ವಿವಿ ಘಟಿಕೋತ್ಸವ ಸಮಾರಂಭದ ವೇದಿಕೆಯಲ್ಲಿ ಕುಸಿದ ಕೇಂದ್ರ ಸಚಿವ ಗಡ್ಕರಿ

Update: 2018-12-07 09:43 GMT

ಅಹ್ಮದ್‍ನಗರ್, ಡಿ.7: ಮಹಾರಾಷ್ಟ್ರದ ಅಹ್ಮದ್ ‍ನಗರದಲ್ಲಿ ಇಂದು ಮಹಾತ್ಮ ಫುಳೆ ಕೃಷಿ ವಿಶ್ವವಿದ್ಯಾಲಯದ ಘಟಿಕೋತ್ಸವ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ರಾಷ್ಟ್ರಗೀತೆ ನುಡಿಸುವಾಗ ಎದ್ದು ನಿಂತ ಸಂದರ್ಭ ಕುಸಿದಿದ್ದಾರೆ. ಅವರು ನೆಲಕ್ಕೆ ಬೀಳುವಷ್ಟರಲ್ಲಿ ವೇದಿಕೆಯಲ್ಲಿ ಅವರ ಪಕ್ಕದಲ್ಲಿಯೇ ಇದ್ದ ಮಹಾರಾಷ್ಟ  ರಾಜ್ಯಪಾಲ ಸಿ ವಿದ್ಯಾಸಾಗರ್ ರಾವ್  ಹಾಗೂ ಇತರರು ತಕ್ಷಣ ಬೀಳುವುದರಿಂದ ತಪ್ಪಿಸಿದರು.

ನಂತರ ಗಡ್ಕರಿಗೆ ಸಾವರಿಸಿಕೊಳ್ಳಲು ಸುಮಾರು ಹತ್ತು ನಿಮಿಷಗಳೇ ತಗಲಿದವು. ಅಲ್ಲಿ ಅವರಿಗೆ ಸಿಹಿತಿಂಡಿ ಹಾಗೂ ಸ್ವಲ್ಪ ನೀರನ್ನು ನೀಡಿ ನಂತರ  ಅಲ್ಲಿಂದ  ನೇರವಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಅಲ್ಲಿಂದ ಸ್ವಲ್ಪ ಹೊತ್ತಿನಲ್ಲಿಯೇ ಬಿಡುಗಡೆಗೊಂಡ ಗಡ್ಕರಿ ನಂತರ ಶಿರ್ಡಿಗೆ ಪ್ರಯಾಣ ಬೆಳೆಸಿದರು.

ತನ್ನ ಆರೋಗ್ಯ ಸ್ಥಿತಿ ಚೆನ್ನಾಗಿದೆ, ರಕ್ತದಲ್ಲಿ ಸಕ್ಕರೆಯಂಶ ಕಡಿಮೆಯಾಗಿದ್ದರಿಂದ ಹೀಗಾಯಿತು ಎಂದು ನಂತರ ಗಡ್ಕರಿ ಟ್ವೀಟ್ ಮಾಡಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News