ಬೆಂಗಳೂರು: ಪತಿಯ ಕಿರುಕುಳಕ್ಕೆ ಬೇಸತ್ತು ಪತ್ನಿ ಆತ್ಮಹತ್ಯೆ
Update: 2018-12-10 13:58 GMT
ಬೆಂಗಳೂರು, ಡಿ.10: ಶೀಲ ಶಂಕಿಸಿ ದಿನನಿತ್ಯ ಹೀಯಾಳಿಸುತ್ತಿದ್ದ ಗಂಡನ ವರ್ತನೆಯಿಂದ ಮನನೊಂದು ಮಹಿಳೆಯೊಬ್ಬಾಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆನ್ನಲಾದ ಘಟನೆ ನಗರದ ಬ್ಯಾಟರಾಯನಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನಾಯಂಡಹಳ್ಳಿಯ ನಿವಾಸಿ ರಾಧಾ ಎಂಬವರು ಆತ್ಮಹತ್ಯೆ ಮಾಡಿಕೊಂಡಿರುವ ಮಹಿಳೆ ಎಂದು ಪೊಲೀಸ್ ಮೂಲಗಳು ಹೇಳಿವೆ. ರಾಧಾ ಹಾಗೂ ಆನಂದ್ ದಂಪತಿಯಾಗಿದ್ದು, ನಾಯಂಡಹಳ್ಳಿಯಲ್ಲಿ ವಾಸವಾಗಿದ್ದರು. ಆನಂದ್ ಪತ್ನಿ ರಾಧಾ ಅವರ ಶೀಲ ಶಂಕಿಸಿ ಪ್ರತಿದಿನ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ.
ಗಂಡನ ಕಿರುಕುಳದಿಂದ ಮನನೊಂದಿದ್ದ ರಾಧಾ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.