ಅನಂತಕುಮಾರ್ ಬದ್ಧತೆಯಿಂದ ಕೆಲಸ ಮಾಡುತ್ತಿದ್ದರು: ತೇಜಸ್ವಿನಿ ಅನಂತಕುಮಾರ್
ಬೆಂಗಳೂರು, ಡಿ.24: ಅನಂತಕುಮಾರ್ ಯಾವುದೇ ಕಾರ್ಯ ಮಾಡಬೇಕಾದರೂ ಬದ್ಧತೆಯಿಂದ ಮಾಡುತ್ತಿದ್ದರು ಎಂದು ಅದಮ್ಯ ಚೇತನ ಪ್ರತಿಷ್ಠಾನದ ಅಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್ ತಿಳಿಸಿದರು.
ಸೋಮವಾರ ನಗರದ ವಿವೇಕಾನಂದ ಶಾಲೆಯಲ್ಲಿ ನಡೆದ ಅನಂತ ಗಾನಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬೆಂಗಳೂರು ಕರಗಕ್ಕೆ ಪ್ರತಿ ಬಾರಿಯೂ ಭಾಗವಹಿಸುತ್ತಿದ್ದರು, ಆದರೆ, ಒಮ್ಮೆ ಅಧಿವೇಶನ ನಡೆಯುವ ಸಂದರ್ಭದಲ್ಲಿ ಕರಗ ನಡೆಯುತ್ತಿತ್ತು. ಅನಂತ ಕುಮಾರ್ ಅವರು ಅಧಿವೇಶನ ಮುಗಿಸಿಕೊಂಡು ಸಂಜೆ ವಿಮಾನಕ್ಕೆ ಬೆಂಗಳೂರಿಗೆ ಆಗಮಿಸಿ ಕರಗದಲ್ಲಿ ಭಾಗವಹಿಸಿ ಪುನಃ ಬೆಳಗ್ಗೆ ಅಧಿವೇಶಕ್ಕೆ ಹಾಜರಾಗಿದ್ದರು ಎಂದು ಅವರ ಬದ್ಧತೆಯನ್ನು ನೆನೆಪಿಸಿಕೊಂಡರು.
ಮಧ್ಯಮ ವರ್ಗದಲ್ಲಿ ಹುಟ್ಟಿ, ಕನ್ನಡ ಮಾಧ್ಯಮದಲ್ಲಿ ವಿದ್ಯಾಭ್ಯಾಸ ನಡೆಸಿ, ಅನೇಕ ಸಮಾಜ ಸೇವೆ ಮಾಡಿದ್ದಾರೆ. ಅವರು ಹಾಕಿಕೊಟ್ಟ ಹಾದಿಯಲ್ಲಿ ಅದಮ್ಯ ಚೇತನ ಪ್ರತಿಷ್ಠಾನ ಮುನ್ನಡೆಸಲಾಗುತ್ತಿದೆ ಎಂದು ಹೇಳಿದರು.
ಪ್ರತಿ ಹೊಸ ವರ್ಷಕ್ಕೆ ಒಂದು ಸಂಕಲ್ಪ ಕೈಗೊಳ್ಳುತ್ತಿದ್ದರು. ಅದರಂತೆ ಪ್ರತಿ ರವಿವಾರ ಗಿಡ ನೆಡುವ ಯೋಜನೆ ಹಮ್ಮಿಕೊಳ್ಳಲಾಯಿತು. ಪ್ರಸ್ತುತ 156ನೇ ವಾರ ಮುಗಿದಿದ್ದು, ಒಂದು ವಾರವೂ ತಪ್ಪಿಸದೆ ಗಿಡ ನೆಡಲಾಗುತ್ತಿದೆ. ಲಕ್ಷಾಂತರ ಜನರ ಸ್ನೇಹ, ಕೋಟ್ಯಂತರ ಅಭಿಮಾನಿ ಬಳಗ ಹೊಂದಿದ್ದರು. ಈ ಮಾಣಿಕ್ಯ ಐಕ್ಯವಾದರೂ, ಅವರು ಹಚ್ಚಿದ ದೀಪ ಪ್ರಜ್ವಲಿಸುತ್ತಿದೆ ಎಂದರು.