ಅಲೋಕ್ ವರ್ಮಾ ವಿರುದ್ಧ ಸಿಬಿಐ ತನಿಖೆ ಕೋರಿದ ಸಿವಿಸಿ ?
ಹೊಸದಿಲ್ಲಿ, ಜ. 13: ಅಲೋಕ್ ವರ್ಮಾ ವಿರುದ್ಧ ಇಲಾಖಾ ವಿಚಾರಣೆ ಮತ್ತು ಸ್ವತಃ ಸಿಬಿಐನಿಂದಲೇ ಅಪರಾಧ ತನಿಖೆ ವಿಚಾರಣೆಗೆ ಶಿಫಾರಸ್ಸು ಮಾಡಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲು ಕೇಂದ್ರ ವಿಚಕ್ಷಣಾ ಆಯೋಗ ನಿರ್ಧರಿಸಿದೆ ಎಂದು timesofindia.indiatimes.com ವರದಿ ಮಾಡಿದೆ.
"ವರ್ಮಾ ಎದುರಿಸುತ್ತಿರುವ ಆರೋಪಗಳ ಬಗ್ಗೆ ನಮ್ಮ ಪ್ರಾಥಮಿಕ ತನಿಖೆಯ ಹಿನ್ನೆಲೆಯಲ್ಲಿ ಈ ಬಗ್ಗೆ ವಿಸ್ತೃತವಾದ ತನಿಖೆಗೆ ಶಿಫಾರಸ್ಸು ಮಾಡುತ್ತಿದ್ದೇವೆ" ಎಂದು ಉನ್ನತ ಮೂಲಗಳು ಹೇಳಿವೆ.
ಮಾಂಸ ವ್ಯಾಪಾರಿ ಮೊಯಿನ್ ಖುರೇಷಿ ಪ್ರಕರಣದಲ್ಲಿ ಸಿಬಿಐ ಮುಖ್ಯಸ್ಥರಾಗಿದ್ದ ಅಲೋಕ್ ವರ್ಮಾ ಅವರನ್ನು ವಿಚಾರಣೆಗೆ ಗುರಿಪಡಿಸುವಂತೆಯೂ ಶಿಫಾರಸ್ಸು ಮಾಡಲಾಗುತ್ತಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.
ಸಿವಿಸಿ ಸುಪ್ರೀಂಕೋರ್ಟ್ಗೆ ಸಲ್ಲಿಸಿದ 300 ಪುಟಗಳ ವರದಿಯ ಹಿನ್ನೆಲೆಯಲ್ಲಿ ಪ್ರಧಾನಿ ನೇತೃತ್ವದ ಉನ್ನತಾಧಿಕಾರ ಸಮಿತಿ ವರ್ಮಾ ಅವರನ್ನು ಸಿಬಿಐ ಮುಖ್ಯಸ್ಥ ಹುದ್ದೆಯಿಂದ ವಜಾ ಮಾಡಿತ್ತು. ವರ್ಮಾ ವಿರುದ್ಧ ಇರುವ ಭ್ರಷ್ಟಾಚಾರ ಆರೋಪಗಳನ್ನು ಮತ್ತು ಸಿಬಿಐ ಪ್ರಕರಣಗಳಲ್ಲಿ ಹಸ್ತಕ್ಷೇಪ ಮಾಡಿದ ಆರೋಪದ ಬಗ್ಗೆಯೂ ತನಿಖೆ ನಡೆಯಬೇಕು ಎಂದು ಶಿಫಾರಸ್ಸು ಮಾಡಿದೆ.