ಫಿಲಿಪ್ಪೀನ್ಸ್‌ನಲ್ಲಿ ಭಾರತದ ಚೆಸ್ ಆಟಗಾರರ ಮೇಲೆ ಹಲ್ಲೆ

Update: 2018-12-11 04:55 GMT

ಕೋಲ್ಕತಾ, ಡಿ.10: ಮೂವರು ಭಾರತೀಯ ಚೆಸ್ ಆಟಗಾರರ ಮೇಲೆ ಫಿಲಿಪ್ಪೀನ್ಸ್‌ನ ಮಕಾಟಿ ನಗರದಲ್ಲಿ ಸ್ಥಳೀಯ ಗೂಂಡಾಗಳಿಂದ ಹಲ್ಲೆ ನಡೆದ ಘಟನೆ ವರದಿಯಾಗಿದೆ. ರವಿವಾರ ರಾತ್ರಿ ಈ ಘಟನೆ ನಡೆದಿದ್ದು, ಏಶ್ಯನ್ ಕಾಂಟಿನೆಂಟಲ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ತೆರಳಿದ್ದಾರೆ ಎನ್ನಲಾದ ಮೂವರು ಆಟಗಾರರು ಕುಡಿಯುವ ನೀರು ತರಲು ರಸ್ತೆಗಿಳಿದ ಸಮಯದಲ್ಲಿ, ಆಟಗಾರರು ತಂಗಿದ್ದ ಹೊಟೇಲ್‌ನಿಂದ 250 ಮೀಟರ್ ದೂರದಲ್ಲಿ ಈ ಘಟನೆ ನಡೆದಿದೆ. ಭಾರತದ ಅತ್ಯುನ್ನತ ರೇಟಿಂಗ್‌ನ ಚೆಸ್ ಆಟಗಾರ ವಿದಿತ್ ಗುಜರಾಥಿ, ಘಟನೆಯ ಬಳಿಕ ತಮ್ಮ ಫೇಸ್‌ಬುಕ್ ಪೇಜ್‌ನಲ್ಲಿ ತನ್ನಗಾದ ಕಹಿ ಅನುಭವ ಹಂಚಿಕೊಂಡಿದ್ದಾರೆ. ‘‘ನಾನು ಮತ್ತು ನನ್ನ ಸಹ ಆಟಗಾರರಾದ ಅಭಿಜಿತ್ ಕುಂಟೆ ಹಾಗೂ ಲಲಿತ್ ಬಾಬು ನೀರು ತರಲು ಹೊರಹೋದ ಸಮಯದಲ್ಲಿ ಅನಿರೀಕ್ಷಿತವಾಗಿ ಈ ಘಟನೆ ನಡೆಯಿತು. ಮಾರಕಾಯುಧಗಳನ್ನು ಹೊಂದಿದ್ದ ಸ್ಥಳೀಯ ಗೂಂಡಾಗಳು ನಮ್ಮ ಮೇಲೆ ದಾಳಿ ಮಾಡಿದರು. ತಪ್ಪಿಸಿಕೊಳ್ಳಲು ಪ್ರಯತ್ನಿಸಿದೆವು.ಆದರೆ ಅವರು ನಮ್ಮನ್ನು ಬೆನ್ನಟ್ಟಿದರು. ಆದರೂ ಹೇಗೋ ತಪ್ಪಿಸಿಕೊಂಡೆವು. ನಮಗೆ ಈ ಆಘಾತದಿಂದ ಇನ್ನೂ ಹೊರಬರಲಾಗುತ್ತಿಲ್ಲ’’ ಎಂದು ಅವರು ಬರೆದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News