇಲೆ ಒತ್ತಡ ಹೇರಲು ಸಂಸದರಿಗೆ ಕುಮಾರಸ್ವಾಮಿ ಮನವಿ
ಬೆಂಗಳೂರು, ಡಿ. 4: ‘ಬರ ಪರಿಸ್ಥಿತಿಗೆ ನೆರವು, ಉದ್ಯೋಗ ಖಾತ್ರಿ ಯೋಜನೆಯ 950 ಕೋಟಿ ರೂ.ಬಾಕಿ ಹಾಗೂ ಕೇಂದ್ರ ಪುರಸ್ಕೃತ ಯೋಜನೆಗಳಿಗೆ ತನ್ನ ಪಾಲಿನ ಅನುದಾನ ಸೇರಿದಂತೆ ರಾಜ್ಯದ ಅಭಿವೃದ್ಧಿಗೆ ನೆರವು ನೀಡಲು ಕೇಂದ್ರದ ಮೇಲೆ ಒತ್ತಡ ಹೇರಬೇಕು’ ಎಂದು ಸಿಎಂ ಕುಮಾರಸ್ವಾಮಿ, ರಾಜ್ಯದ ಎಲ್ಲ ಸಂಸದರಿಗೆ ಮನವಿ ಮಾಡಿದ್ದಾರೆ.
ಮಂಗಳವಾರ ವಿಧಾನಸಭೆ ಸಮ್ಮೇಳನ ಸಭಾಂಗಣದಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯದ ಸಂಸದರು, ರಾಜ್ಯಸಭಾ ಸದಸ್ಯರ ಸಭೆ ನಡೆಸಿದ ಅವರು, ರಾಜ್ಯದ ನೆಲ, ಜಲ, ಅಭಿವೃದ್ಧಿ, ಕೈಗಾರಿಕೆ, ಕೃಷಿ, ವೈಮಾನಿಕ, ರಕ್ಷಣಾ ಇಲಾಖೆ ಪ್ರಸ್ತಾವಗಳ ಬಗ್ಗೆ ಕ್ರಮ ವಹಿಸಬೇಕೆಂದು ಕೋರಿದರು.
ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ 16 ಸಾವಿರ ಕೋಟಿ ರೂ.ಗಳಷ್ಟು ನಷ್ಟ ಉಂಟಾಗಿದ್ದು, ಅಗತ್ಯ ನೆರವು ಕೋರಿ ಈಗಾಗಲೇ ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಿದ್ದು, ಕೇಂದ್ರ ಅಧ್ಯಯನ ತಂಡವು ವರದಿ ಸಲ್ಲಿಸಿದೆ. ಆದರೂ ಕೇಂದ್ರ ಸರಕಾರ ಈವರೆಗೂ ಅನುದಾನ ಬಿಡುಗಡೆ ಮಾಡಿಲ್ಲ ಎಂದು ಹೇಳಿದರು.
ಬೆಂಗಳೂರು ನಗರದ ಅಭಿವೃದ್ದಿಗೆ ಸಂಬಂಧಿಸಿದಂತೆ ರಕ್ಷಣಾ ಇಲಾಖೆ ಭೂಮಿ ಹಸ್ತಾಂತರ ಸಂಬಂಧ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಮೌಖಿಕ ಸೂಚನೆ ನೀಡಿದ್ದರೂ, ಈ ವರೆಗೂ ಭೂಮಿ ಹಸ್ತಾಂತರ ಮಾಡಿಲ್ಲ. ಈ ಬಗ್ಗೆಯೂ ಸಂಸದರು ಒತ್ತಡ ಹೇರಬೇಕು ಎಂದರು.
2016-17ನೆ ಸಾಲಿನಲ್ಲಿ ನರೇಗಾ ಯೋಜನೆಗೆ ರಾಜ್ಯ ಸರಕಾರ ವೆಚ್ಚ ಮಾಡಿರುವ 950 ಕೋಟಿ ರೂ.ಬಾಕಿ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು. ಸರ್ವಶಿಕ್ಷಣ ಅಭಿಯಾನದಡಿಯಲ್ಲಿ ಕೇಂದ್ರ ತನ್ನ ಪಾಲಿನ ಹಣವನ್ನು ಬಿಡುಗಡೆ ಮಾಡಬೇಕು. ಫಸಲ್ ಬಿಮಾ ಯೋಜನೆ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಆಗ್ರಹಿಸಿದರು.
ಇಂಧನ ಉತ್ಪಾದನೆಗೆ ರಾಜ್ಯಕ್ಕೆ ಅಗತ್ಯ ಕಲ್ಲಿದ್ದಲು ಪೂರೈಕೆ ಮಾಡಬೇಕು. ಕಲಬುರ್ಗಿ ವಿಮಾನ ನಿಲ್ದಾಣದಿಂದ ಹಾರಾಟಕ್ಕೆ ವಿಮಾನಯಾನ ಇಲಾಖೆ ಕ್ರಮಕೈಗೊಳ್ಳಬೇಕು. ಪಡಿತರ ವಿತರಣೆಗೆ ಬೆಂಬಲ ಬೆಲೆ ಯೋಜನೆಯಡಿ ಖರೀದಿಸಿ ಕೃಷಿ ಉತ್ಪನ್ನಗಳಿಗೆ ಕೇಂದ್ರ 1,100 ಕೋಟಿ ರೂ.ಬಾಕಿ ಹಣವನ್ನು ಬಿಡುಗಡೆ ಮಾಡಬೇಕು ಎಂದು ಕೋರಿದರು. ಅಲ್ಲದೆ, ಮೇಕೆದಾಟು ಯೋಜನೆಗೆ ಕೇಂದ್ರ ಜಲ ಆಯೋಗದ ಒಪ್ಪಿಗೆ ನೀಡಿದ್ದು, ಅಧಿವೇಶನ ಸಂದರ್ಭದಲ್ಲಿ ತಮಿಳುನಾಡು ಸಂಸದರು ಎತ್ತುವ ಪ್ರಶ್ನೆಗೆ ಉತ್ತರಿಸುವ ಬಗ್ಗೆ ಸಮಾಲೋಚನೆ ನಡೆಸಲಾಗಿದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಇದೇ ವೇಳೆ ತಿಳಿಸಿದರು.
ನಿಯೋಗ ಭೇಟಿ: ರಾಜ್ಯದ ಯೋಜನೆಗಳ ಬಗ್ಗೆ ಅಗತ್ಯ ಮಾಹಿತಿಯೊಂದಿಗೆ ಸಂಸತ್ ಅಧಿವೇಶನದ ವೇಳೆ ಕೇಂದ್ರ ಸಚಿವರನ್ನು ಸಂಸದರ ನಿಯೋಗದೊಂದಿಗೆ ಭೇಟಿ ಮಾಡಿ ಪ್ರಸ್ತಾವ ಸಲ್ಲಿಸಿದರೆ ಶೀಘ್ರ ಪರಿಹಾರ ಸಿಗಲಿದೆ ಎಂದು ಸಂಸದರು ಸಲಹೆ ನೀಡಿದ್ದಾರೆ ಎಂದು ಹೇಳಿದರು.
ಬೆಂಬಲ ಬೆಲೆ: ತೊಗರಿ, ಹೆಸರುಕಾಳು, ಕಬ್ಬು, ಭತ್ತ, ಈರುಳ್ಳಿ, ಟೊಮ್ಯಾಟೋ, ತೆಂಗು ಸೇರಿದಂತೆ ಇನ್ನಿತರ ಬೆಳೆಗಳಿಗೆ ಸಕಾಲದಲ್ಲಿ ಬೆಂಬಲ ಬೆಲೆ ದೊರಕುತ್ತಿಲ್ಲ. ಈ ಸಂಬಂಧ ಕೇಂದ್ರದ ಸಚಿವರನ್ನು ಭೇಟಿ ಮಾಡಿದ್ದು, ಬೆಂಬಲ ಬೆಲೆ ಪ್ರಕಟಿಸಲು ಕೇಂದ್ರದ ಗಮನ ಸೆಳೆಯಬೇಕೆಂದು ಕೃಷಿ ಸಚಿವ ಕೃಷ್ಣಭೈರೇಗೌಡ ಮನವಿ ಮಾಡಿದರು.
ಸಚಿವರಾದ ಆರ್.ವಿ.ದೇಶಪಾಂಡೆ, ಡಿ.ಕೆ.ಶಿವಕುಮಾರ್, ಕೃಷ್ಣಭೈರೇಗೌಡ, ಕೆ.ಜೆ.ಜಾರ್ಜ್, ಶಿವಶಂಕರರೆಡ್ಡಿ, ರಮೇಶ್ ಜಾರಕಿಹೊಳಿ, ವೆಂಕಟರಾವ್ ನಾಡಗೌಡ, ವೆಂಕಟರಮಣಪ್ಪ, ಡಿ.ಸಿ.ತಮ್ಮಣ್ಣ, ಸಿ.ಎಸ್.ಪುಟ್ಟರಾಜು, ಬಂಡೆಪ್ಪ ಕಾಶೆಂಪೂರ್, ಸರಕಾರದ ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್ ಹಾಜರಿದ್ದರು.
ಸಭೆಯಲ್ಲಿ ಸಂಸದರಾದ ಕರಡಿ ಸಂಗಣ್ಣ, ಪ್ರಕಾಶ್ ಹುಕ್ಕೇರಿ, ಪಿ.ಸಿ.ಮೋಹನ್, ಗದ್ದಿಗೌಡರ್, ಆಸ್ಕರ್ ಫರ್ನಾಂಡಿಸ್, ಕೆ.ಸಿ.ರಾಮಮೂರ್ತಿ, ಚಂದ್ರಶೇಖರ್, ಭಗವಂತ ಖೂಬಾ, ಕುಪೇಂದ್ರ ರೆಡ್ಡಿ, ಡಿ.ಕೆ.ಸುರೇಶ್, ಚಂದ್ರಪ್ಪ, ಮುದ್ದ ಹನುಮೇಗೌಡ, ಪ್ರಹ್ಲಾದ್ ಜೋಶಿ, ಶಿವರಾಮೇಗೌಡ, ಉಗ್ರಪ್ಪ, ಬಿ.ವಿ. ನಾಯಕ್, ಜಿ.ಎಂ.ಸಿದ್ದೇಶ್ವರ್ ಹಾಗೂ ಡಾ.ಎಲ್.ಹನುಮಂತಯ್ಯ ಭಾಗವಹಿಸಿದ್ದರು.