ಪ್ರಧಾನಿ ಮೋದಿಯಂತೆ ಮಾಧ್ಯಮಗಳ ಮುಂದೆ ಮಾತನಾಡಲು ನಾನು ಹೆದರುತ್ತಿರಲಿಲ್ಲ: ಮನಮೋಹನ್ ಸಿಂಗ್

Update: 2018-12-19 05:56 GMT

ಹೊಸದಿಲ್ಲಿ, ಡಿ. 19: ಪ್ರಧಾನಿ ನರೇಂದ್ರ ಮೋದಿ ಮಾಧ್ಯಮವನ್ನು ಮಣಿಸಲು ಮುಂದಾಗಿದ್ದಾರೆ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಆಪಾದಿಸಿದ್ದಾರೆ. "ನನ್ನನ್ನು ಮೌನ ಪ್ರಧಾನಿ ಎಂದು ಪತ್ರಿಕೆಗಳು ಬಣ್ಣಿಸಿದ್ದವು. ಆದರೂ ನನಗೆ ಪತ್ರಿಕೆಗಳ ಜತೆ ಮಾತನಾಡಲು ಯಾವ ಭಯವೂ ಇರಲಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.

ಮೋದಿ ವಿರೋಧ ಪಕ್ಷದಲ್ಲಿದ್ದಾಗ ಅಂದಿನ ಪ್ರಧಾನಿಯನ್ನು ಮೌನಮೋಹನ ಎಂದು ಟೀಕಿಸಿದ್ದರು. ಆದರೆ ಈಗ ಮಾಧ್ಯಮಗಳಿಗೆ ಪ್ರಶ್ನೆಗಳನ್ನು ಕೇಳಲು ಅವಕಾಶ ನೀಡದಿರುವ ಬಗ್ಗೆ ವೀಕ್ಷಕರು ಮೋದಿಯನ್ನು ಲೇವಡಿ ಮಾಡುತ್ತಿರುವ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿಯ ಈ ಹೇಳಿಕೆ ವಿಶೆಷ ಮಹತ್ವ ಪಡೆದಿದೆ.

ತಮ್ಮ ಐದು ಸಂಪುಟಗಳ "ಚೇಂಜಿಂಗ್ ಇಂಡಿಯಾ" ಕೃತಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, "ನಾನು ಪತ್ರಿಕೆಗಳಿಗೆ ಹೆದರುವ ಪ್ರಧಾನಿ ಆಗಿರಲಿಲ್ಲ. ನಾನು ಮಾಧ್ಯಮಗಳನ್ನು ನಿಯತವಾಗಿ ಭೇಟಿಯಾಗುತ್ತಿದ್ದೆ. ಪ್ರತಿ ವಿದೇಶ ಪ್ರವಾಸ ಕೈಗೊಂಡಾಗಲೂ ವಾಪಸ್ಸಾದ ಬಳಿಕ ಪತ್ರಿಕಾಗೋಷ್ಠಿ ನಡೆಸುತ್ತಿದ್ದೆ. ಇಂಥ ಗೋಷ್ಠಿಗಳ ವಿವರಗಳೂ ಈ ಪುಸ್ತಕದಲ್ಲಿವೆ. ನಾನು ಮೌನ ಪ್ರಧಾನಿಯಾಗಿದ್ದೆ ಎಂದು ಜನ ಹೇಳುತ್ತಾರೆ. ಆದರೆ ಈ ಐದು ಸಂಪುಟಗಳೇ ಮಾತನಾಡುತ್ತವೆ. ಪ್ರಧಾನಿಯಾಗಿ ನನ್ನ ಸಾಧನೆಗಳನ್ನು ಹೇಳಿಕೊಂಡಿಲ್ಲ. ಈ ಸಂಪುಟಗಳಲ್ಲಿ ಎಲ್ಲ ಘಟನಾವಳಿಗಳಲ್ಲಿ ವಿವರಿಸಿದ್ದೇನೆ" ಎಂದು ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News