ಬೆಂಗಳೂರು: ಮೊಬೈಲ್, ಪರ್ಸ್ ಕಳ್ಳನ ಬಂಧನ
Update: 2018-12-10 13:37 GMT
ಬೆಂಗಳೂರು, ಡಿ.10: ಅನ್ನಪೂರ್ಣೇಶ್ವರಿ ನಗರದ ಬಿಡಿಎ ಕಾಂಪ್ಲೆಕ್ಸ್ ಬಳಿಯ ರಸ್ತೆಗಳಲ್ಲಿ ಮೊಬೈಲ್, ಪರ್ಸ್ ಕದಿಯುತ್ತಿದ್ದ ಖದೀಮನನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ರಾತ್ರಿ ವೇಳೆ ಪ್ರಮೋದ್ ಎಂಬುವವರು ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಸಂದರ್ಭದಲ್ಲಿ ಪ್ರದೀಪ್, ತನ್ನಿಬ್ಬರ ಸ್ನೇಹಿತರೊಂದಿಗೆ ಬೈಕ್ನಲ್ಲಿ ಬಂದು ಕಳ್ಳತನ ಮಾಡಲು ಮುಂದಾಗಿದ್ದರು. ಕೂಡಲೇ ಪ್ರಮೋದ್ ಕಿರುಚಾಡಿದ್ದರಿಂದ ಕಳ್ಳತನ ಮಾಡಲು ಬಂದವರಲ್ಲಿ ಒಬ್ಬ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದಿದ್ದಾನೆ. ಉಳಿದ ಸ್ನೇಹಿತರು ಬೈಕ್ನಲ್ಲಿ ಪರಾರಿಯಾಗಿದ್ದಾರೆ.
ಅನ್ನಪೂರ್ಣೇಶ್ವರಿ ನಗರ ಪೊಲೀಸರು ಆರೋಪಿಯನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ. ಪರಾರಿಯಾಗಿರುವವರ ಪತ್ತೆಗಾಗಿ ಶೋಧ ನಡೆಸುತ್ತಿದ್ದಾರೆ.