ಅತ್ಯಾಚಾರ ಆರೋಪಿಗಳಿಗೆ ಕ್ಲೀನ್ ಚಿಟ್ ನೀಡಿದ ಪೊಲೀಸರು: ಆತ್ಮಹತ್ಯೆಗೆ ಶರಣಾದ ಸಂತ್ರಸ್ತೆ
ಲಕ್ನೋ, ಜ.15: ಇಬ್ಬರು ಅತ್ಯಾಚಾರ ಆರೋಪಿಗಳು ಖುಲಾಸೆಗೊಂಡ ನಂತರ ಅತ್ಯಾಚಾರ ಸಂತ್ರಸ್ತೆಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯಲ್ಲಿ ನಡೆದಿದೆ.
ತಮಗಾದ ಅನ್ಯಾಯದ ಬಗ್ಗೆ ಎಲ್ಲರಿಗೂ ತಿಳಿಸಲು ಮಹಿಳೆ ಹಾಗು ಆಕೆಯ ಪತಿ ಲಕ್ನೋದ ವಿಧಾನ ಭವನದ ಹೊರಭಾಗದಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದರು. ಪೊಲೀಸರು ತನಿಖೆಯನ್ನು ದುರ್ಬಲಗೊಳಿಸಿದ್ದಾರೆ ಎಂದು ಈ ಇಬ್ಬರೂ ಆರೋಪಿಸಿದ್ದರು.
ಕೆರ್ನಲ್ಗಂಜ್ ಪ್ರದೇಶದ ಶಂಕರ್ ದಯಾಳ್ ಮತ್ತು ಆತನ ಸಹೋದರ ಅಶೋಕ್ ಕುಮಾರ್ ಕಳೆದ ವರ್ಷದ ಆಗಸ್ಟ್ ನಲ್ಲಿ ತನ್ನ ಮೇಲೆ ಹಲವು ಬಾರಿ ಅತ್ಯಾಚಾರವೆಸಗಿದ್ದಾರೆ ಎಂದು ಸಂತ್ರಸ್ರೆ ಆರೋಪಿಸಿದ್ದಾರೆ. ಈ ಪ್ರಕರಣವನ್ನು ಮೊದಲು ಸ್ಥಳೀಯ ಪೊಲೀಸರು ನಂತರ ಜಿಲ್ಲಾ ಕ್ರೈಂ ಬ್ರಾಂಚ್ ತನಿಖೆ ನಡೆಸಿತ್ತು. ಎರಡೂ ವಿಭಾಗಗಳ ತನಿಖಾಧಿಕಾರಿಗಳು ಆರೋಪಿಗಳಿಗೆ ಕ್ಲೀನ್ ಚಿಟ್ ನೀಡಿದ್ದರು. ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.
ಮಹಿಳೆ ಆತ್ಮಹತ್ಯೆಗೆ ಶರಣಾದ ನಂತರ ಗೊಂಡಾದ ಎಸ್ಪಿ ಆರ್.ಪಿ. ಸಿಂಗ್ ತನಿಖಾಧಿಕಾರಿಗಳನ್ನು ಅಮಾನತುಗೊಳಿಸಿದ್ದಾರೆ.