ನಾವು ಯಾವ ಆಪರೇಷನ್‌ ಕಮಲವನ್ನೂ ಮಾಡಿಲ್ಲ: ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ

Update: 2019-01-17 14:27 GMT

ಬೆಂಗಳೂರು, ಜ. 17: ‘ಕಾಂಗ್ರೆಸ್-ಜೆಡಿಎಸ್‌ನವರು ಮೊದಲು ತಮ್ಮ ಆಂತರಿಕ ಜಗಳವನ್ನು ಸರಿಪಡಿಸಿಕೊಳ್ಳಲಿ. ಅದು ಬಿಟ್ಟು ಬಿಜೆಪಿಯ ಬಗ್ಗೆ ಮಾತನಾಡುವುದು ಬೇಡ. ನಾವು ಯಾವ ಆಪರೇಷನ್ ಕಮಲವನ್ನೂ ಮಾಡಿಲ್ಲ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸ್ಪಷ್ಟನೆ ನೀಡಿದ್ದಾರೆ.

ಗುರುವಾರ ಇಲ್ಲಿನ ಡಾಲರ್ಸ್‌ ಕಾಲನಿಯನಲ್ಲಿರುವ ತಮ್ಮ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಮುಂಬರುವ ಲೋಕಸಭಾ ಚುನಾವಣೆಯ ಸಿದ್ಧತೆ ಬಗ್ಗೆ ನಮ್ಮ ಪಕ್ಷದ ಶಾಸಕರೆಲ್ಲ ಸಭೆ ಸೇರಿ ಚರ್ಚೆ ನಡೆಸಿದ್ದೇವೆ ಎಂದು ಇದೇ ವೇಳೆ ತಿಳಿಸಿದರು.

ಕಾಂಗ್ರೆಸ್ ಪಕ್ಷದ ಮುಖಂಡರು ಸಂವಿಧಾನ ಮತ್ತು ನೈತಿಕತೆ ಪಾಠವನ್ನು ನಮಗೆ ಮಾಡುವುದು ಬೇಡ. ಎಸ್ಸೆಂ ಕೃಷ್ಣ ಅವರು ಮಹಾರಾಷ್ಟ್ರದ ರಾಜ್ಯಪಾಲರಾಗಿದ್ದ ಸಂದರ್ಭದಲ್ಲಿ ಕಾಂಗ್ರೆಸ್‌ನವರು ಏನೆಲ್ಲಾ ಮಾಡಿದ್ದಾರೆಂದು ಗೊತ್ತಿದೆ. ರಾಜಕೀಯ ಸಂತರಂತೆ ಮಾತನಾಡುವುದನ್ನು ಕಾಂಗ್ರೆಸ್ ಮುಖಂಡರು ಬಿಡಬೇಕು ಎಂದರು.

ನಮ್ಮ ಪಕ್ಷದ ಶಾಸಕರು ಎಲ್ಲಿಗೆ ಬೇಕಾದರೂ ಹೋಗುತ್ತಾರೆ ಅದನ್ನು ಕೇಳಲಿಕ್ಕೆ ಇವರ್ಯಾರು. ಮೊದಲು ತಮ್ಮ ಪಕ್ಷದ ಶಾಸಕರನ್ನು ಸರಿಯಾಗಿ ಇಟ್ಟುಕೊಳ್ಳಲಿ ಎಂದ ಅವರು, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜನ ಸಿದ್ದರಾಮಯ್ಯನವರನ್ನು ಸೋಲಿಸಿದರೂ ಅವರಿಗೆ ಇನ್ನೂ ಬುದ್ಧಿ ಬರಲಿಲ್ಲ ಎಂದು ವಾಗ್ದಾಳಿ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News